ಮೈಸೂರು: ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ತಾಯಿಗೆ ಚಿಕಿತ್ಸೆ ಕೊಡಿಸಲು ಮಗ ಆಸ್ಪತ್ರೆ ಅಲೆದರೂ ಬೆಡ್ ಸಿಗಲಿಲ್ಲ. ಇದರಿಂದ 3 ದಿನ ಕಾರಿನಲ್ಲೇ ನರಳಿದ ತಾಯಿ ಮೃತಪಟ್ಟಿರುವ ದಾರುಣ ಘಟನೆ ನಗರದಲ್ಲಿ ನಡೆದಿದೆ.
ಮಗ ಅನಿಲ್ ತಾಯಿಯ ಚಿಕಿತ್ಸೆಗಾಗಿ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಬೆಡ್ ಪಡೆಯಲು ಅಲೆದಾಡಿದ್ದಾರೆ. ಕೋವಿಡ್ ಪರೀಕ್ಷಾ ವರದಿ ಇಲ್ಲ , ಬೆಡ್ ಖಾಲಿ ಇಲ್ಲ ಎಂದು ಯಾವ ಆಸ್ಪತ್ರೆಗಳಲ್ಲೂ ದಾಖಲು ಮಾಡಿಕೊಂಡಿಲ್ಲ. ಕೊನೆಗೆ ನಿನ್ನೆ ಖಾಸಗಿ ಆಸ್ಪತ್ರೆಯೊಂದರಲ್ಲಿ ಕೋವಿಡ್ ಪರೀಕ್ಷಾ ವರದಿ ಬಂದ ನಂತರ ದಾಖಲು ಮಾಡಿಕೊಳ್ಳುತ್ತೇವೆ ಎಂದಿದ್ದಾರೆ. ಇಂದು ಕೊರೊನಾ ವರದಿ ಪಾಸಿಟಿವ್ ಬಂದಿದ್ದು, ಆಸ್ಪತ್ರೆಗೆ ದಾಖಲು ಮಾಡಿಕೊಳ್ಳಲು ನಿರಾಕರಿಸಿದ್ದಾರೆ.
ವಿಧಿ ಇಲ್ಲದೇ ಮಗ ತಾಯಿಯನ್ನು ಕರೆದುಕೊಂಡು ಹೋಗುವ ಸಮಯದಲ್ಲಿ ಸೋಂಕಿತೆ ಕಾರಿನಲ್ಲೆ ಮೃತಪಟ್ಟಿದ್ದಾರೆ. ಈಗ ಮೃತ ದೇಹವನ್ನು ಪಾಲಿಕೆಯ ಜಯನಗರದ ಅನಿಲ ಚಿತಗಾರಕ್ಕೆ ತರಲಾಗಿದೆ ಎಂದು ಮಗ ಅನಿಲ್ ಅಳಲು ತೋಡಿಕೊಂಡಿದ್ದಾರೆ.