ಮೈಸೂರು: ಕಳೆದ 3 ದಿನಗಳಿಂದ ಕಾಂಗ್ರೆಸ್ನ ಕೆಲ ಶಾಸಕರು ಮತ್ತು ಸಚಿವರು ನೀಡುತ್ತಿರುವ ಹೇಳಿಕೆಗಳಿಂದ ಬೇಸಗೊಂಡಿದ್ದಾರೆ ಎನ್ನಲಾಗ್ತಿರುವ ಸಿದ್ದರಾಮಯ್ಯ ಮಾಧ್ಯಮಗಳಿಗೆ ಯಾವುದೇ ರೀತಿಯ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ.
ಮೂರು ದಿನಗಳಿಂದ ಮೈಸೂರು ಭಾಗದಲ್ಲೇ ಇರುವ ಸಿದ್ದರಾಮಯ್ಯ, 2 ದಿನ ಮಡಿಕೇರಿಯ ರೆಸಾರ್ಟ್ನಲ್ಲಿ ಪುತ್ರನೊಂದಿಗೆ ವಿಶ್ರಾಂತಿಯಲ್ಲಿದ್ದರು. ನಿನ್ನೆ ರಾತ್ರಿ ಟಿ.ಕಾಟೂರಿನ ತಮ್ಮ ತೋಟದ ಮನೆಯಲ್ಲಿ ವಿಶ್ರಾಂತಿ ಪಡೆದು ಇಂದು ಮೈಸೂರು ವಿಮಾನ ನಿಲ್ದಾಣದಿಂದ ಹುಬ್ಬಳ್ಳಿಗೆ ತೆರಳಿದರು. ಈ ಸಂದರ್ಭದಲ್ಲಿ ಮಾಧ್ಯಮದವರು ಅವರನ್ನು ಮಾತನಾಡಿಸಲು ಯತ್ನಿಸಿದರು. ಆಗ ಮಾತನಾಡಲು ಏನು ಇಲ್ಲ ಎನ್ನುತ್ತ ಅವರು ಏರ್ಪೋರ್ಟ್ ಒಳಗೆ ಪ್ರವೇಶಿಸಿದರು.
ಕಾಂಗ್ರೆಸ್ನ ಚಿಕ್ಕಬಳ್ಳಾಪುರ ಶಾಸಕ ಕೆ ಸುಧಾಕರ್, ಗೃಹ ಸಚಿವರು ಎಂ ಬಿ ಪಾಟೀಲ್ ಅವರು ಸಿದ್ದರಾಮಯ್ಯ ಅವರು ಮತ್ತೆ ಮುಖ್ಯಮಂತ್ರಿ ಆಗಬೇಕೆನ್ನುವ ರೀತಿಯಲ್ಲಿ ಹೇಳಿಕೆ ನೀಡುತ್ತಿದ್ದಾರೆ. ಆದ್ರೆ ಡಿಸಿಎಂ ಪರಮೇಶ್ವರ್, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರು ಹೆಚ್ ಡಿ ಕುಮಾರಸ್ವಾಮಿಯೇ ಐದು ವರ್ಷ ಮುಖ್ಯಮಂತ್ರಿ ಆಗಿರುತ್ತಾರೆ ಎಂದು ಹೇಳುತ್ತಿದ್ದಾರೆ.
ಇವೆಲ್ಲ ವ್ಯತಿರಿಕ್ತ ಹೇಳಿಕೆಗಳಿಂದ ಸಿದ್ದರಾಮಯ್ಯ ಬೇಸರಗೊಂಡಿದ್ದಾರೆ ಎನ್ನಲಾಗ್ತಿದೆ. ನಿನ್ನೆ ಸಹ ಮಡಿಕೇರಿಯಲ್ಲಿ ಅವರು ಮಾಧ್ಯಮದವರ ಜೊತೆ ಮಾತನಾಡಲು ನಿರಾಕರಿಸಿದ್ದರು. ಸಿದ್ದರಾಮಯ್ಯರ ಈ ಮೌನ ರಾಜಕೀಯ ಕುತೂಹಲಕ್ಕೆ ಕಾರಣವಾಗಿದೆ.