ಮೈಸೂರು: ದಸರಾ ಹಿನ್ನೆಲೆಯಲ್ಲಿ ಸಾಕಷ್ಟು ಪ್ರವಾಸಿಗರು ಜಿಲ್ಲೆಗೆ ಆಗಮಿಸುತ್ತಾರೆ. ಈ ಹಿನ್ನೆಲೆಯಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ ಎಂದು ನಗರ ಪೊಲೀಸ್ ಕಮಿಷನರ್ ಡಾ.ಚಂದ್ರಗುಪ್ತ ತಿಳಿಸಿದ್ದಾರೆ.
ಇಂದು ನಡೆದ ಫಿರಂಗಿ, ಕುಶಾಲತೋಪು ತಾಲೀಮಿನಲ್ಲಿ ಭಾಗವಹಿಸಿ ನಂತರ ಮಾಧ್ಯಮಗಳೊಂದಿಗೆ ಅವರು ಮಾತನಾಡಿದರು. ರಾತ್ರಿ ಬೀಟ್ ವ್ಯವಸ್ಥೆ ಹಾಗೂ ಪ್ರಮುಖ ಸ್ಥಳಗಳಲ್ಲಿ ಸಿಸಿಟಿವಿ ಹೊಂದಿರುವ ಕಮಾಂಡಿಂಗ್ ವಾಹನವನ್ನು ಉಪಯೋಗಿಸಲಾಗುತ್ತಿದೆ. ನಗರದ ಪ್ರಮುಖ ಲಾಡ್ಜ್ ಹಾಗೂ ಹೋಟೆಲ್ಗಳಲ್ಲಿ ಹಾಗೂ ರೆಸಾರ್ಟ್ಗಳಲ್ಲಿ ವಾಸ್ತವ್ಯ ಹೂಡುವವರ ಮೇಲೆ ನಿಗಾ ಇಡಲಾಗುತ್ತಿದೆ ಎಂದರು.
ನಗರದಲ್ಲಿ ವಾಸವಿರುವ ವಿದೇಶಿಗರ ವಿಳಾಸವನ್ನು ಸಂಬಂಧಪಟ್ಟ ಠಾಣಾ ವ್ಯಾಪ್ತಿಯಲ್ಲಿ ಪರಿಶೀಲನೆ ನಡೆಸಲು ಸೂಚಿಸಲಾಗಿದೆ. ದಸರಾ ದೀಪಾಲಂಕಾರ ನೋಡಲು ಹೆಚ್ಚಿನ ಜನ ಆಗಮಿಸುವ ಹಿನ್ನೆಲೆಯಲ್ಲಿ ಕೋವಿಡ್ ನಿಯಮ ಪಾಲನೆಗೆ ಸೂಚಿಸಲಾಗಿದೆ. ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮವನ್ನು ಕೈಗೊಳ್ಳಲಾಗಿದೆ ಎಂದು ಹೇಳಿದರು.
ಇತ್ತೀಚೆಗೆ ವಾಣಿಜ್ಯ ಭವನಕ್ಕೆ ಹುಸಿ ಬಾಂಬ್ ಹಾಕುವ ಬೆದರಿಕೆ ಕರೆ ಬಂದಿದೆ. ಈ ಕರೆಯನ್ನು ಯಾರು ಬೇಕಾದರೂ ಮಾಡಬಹುದು. ಆದರೆ, ಅದು ಹುಸಿಯೋ ಅಥವಾ ನಿಜವೋ ಎಂದು ತಿಳಿಯಲು ಸದಾ ಸನ್ನದ್ದರಾಗಿರುತ್ತೇವೆ. ಮಾದಕ ವಸ್ತುಗಳ ವಿರುದ್ಧದ ಕಾರ್ಯಾಚರಣೆಯನ್ನು ನಿರಂತರವಾಗಿ ನಡೆಸುತ್ತಿದ್ದೇವೆ. ಈ ಬಗ್ಗೆ ಪ್ರತ್ಯೇಕ ತಂಡವನ್ನು ರಚನೆ ಮಾಡಿದ್ದೇವೆ ಎಂದು ಹೇಳಿದರು.
ಶ್ವಾನದಳವನ್ನು ಸಹ ಉಪಯೋಗಿಸುತ್ತಿದ್ದೇವೆ. ಬೇರೆ ಕಡೆಯಿಂದ ಬರುವ ಪ್ರವಾಸಿಗರ ಮೇಲೆ ಎಚ್ಚರವಹಿಸಲು ತಿಳಿಸಲಾಗಿದೆ. ಈಗಾಗಲೇ ಮಾದಕವಸ್ತುಗಳ ಸಪ್ಲೈ ಮಾಡುವ ಒಂದು ಗ್ಯಾಂಗ್ ಅನ್ನು ಅರೆಸ್ಟ್ ಮಾಡಲಾಗಿದೆ. ಇದು ನಿರಂತರವಾಗಿ ನಡೆಯುತ್ತಲೇ ಇರುತ್ತದೆ ಎಂದು ತಿಳಿಸಿದರು.
ಇದಲ್ಲದೆ ಗಸ್ತು ವ್ಯವಸ್ಥೆ ರಾತ್ರಿ 11 ಗಂಟೆಯಿಂದ ಬೆಳಗ್ಗೆ 6 ಗಂಟೆಯವರೆಗೆ ಇರುತ್ತದೆ. ನಂತರ ಬೆಳಗ್ಗೆ ನಗರ ಪೊಲೀಸ್ ಠಾಣೆಗಳು ಗಸ್ತು ವ್ಯವಸ್ಥೆಯನ್ನು ಮಾಡಲಿವೆ. ದಸರಾ ಹಿನ್ನೆಲೆಯಲ್ಲಿ ವ್ಯಾಪಕ ಪೊಲೀಸ್ ಬೀಟ್ ವ್ಯವಸ್ಥೆ ಹಾಗೂ ಆಯಕಟ್ಟಿನ ಸ್ಥಳಗಳಲ್ಲಿ ಸಿಸಿಟಿವಿ ಕಣ್ಗಾವಲು ಇರಲಿದೆ ಎಂದರು.
ಇದನ್ನೂ ಓದಿ: ಹೃದಯ ಪರೀಕ್ಷೆಗಾಗಿ ಮನೆ ಬಾಗಿಲಿಗೆ ಮೊಬೈಲ್ ವಾಹನ ವ್ಯವಸ್ಥೆ ಲೋಕಾರ್ಪಣೆ