ಮೈಸೂರು: ಜಿಲ್ಲೆಯಲ್ಲಿ ಪಾಸಿಟಿವ್ ಪ್ರಕರಣಗಳು ಹೆಚ್ಚಾದ ಹಿನ್ನೆಲೆ ಕೋವಿಡ್ನ ಸಾಮೂಹಿಕ ಪರೀಕ್ಷೆಯನ್ನು ರದ್ದುಗೊಳಿಸಿದ್ದು, ಅತೀ ಅಗತ್ಯವಿದ್ದರೆ ಮಾತ್ರ ಕೋವಿಡ್ ಪರೀಕ್ಷೆಗಳನ್ನು ಮಾಡಲಾಗುತ್ತಿದೆ.
ಮೈಸೂರು ಜಿಲ್ಲೆಯಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಾದ ಹಿನ್ನೆಲೆ ಭಯಭೀತರಾದ ಜನರು, ಕೊರೊನಾ ಪರೀಕ್ಷೆಗೆ ಸ್ವಯಂ ಪ್ರೇರಿತರಾಗಿ ಬರತೋಡಗಿದ್ದು, ಇದರಿಂದ ಟೆಸ್ಟಿಂಗ್ ಹೆಚ್ಚಾಗಿದೆ. ಈ ಮೂಲಕ ಪಾಸಿಟಿವ್ ಪ್ರಕರಣಗಳು ಜಾಸ್ತಿಯಾಗಿದ್ದು, ಇದರ ಜೊತೆಗೆ ಬೆಂಗಳೂರಿನಿಂದ ಸೋಂಕಿತರು ಹಳ್ಳಿ ಕಡೆಗೆ ಧಾವಿಸುತ್ತಿದ್ದಾರೆ. ಇದರಿಂದ ಹಳ್ಳಿಗಳಲ್ಲಿ ಸೋಂಕು ಹೆಚ್ಚಾಗುತ್ತಿದ್ದು ಸಾಮೂಹಿಕ ಪರೀಕ್ಷೆ ಮಾಡುವುದು ಕಷ್ಟವಾಗಿದೆ.
ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಅಗತ್ಯವಿದ್ದವರಿಗೆ ಮಾತ್ರ ಕೋವಿಡ್ ಪರೀಕ್ಷೆಗೆ ಮುಂದಾಗಿದ್ದು ರ್ಯಾಂಡಮ್ ಟೆಸ್ಟ್ಗಳನ್ನು ರದ್ದುಗೊಳಿಸಿದೆ. ಕಳೆದ ತಿಂಗಳು ನಿತ್ಯ 7 ಸಾವಿರದಿಂದ 8 ಸಾವಿರ ಕೋವಿಡ್ ಪರೀಕ್ಷೆಗಳನ್ನು ಮಾಡಲಾಗುತ್ತಿತ್ತು. ಈಗ ಕೇವಲ 3 ಸಾವಿರ ಪರೀಕ್ಷೆಗಳನ್ನು ಮಾಡಲಾಗುತ್ತಿದೆ ಎಂದು ಇಲ್ಲಿನ ಕೋವಿಡ್ ಮುಖ್ಯಸ್ಥ ಡಾ.ಚಿದಂಬರಂ ಈ ಟಿವಿ ಭಾರತ್ಗೆ ತಿಳಿಸಿದರು.