ಮೈಸೂರು : ಬೆಂಗಳೂರು - ಮೈಸೂರು ನಡುವಿನ ದಶಪಥ ಎಕ್ಸ್ಪ್ರೆಸ್ ಹೆದ್ದಾರಿಯ ಮಧ್ಯ ಹಾಗೂ ಅಕ್ಕಪಕ್ಕ ಅಳವಡಿಸಿರುವ ಕಬ್ಬಿಣದ ಕಂಬ, ಗ್ರಿಲ್ ಹಾಗೂ ತಡೆ ಗೊಡೆಗಳನ್ನು ಮುರಿದು ಕಳ್ಳತನ ಮಾಡಲಾಗುತ್ತಿದೆ. ನಿಮ್ಮದೇ ಹಣದಲ್ಲಿ ನಿರ್ಮಿಸಿರುವ ಹೆದ್ದಾರಿಯಲ್ಲಿ ಈ ರೀತಿ ಕಬ್ಬಿಣದ ವಸ್ತುಗಳನ್ನು ಕಳ್ಳತನ ಮಾಡುವುದು ಸರಿಯಲ್ಲ ಎಂದು ಸಂಸದ ಪ್ರತಾಪ್ ಸಿಂಹ ಮಾಧ್ಯಮಗಳ ಮುಂದೆ, ಕಬ್ಬಿಣದ ಕಳ್ಳರಿಗೆ ಮನವಿ ಮಾಡಿದ ಪ್ರಸಂಗ ಮೈಸೂರಿನಲ್ಲಿ ನಡೆದಿದೆ.
ಇಂದು ನಗರದ ಜಲದರ್ಶಿನಿ ಅತಿಥಿ ಗೃಹದಲ್ಲಿ, ಮೈಸೂರು ವಿಮಾನ ನಿಲ್ದಾಣದ ಪ್ರಾಧಿಕಾರದ ಹಿರಿಯ ಅಧಿಕಾರಿಗಳ ಸಭೆ ನಡೆಸಿದ ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಸಂಸದ ಪ್ರತಾಪ್ ಸಿಂಹ, ಕೇಂದ್ರ ಸರ್ಕಾರದ ಅನುದಾನದಿಂದ ಮೈಸೂರು ವಿಮಾನ ನಿಲ್ದಾಣದ ರನ್ ವೇ ವಿಸ್ತರಿಸಲು ಮುಂದಾಗಿದ್ದೇವೆ. ಜೊತೆಗೆ ನಂಜನಗೂಡು - ಮೈಸೂರು ನಡುವಿನ ವಿಮಾನ ನಿಲ್ದಾಣ ಬಳಿಯ ಹೆದ್ದಾರಿಯನ್ನು ವಿಸ್ತರಿಸಿ, ಸುಗಮ ಸಂಚಾರಕ್ಕೆ ಅನುಕೂಲ ಮಾಡುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗಿದೆ ಎಂದರು.
ದಶಪಥ ಹೆದ್ದಾರಿಯಲ್ಲಿ ಅಳವಡಿಸಿರುವ ಕಬ್ಬಿಣದ ಸಾಮಾಗ್ರಿಗಳ ಕಳ್ಳತನ : ಬೆಂಗಳೂರು - ಮೈಸೂರು ನಡುವಿನ ದಶಪಥ ಹೆದ್ದಾರಿಯೂ ದಕ್ಷಿಣ ಭಾರತದಲ್ಲೇ ಮೊದಲ ನಿರ್ಬಂಧಿತ ಹೆದ್ದಾರಿಯಾಗಿದೆ. ನಿಮ್ಮದೇ ಹಣದಲ್ಲಿ ಹೆದ್ದಾರಿ ನಿರ್ಮಾಣವಾಗಿದ್ದು, ಹೆದ್ದಾರಿ ಉಳಿಸಿಕೊಳ್ಳುವುದು ನಿಮ್ಮ ಜವಾಬ್ದಾರಿವಾಗಿದೆ. ಅದನ್ನು ಬಿಟ್ಟು ಹೆದ್ದಾರಿಯ ಅಕ್ಕಪಕ್ಕ ಹಾಗೂ ಮಧ್ಯದಲ್ಲಿ ಅಳವಡಿಸಿರುವ ಕಬ್ಬಿಣದ ಗ್ರಿಲ್, ತಡೆಗೊಡೆ, ವಿದ್ಯುತ್ ಕಂಬಗಳು ಸೇರಿದಂತೆ ಕಬ್ಬಿಣದ ವಸ್ತುಗಳನ್ನು ಕಳ್ಳರು ಕದಿಯುತ್ತಿದ್ದಾರೆ.
ನಿಮ್ಮ ಮನೆಯಲ್ಲಿರುವ ಕಬ್ಬಿಣ ಬೇಕಿದ್ದರೆ ಗುಜರಿಗೆ ಹಾಕಿ, ಅದನ್ನು ಬಿಟ್ಟು ಕಬ್ಬಿಣ ಕದಿಯಬೇಡಿ. ಪ್ರವೇಶ ಹಾಗೂ ನಿರ್ಗಮನ ನಿರ್ಬಂಧಿಸುವ ಸಲುವಾಗಿ ಹೆದ್ದಾರಿಯ ಎರಡು ಕಡೆ ಗ್ರಿಲ್ ಅಳವಡಿಸಿ ತಡೆಗೋಡೆ ನಿರ್ಮಾಣ ಮಾಡಲಾಗಿದೆ. ಈ ತಡೆಗೋಡೆಗೆ ಹಾಕಿರುವ ಕಬ್ಬಿಣವನ್ನು ಕದ್ದು ಗುಜರಿಗೆ ಹಾಕುವುದರಿಂದ ಆನೇಕ ಅಪಘಾತಗಳಿಗೆ ಕಾರಣವಾಗುತ್ತದೆ. ಇನ್ನು ಹೆದ್ದಾರಿಯ ಅಕ್ಕ ಪಕ್ಕದಲ್ಲಿ ಮಳೆ ಬಂದಾಗ ನೀರು ನಿಲ್ಲುವ ಬಗ್ಗೆ ಸಮಸ್ಯೆಗಳು ಕೇಳಿ ಬರುತ್ತಿದ್ದು. ಅದನ್ನು ಸರಿಪಡಿಸಲಾಗುವುದು ಎಂದು ಇದೇ ಸಂದರ್ಭದಲ್ಲಿ ಪ್ರತಾಪ್ ಸಿಂಹ ಹೇಳಿದರು.
ಗ್ಯಾರಂಟಿಗಳಿಗೆ ಕಂಡಿಷನ್ ಹಾಕಬೇಡಿ : ಚುನಾವನೆ ಪೂರ್ವದಲ್ಲಿ ಕಾಂಗ್ರೆಸ್ ಪಕ್ಷ ಐದು ಗ್ಯಾರಂಟಿ ಯೋಜನೆಗಳನ್ನು ಘೋಷಣೆ ಮಾಡುವಾಗ ಯಾವುದೇ ಕಂಡಿಷನ್ ಹಾಕಿಲ್ಲ. ಈಗ ಯಾವ ಕಂಡಿಷನ್ ಇಲ್ಲದೆ ಗ್ಯಾರಂಟಿ ಜಾರಿ ಮಾಡಿ. ನನಗೂ ಫ್ರೀ ನಿಮಗೂ ಫ್ರೀ ಎಂದು ಹೇಳಿದ ಸಿದ್ದರಾಮಯ್ಯನವರೇ ತಮ್ಮ ಮಾತಿನ ಮೇಲೆ ಒತ್ತಡವಿದೆ. ಈ ಒತ್ತಡವನ್ನು ಅವರೇ ನಿಭಾಯಿಸಿಕೊಂಡು, ಯಾವ ಷರತ್ತು ಇಲ್ಲದೇ ಗ್ಯಾರಂಟಿ ಜಾರಿ ಮಾಡಿ ಎಂದು ಪ್ರತಾಪ್ ಸಿಂಹ ಆಗ್ರಹಿಸಿದರು.
ಜೊತೆಗೆ ಕೋವಿಡ್ ಸಂದರ್ಭದಲ್ಲಿ ಚಾಮರಾಜನಗರ ಆಸ್ಪತ್ರೆಯಲ್ಲಿ ನಡೆದ ಆಕ್ಸಿಜನ್ ದುರಂತ, ಬಿಟ್ ಕಾಯಿನ್ ಹಗರಣ, ಪಿಎಸ್ ಐ ಹಗರಣ ಹಾಗೂ 40% ಕಮಿಷನ್ ಆರೋಪದ ಬಗ್ಗೆ ಸಮಗ್ರ ತನಿಖೆ ಮಾಡಿ ತಪ್ಪಿತಸ್ಥರನ್ನ ಜೈಲಿಗೆ ಹಾಕಿ. ಆ ಮೂಲಕ ಸ್ವಚ್ಚ ಆಡಳಿತವನ್ನು ನೀವು ನೀಡಿ. ನಿಮ್ಮ ಮೇಲೆ ಜನ ಬಹಳ ನಿರೀಕ್ಷೆ ಇಟ್ಟಿದ್ದಾರೆ. ಆ ನಿರೀಕ್ಷೆಗಳನ್ನು ಉಳಿಸಿಕೊಳ್ಳಿ ಎಂದು ಪ್ರತಾಪ್ ಸಿಂಹ ಟಾಂಗ್ ಕೊಟ್ಟರು.
ಇನ್ನು ಅಧಿವೇಶನ ಆರಂಭವಾಗಬೇಕು. ಅಧಿವೇಶನ ಆರಂಭವಾದ ಮೇಲೆ ಹೊಸ ಸರ್ಕಾರ ಬಜೆಟ್ ಮಂಡಿಸುತ್ತದೆ. ಆ ಸಂದರ್ಭದಲ್ಲಿ ನಮ್ಮ ಪಕ್ಷದಿಂದ ವಿರೋಧ ಪಕ್ಷದ ನಾಯಕರು ಯಾರು ಎಂಬುದನ್ನು ತೀರ್ಮಾನ ಮಾಡುತ್ತೇವೆ, ಎಂದು ಇದೇ ಸಮಯದಲ್ಲಿ ಮಾಧ್ಯಮಗಳ ಪ್ರಶ್ನೆಗೆ ಸಂಸದರು ಉತ್ತರ ನೀಡಿದರು.
ಇದನ್ನೂ ಓದಿ : ಕಾಂಗ್ರೆಸ್ನ ಪಂಚ ಗ್ಯಾರಂಟಿ ಯೋಜನೆ.. ಎಲ್ಲರಿಗೂ 200 ಯೂನಿಟ್ ಫ್ರೀ ವಿದ್ಯುತ್ .. ಗೃಹ ಲಕ್ಷ್ಮಿ ಆಗಸ್ಟ್ 15ರಿಂದ ಜಾರಿ!