ಮೈಸೂರು: ಕಲಬುರಗಿ ಮೇಯರ್ ಚುನಾವಣೆಯಲ್ಲಿ ಕಾಂಗ್ರೆಸ್ ಜೊತೆ ಮೈತ್ರಿ ಬಗ್ಗೆ ನನ್ನ ಜೊತೆ ಮಲ್ಲಿಕಾರ್ಜುನ ಖರ್ಗೆ ಮಾತನಾಡಿದ್ದಾರೆ. ಮೊದಲು ನಿಮ್ಮ ಪಕ್ಷದ ನಾಯಕರ ಜೊತೆ ಮಾತನಾಡಿ ಎಂದು ಖರ್ಗೆಗೆ ಸಲಹೆ ನೀಡಿದ್ದೇನೆ ಎಂದು ಮಾಜಿ ಪ್ರಧಾನಿ ದೇವೇಗೌಡರು ಮೈಸೂರಿನಲ್ಲಿ ಹೇಳಿದ್ರು.
ಪುಸ್ತಕ ಬಿಡುಗಡೆ ಬಗ್ಗೆ ಚರ್ಚೆ ಮಾಡಲು ಮೈಸೂರಿಗೆ ಆಗಮಿಸಿದ್ದ ವೇಳೆ ಮಾಧ್ಯಮಗಳ ಜೊತೆ ಮಾತನಾಡಿ, ಕಲಬುರಗಿಯಲ್ಲಿ ಏಳು ಸ್ಥಾನಗಳಲ್ಲಿ ಸ್ಪರ್ಧೆ ಮಾಡಿದ್ದೆವು. ಅದರಲ್ಲಿ ನಾಲ್ಕು ಸ್ಥಾನವನ್ನು ಗೆದ್ದಿದ್ದೇವೆ. ಇದು ಹೆಚ್.ಡಿ.ಕುಮಾರಸ್ವಾಮಿ ಅವರ ಶ್ರಮದ ಫಲವಾಗಿದೆ. ಎರಡು ಸ್ಥಾನಗಳಲ್ಲಿ ಮಾರ್ಜಿನ್ ಇಂದ ಸೋತಿದ್ದೇವೆ ಅಷ್ಟೇ. ಉತ್ತರ ಕರ್ನಾಟಕದಲ್ಲಿ ಜೆಡಿಎಸ್ ಪಕ್ಷದ ಶಕ್ತಿ ಏನು? ಎಂದು ಕೇಳುವವರಿಗೆ ಉತ್ತರ ಇದಾಗಿದೆ ಎಂದರು.
ಇದನ್ನೂ ಓದಿ: ಹೆಚ್ಚು ಸ್ಥಾನ ಗೆದ್ದರೂ ಬಿಜೆಪಿಗೆ ನುಂಗಲಾರದ ತುತ್ತಾದ ಹು-ಧಾ ಪಾಲಿಕೆ ಉಪಮೇಯರ್ ಆಯ್ಕೆ!
ಜಿ.ಟಿ.ದೇವೇಗೌಡ ಕಾಂಗ್ರೆಸ್ ಸೇರುವ ಬಗ್ಗೆ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು, ಜಿ.ಟಿ.ದೇವೇಗೌಡರು ರಾಜೀನಾಮೆ ಕೊಟ್ಟಿಲ್ಲ,ಇನ್ನೂ ಜೆಡಿಎಸ್ನಲ್ಲೇ ಇದ್ದಾರೆ. ಪಕ್ಷ ಬಿಟ್ಟಾಗ ನಾನು ಅದರ ಬಗ್ಗೆ ಮಾತನಾಡುತ್ತೇನೆ. ಅವರನ್ನು ಉಳಿಸಿಕೊಳ್ಳುವುದು ಈಗಿನ ಪ್ರಶ್ನೆ ಅಲ್ಲ. ಅವರು ಸಿದ್ದರಾಮಯ್ಯ ಹಾಗೂ ಯಡಿಯೂರಪ್ಪ ಅವರ ಮನೆಗೆ ಕ್ಷೇತ್ರದ ವಿಚಾರವನ್ನು ಚರ್ಚೆ ಮಾಡಲು ಹೋಗಿದ್ದಾರೆ. ಅದಕ್ಕೆ ನಾನು ಪ್ರತಿಕ್ರಿಯೆ ನೀಡುವುದಿಲ್ಲ ಎಂದರು.