ಮೈಸೂರು: ನಾಡಿನ ಹೆಮ್ಮೆಯ ಬಾಲಪ್ರತಿಭೆ ಚಿರಂಜೀವಿ ರಾಹುಲ್ ವೆಲ್ಲಾಲ್ ಅವರ ಸುಮಧುರ ಗಾಯನವು ಕೇಳುಗರ ಮನ ಗೆದ್ದಿತು. ನಾಡಹಬ್ಬ ಮೈಸೂರು ದಸರಾ ಅಂಗವಾಗಿ ಅರಮನೆ ಆವರಣದಲ್ಲಿ ಆಯೋಜಿಸಿರುವ ಸಾಂಸ್ಕೃತಿಕ ಕಾರ್ಯಕ್ರಮದ ಮೂರನೇ ದಿನವಾದ ಇಂದು ಚಿರಂಜೀವಿ ರಾಹುಲ್ ವೆಲ್ಲಾಳ್ ಅವರು ತಮ್ಮ ಸಿರಿಕಂಠದ ಗಾಯನದಿಂದ ಎಲ್ಲರನ್ನೂ ಮೋಡಿ ಮಾಡಿದರು.
![Cultural event as part of Mysore Dasara](https://etvbharatimages.akamaized.net/etvbharat/prod-images/kn-mys-05-culture-programme-vis-ka10003_19102020210251_1910f_1603121571_864.jpg)
ಕಾರ್ಯಕ್ರಮದಲ್ಲಿ ಮೊದಲಿಗೆ ನವರಾತ್ರಿಯ ವಿದ್ಯಾದೇವತೆಯಾದ ಸರಸ್ವತಿಗೆ ನಮಿಸುತ್ತ ಸರಸ್ವತಿ ನಮೋಸ್ಥುತೆ ಎಂಬ ಜಿ.ಎನ್. ಬಾಲಸುಬ್ರಹ್ಮಣ್ಯಂ ಅವರ ಪ್ರಸಿದ್ಧ ಕೃತಿಯಿಂದ ಪ್ರಾರಂಭಿಸಿದರು. ನಂತರ ಅನ್ನಪೂರ್ಣೆ ವಿಶಾಲಾಕ್ಷಿ ಎಂಬ ಸಾಮರಾಗದ ಕೃತಿಯನ್ನು ಮನೋಜ್ಞವಾಗಿ ಹಾಡಿದರು.
![Cultural event as part of Mysore Dasara](https://etvbharatimages.akamaized.net/etvbharat/prod-images/kn-mys-05-culture-programme-vis-ka10003_19102020210251_1910f_1603121571_116.jpg)
ಸಂಗೀತ ಕಛೇರಿಯ ಪ್ರಮುಖ ರಾಗವಾಗಿ ರಾಗಬಿಲಹರಿಯನ್ನು ಪ್ರಸ್ತುತ ಪಡಿಸಿ ಶ್ರೀ ಜಯಚಾಮರಾಜೇಂದ್ರ ಒಡೆಯರ್ ಅವರ ಶ್ರೀ ಚಾಮುಂಡೇಶ್ವರಿ ಪಾಲಯಮಾಂ ಎಂಬ ಜನಪ್ರಿಯ ಕೃತಿಯನ್ನು ಪ್ರಸ್ತುತ ಪಡಿಸಿದರು. ನಂತರ ಕೆಲವು ಪ್ರಸಿದ್ಧ ಜನಪ್ರಿಯ ದಾಸರ ಕೀರ್ತನೆಗಳನ್ನು ಇಂಪಾಡಿ ಹಾಡುವ ಮೂಲಕ ಪ್ರೇಕ್ಷಕರ ಗಮನ ಸೆಳೆದರು. ಅವರೊಡನೆ ಸಹಕಲಾವಿದರಾಗಿ ಪಿಟೀಲು ವಿದ್ವಾಂಸರಾದ ವಿದ್ವಾನ್ ತುಮಕೂರು ಯಶಸ್ವಿ, ಮೃದಂಗದಲ್ಲಿ ವಿದ್ವಾನ್ ಡಾ.ಡಿ.ವಿ.ಪ್ರಹ್ಲಾದರಾವ್ ಹಾಗೂ ಮೊರ್ಸಿಂಗ್ನಲ್ಲಿ ವಿದ್ವಾನ್ ವಿಕ್ರಮ್ ಭಾರದ್ವಾಜ್ ಕಲೆಯು ಸಂಗೀತಪ್ರಿಯರ ಮೆಚ್ಚುಗೆಗೆ ಪಾತ್ರವಾಯಿತು.