ಮೈಸೂರು: ಲಾಕ್ಡೌನ್ ಸಡಿಲಿಕೆ ನಂತರ ಇಂದಿನಿಂದ ಬಸ್ ಸಂಚಾರ ಆರಂಭವಾಗಿದ್ದು, ಹಲವಾರು ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ.
ಮೈಸೂರಿನ ಗ್ರಾಮಾಂತರ ಬಸ್ ನಿಲ್ದಾಣ ಹಾಗೂ ಜಿಲ್ಲೆಯ ತಾಲೂಕು ಕೇಂದ್ರಗಳಿಂದ ಇಂದು ಬೆಳಿಗ್ಗೆ 7 ಗಂಟೆಯಿಂದ 100 ಬಸ್ಗಳ ಸಂಚಾರ ಆರಂಭಿಸಲಾಗಿದೆ. ನಗರದಿಂದ ಬೆಂಗಳೂರು, ಚಾಮರಾಜನಗರ, ಹಾಸನ, ತುಮಕೂರು, ಶಿವಮೊಗ್ಗ ಸೇರಿದಂತೆ ಸಂಜೆ 7 ಗಂಟೆಯ ಒಳಗೆ ತಲುಪಲು ಸಾಧ್ಯವಾಗುವ ಜಿಲ್ಲೆಗಳಿಗೆ ಬಸ್ ಸಂಚಾರ ಆರಂಭಿಸಲಾಗಿದೆ. ಉತ್ತರ ಕರ್ನಾಟಕ ಜಿಲ್ಲೆಗಳಾದ ಹುಬ್ಬಳ್ಳಿ, ಬೆಳಗಾವಿ ಕಡೆ ಬಸ್ ಸಂಚಾರ ಇರುವುದಿಲ್ಲ. ಜೊತೆಗೆ ಹೊರ ರಾಜ್ಯಗಳಿಗೂ ಬಸ್ ಸಂಚಾರ ಇರುವುದಿಲ್ಲ.
ಏನೆಲ್ಲಾ ಮುನ್ನೆಚ್ಚರಿಕೆ?
ಕೊರೊನಾ ಸೋಂಕು ಹರಡದಂತೆ ನಿನ್ನೆಯಿಂದಲೇ ಬಸ್ಗಳನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಲಾಗಿದ್ದು, ಪ್ರಯಾಣಿಕರಿಗೆ ಥರ್ಮಲ್ ಸ್ಕ್ರೀನಿಂಗ್ ಜೊತೆಗೆ ಬಸ್ ಹತ್ತುವಾಗ ಸ್ಯಾನಿಟೈಸರ್ ಮಾಡಲಾಗುತ್ತಿದ್ದು, ಇದಕ್ಕೂ ಮುನ್ನ ಟಿಕೆಟ್ ಪಡೆಯುವಾಗ ಪ್ರತಿಯೊಬ್ಬ ಪ್ರಯಾಣಿಕ ತನ್ನ ವಿಳಾಸ, ಮೊಬೈಲ್ ನಂಬರ್ ಕಡ್ಡಾಯವಾಗಿ ನೀಡಬೇಕು.