ಮೈಸೂರು: ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಎಂದು ಹೇಳಿದ್ದಕ್ಕೆ ಆಶಾ ಕಾರ್ಯಕರ್ತೆಯ ಮೇಲೆ ಹಲ್ಲೆಗೆ ಯತ್ನಿಸಿದ ಘಟನೆ ಅಲೀಂ ನಗರದಲ್ಲಿ ನಡೆದಿದೆ.
ನಗರದ ಬನ್ನಿ ಮಂಟಪದ ಸರ್ಕಾರಿ ಆಸ್ಪತ್ರೆಯ ಆಶಾ ಕಾರ್ಯಕರ್ತೆಯಾಗಿರುವ ಸುಮಯಾ ಫಿರ್ದೋಶ್ ಎಂಬುವರ ಮೇಲೆ ಅಲೀಂ ನಗರದ ಪುಂಡ ಯುವಕರು ಹಲ್ಲೆಗೆ ಯತ್ನಿಸಿದ್ದಾರೆ. ಇನ್ನು ಸುಮಯಾ ಫಿರ್ದೋಶ್, ರಸ್ತೆಯಲ್ಲಿ ಓಡಾಡುವಾಗ ಮಾಸ್ಕ್ ಹಾಕಿಕೊಳ್ಳಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಎಂದು ಮೆಹಬೂಬ್, ಖಲೀಲಾ ಮತ್ತು ಜೀಸನ್ ಎಂಬುವವರಿಗೆ ಬುದ್ದಿ ಹೇಳಿದ್ದರು. ಇದರಿಂದ ಕೋಪಗೊಂಡ ಯುವಕರು ಆಶಾ ಕಾರ್ಯಕರ್ತೆಯ ಮೇಲೆ ಹಲ್ಲೆಗೆ ಯತ್ನಿಸಿದ್ದು, ತಕ್ಷಣ ಅಕ್ಕಪಕ್ಕದವರು ಬಂದು ಸಮಾಧಾನ ಪಡಿಸಿದ್ದಾರೆ.
ಇನ್ನು ಈ ಸಂಬಂಧ ಎನ್.ಆರ್.ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ಎಫ್ಐಆರ್ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.