ಮಂಡ್ಯ : ಕುರುಬ ಜನಾಂಗದವರು ಜೆಡಿಎಸ್ ಸೀಲ್ಗೆ ಸೇರುವುದಿಲ್ಲ. ಆದ್ರೆ, ನಾನು ಯಾವ ಪಕ್ಷದವನೂ ಅಲ್ಲ, ಸ್ವತಂತ್ರ ವ್ಯಕ್ತಿಯಾಗಿದ್ದೇನೆ. ನಾನು ಯಾರಿಗೂ ಕೇರ್ ಮಾಡಲ್ಲ ಎಂದು ಮಾಜಿ ಸಚಿವ ವರ್ತೂರು ಪ್ರಕಾಶ್ ಗುಡುಗಿದರು.
ಜಿಲ್ಲೆಯ ಮಳವಳ್ಳಿ ತಾಲೂಕಿನ ಮೂಗನಕೊಪ್ಪಲಿನಲ್ಲಿ ಕನಕ ಸಮುದಾಯದ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಾನು ನನ್ನ ಸಮಾಜಕ್ಕೆ ಮಾತ್ರ ಬೆಲೆ ಕೊಡುವುದು. ಮಳವಳ್ಳಿಯಲ್ಲಿ ನನ್ನ ಅಭಿಮಾನಿಗಳು ಸಾವಿರಾರು ಸಂಖ್ಯೆಯಲ್ಲಿದ್ದಾರೆ ಎಂದರು. ಜೆಡಿಎಸ್ ಪಕ್ಷಕ್ಕೆ ನನ್ನ ಕತ್ತು ಕತ್ತರಿಸಿದರೂ ಹೋಗುವುದಿಲ್ಲ. ಕಾಂಗ್ರೆಸ್, ಜೆಡಿಎಸ್, ಬಿಜೆಪಿ ಎನ್ನುವುದು ಮುಖ್ಯವಲ್ಲ. ಸಮಾಜದ ಪರ ಯಾರು ಇರುತ್ತಾರೋ ಅವರ ಪರ ನಾವು ಇರಬೇಕು ಎಂದರು.
ಶಿವಣ್ಣ ವಿರುದ್ಧ ಕಿಡಿ : ಸಿದ್ದರಾಮಯ್ಯ ಅವರನ್ನು ಕರೆದಿಲ್ಲ ಎಂದು ಅಪಪ್ರಚಾರ ಮಾಡುತ್ತಿದ್ದಾರೆ. ಅವರಿಗೆ ಮಳವಳ್ಳಿಗೆ ಬರಲು ಇಷ್ಟವಿದೆ. ಆದರೆ, ಮಳವಳ್ಳಿಯವರೇ ಅವರನ್ನು ಬರದೆ ಇರದ ಹಾಗೆ ಮಾಡಿದ್ದಾರೆ. ಶಿವಣ್ಣ ಅವರನ್ನು ಮನೆಯಿಂದ ಹೊರಗಡೆ ಹಾಕುವವರೆಗೆ ನಮ್ಮಪ್ಪನಾಣೆಗೂ ಸಿದ್ದರಾಮಯ್ಯ ಉದ್ಧಾರ ಆಗುವುದಿಲ್ಲ. ಸಿದ್ದರಾಮಯ್ಯ ಅವರು ಹೇಳಿದ ಹಾಗೆ ಕೇಳುತ್ತಾರೆ. ಅವನು ಹೇಳಿದ ಕಾರಣ ಸಿದ್ದರಾಮಯ್ಯ ಇಲ್ಲಿಗೆ ಬಂದಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ನನಗೂ ಜೆಡಿಎಸ್ ಪಕ್ಷಕ್ಕೂ ಆಗಲ್ಲ : ನಾನು ಜೆಡಿಎಸ್ ಪಕ್ಷದ ಪರವಾಗಿ ಮಾತನಾಡಲು ಬಂದಿಲ್ಲ. ನನಗೂ ಜೆಡಿಎಸ್ ಪಕ್ಷಕ್ಕೂ ಆಗಲ್ಲ. ನನ್ನ ಕ್ಷೇತ್ರದಲ್ಲಿ ನನ್ನ ಎದುರಾಳಿ ಜೆಡಿಎಸ್. ಆದರೆ, ಅನ್ನದಾನಿ ಒಳ್ಳೆಯವರು, ನನ್ನ ಸ್ಮೇಹಿತ. ಹೀಗಾಗಿ, ಅವರಿಗೆ ಎಲ್ಲರೂ ಸಹಾಯ ಮಾಡಬೇಕು ಎಂದು ಮನವಿ ಮಾಡಿದರು.
![Kuruba community gave sheep to Annadani](https://etvbharatimages.akamaized.net/etvbharat/prod-images/kn-mnd-03-02-kuri-nidi-gowrava-avb-ka10026_03102021141032_0310f_1633250432_1020.jpg)
ಶಾಸಕ ಅನ್ನದಾನಿಗೆ ಬಂಡೂರು ಕುರಿ ನೀಡಿ ಗೌರವಿಸಿದ ಕುರುಬ ಸಮುದಾಯ : ಮೂಗನಕೊಪ್ಪಲು ಗ್ರಾಮದಲ್ಲಿ ಕನಕ ಸಮುದಾಯ ಭವನದ ಶಂಕುಸ್ಥಾಪನೆಗೆ ಶಾಸಕ ಅನ್ನದಾನಿಯವರು ಸಾಕಷ್ಟು ಶ್ರಮವಹಿಸಿದ್ದರು. ಈ ಹಿನ್ನೆಲೆಯಲ್ಲಿ ಕುರುಬ ಸಮುದಾಯದ ಜನರು, ಶಾಸಕರಿಗೆ ಬಂಡೂರು ಕುರಿ, ಕೋಲು ನೀಡಿ, ಕಂಬಳಿ ಹೊದಿಸಿ ಗೌರವಿಸಿದರು. ಇದೇ ವೇಳೆ ಹಾಲು ಮತದ ಸಂಪ್ರದಾಯದಂತೆ ಗ್ರಾಮೀಣಾಭಿವೃದ್ಧಿ ಸಚಿವ ಕೆ ಎಸ್ ಈಶ್ವರಪ್ಪ ಹಾಗೂ ಸಚಿವ ಭೈರತಿ ಬಸವರಾಜ್ ಸೇರಿದಂತೆ ಹಲವರಿಗೆ ಗೌರವಿಸಲಾಯಿತು.
ಇದನ್ನೂ ಓದಿ: ಬಿಜೆಪಿ ಕೋರ್ ಕಮಿಟಿ ಸಭೆ ಆರಂಭ : ಯಾರಿಗೆ ಸಿಗುತ್ತೆ ಉಪ ಸಮರದ ಟಿಕೆಟ್?