ಮಂಡ್ಯ: ಜಿಲ್ಲೆಯ ಹಿರಿಯ ರಾಜಕಾರಣಿ, ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ, ಆ್ಯಕ್ಸಿಜನ್ ನೀಡುವ ಮೂಲಕ ಜನರ ನೆರವಿಗೆ ಮುಂದಾಗಿದ್ದಾರೆ. ಮೊನ್ನೆಯಷ್ಟೇ ಜಿಲ್ಲೆಯ ಸಂಸದೆ ಸುಮಲತಾ ಅಂಬರೀಶ್ ಅವರು ಜಂಬೋ ಸಿಲಿಂಡರ್ ಆಕ್ಸಿಜನ್ ಸಪ್ಲೆ ಮಾಡುವ ವಾಗ್ದಾನ ನೀಡಿ, ಅದರಂತೆ ಜಿಲ್ಲೆಗೆ ಅತ್ಯಗತ್ಯವಾಗಿರುವ ಜೀವವಾಯುವನ್ನು ಕಳುಹಿಸಿಕೊಟ್ಟಿದ್ದರು.
ಮಂಡ್ಯ ಜಿಲ್ಲೆಗೆ 100 ಜಂಬೋ ಆಕ್ಸಿಜನ್ ಸಿಲಿಂಡರ್ಗಳು ಮತ್ತು ಆರೋಗ್ಯ ಕಾರ್ಯಕರ್ತರಿಗಾಗಿ 10 ಸಾವಿರ ಎನ್-95 ಮಾಸ್ಕ್ ವಿತರಿಸಲು ಮಾಜಿ ಸಿಎಂ ಎಸ್.ಎಂ.ಕೃಷ್ಣ ಮುಂದಾಗಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಕೆ.ಸಿ.ನಾರಾಯಣಗೌಡ ಮೂಲಕ ಈ ನೆರವು ಸಕಾಲಕ್ಕೆ ಜನಕ್ಕೆ ತಲುಪುವ ವ್ಯವಸ್ಥೆ ಮಾಡಲು ಎಸ್.ಎಂ.ಕೃಷ್ಣ ನಿರ್ಧರಿಸಿದ್ದಾರೆ.
![SM Krishna to give 100 jumbo oxygen cylinder to manday](https://etvbharatimages.akamaized.net/etvbharat/prod-images/kn-bng-05-smk-letter-to-mandya-dc-script-7208080_08052021160336_0805f_1620470016_746.jpg)
ಮಂಡ್ಯ ಜಿಲ್ಲೆಯ ಜನತೆಗೆ ಕೋವಿಡ್ ನೆರವು ನೀಡುವ ಬಗ್ಗೆ ಮಾಜಿ ಸಿಎಂ ಎಸ್.ಎಂ.ಕೃಷ್ಣ ಮಂಡ್ಯ ಜಿಲ್ಲಾಧಿಕಾರಿಗೆ ಪತ್ರ ಬರೆದು ತಿಳಿಸಿದ್ದಾರೆ. ಹೀಗಾಗಿ ಜಿಲ್ಲೆಯ ಜನತೆಗೆ ಕೋವಿಡ್ ಸಂಕಷ್ಟ ಕಾಲದಲ್ಲಿ ಪ್ರಭಾವಿ ನಾಯಕರು ನೆರವಿನ ಹಸ್ತ ಚಾಚಿರುವುದಕ್ಕೆ ಸಾರ್ವಜನಿಕರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.