ಮಂಡ್ಯ : ಪ್ರೀತಿಸಿ ಮದುವೆಯಾದ ನವಜೋಡಿ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಹಾಗೂ ಮಕ್ಕಳ ಸಮಿತಿ ಸದಸ್ಯರ ಬೇಜವಾಬ್ದಾರಿಯಿಂದ ದೂರ ದೂರ ಇರುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ಕಳೆದ ಆ.28 ರಂದು ಮಂಡ್ಯ ತಾಲೂಕಿನ ಹಾಲ್ಕೆರೆ ಗ್ರಾಮದ ಲಿಂಗಪ್ಪ ಹಾಗೂ ವೃತ್ತುಶ್ರೀ ಪ್ರೀತಿಸಿ ವಿವಾಹವಾಗಿದ್ದರು. ಅಲ್ಲದೆ ಮಂಡ್ಯ ಸಬ್ರಿಜಿಸ್ಟರ್ ಕಚೇರಿಯಲ್ಲಿ ವಿವಾಹ ನೋಂದಣಿ ಕೂಡ ಮಾಡಿಸಲಾಗಿತ್ತು. ಆದರೆ ಯುವತಿ ಮನೆಯವರು ಯುವತಿಗೆ ಇನ್ನೂ 18 ವರ್ಷ ತುಂಬಿಲ್ಲ ಎಂದು ಯುವತಿಯ ಜನನ ಪ್ರಮಾಣ ಪತ್ರ ಕೊಟ್ಟು ದೂರು ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಯುವತಿಯನ್ನು ಮಂಡ್ಯದ ಬಾಲ ನ್ಯಾಯಮಂಡಳಿ ವಶಕ್ಕೆ ನೀಡಿದೆ.
ಓದಿ : ಮಂಡ್ಯ: ಕಬ್ಬಿನ ಗದ್ದೆಯಲ್ಲಿ ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆ
ಬಾಲ್ಯ ವಿವಾಹ ಆಗುವುದು ತಪ್ಪು ಎಂದು ನಮಗೂ ಗೊತ್ತಿದೆ. ಆಕೆಯ ಎಸ್ಎಸ್ಎಲ್ಸಿ ಅಂಕಪಟ್ಟಿಯಲ್ಲಿರುವ ಜನ್ಮ ದಿನಾಂಕದ ಪ್ರಕಾರ 18 ವರ್ಷ 7 ತಿಂಗಳು ತುಂಬಿದೆ. ಆದರೆ ಹುಡುಗಿಯ ತಂದೆ ಜನನ ಪ್ರಮಾಣ ಪತ್ರ ನೀಡಿ ಆಕೆಯನ್ನು ಬಾಲಮಂದಿರದಲ್ಲಿ ಇರುವಂತೆ ಮಾಡಿದ್ದಾರೆ. ನನಗೆ ನನ್ನ ಪತ್ನಿಯನ್ನು ಕಳುಹಿಸಿಕೊಟ್ಟರೆ ಸಾಕು ಎಂದು ನವ ವಿವಾಹಿತ ಲಿಂಗಪ್ಪ ಮನವಿ ಮಾಡಿಕೊಂಡಿದ್ದಾನೆ.
ಈ ಬಗ್ಗೆ ಮಂಡ್ಯ ನ್ಯಾಯಾಲಯ ಕೂಡ ಯುವತಿ ಮೇಜರ್ ಆಗಿದ್ದು, ಆಕೆ ಯಾರ ಜೊತೆ ಹೋಗಬಯಸುತ್ತಾಳೋ ಅವರ ಜೊತೆ ಕಳುಹಿಸಿಕೊಡುವಂತೆ ಆದೇಶಿಸಿದೆ. ಆದರೆ ಯುವತಿಯನ್ನು ಕಳುಹಿಸದೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ಮಕ್ಕಳ ಸಮಿತಿ ಒಬ್ಬರ ಮೇಲೆ ಒಬ್ಬರು ದೂರುತ್ತಾ ಯುವತಿಯನ್ನು ಬಾಲ ಮಂದಿರದಲ್ಲಿ ಬಂಧಿಯಾಗಿಸಿದ್ದಾರೆ.