ಮಂಡ್ಯ: ಮೈ ಶುಗರ್ ಪ್ರಕರಣ ದಿನದಿಂದ ದಿನಕ್ಕೆ ರಂಗು ಪಡೆಯುತ್ತಿದೆ. ಹೋರಾಟಗಾರರು ನಿನ್ನೆಯಷ್ಟೇ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ ಬಳಿಕ ಜೆಡಿಎಸ್ ಶಾಸಕರು ಸಕ್ರಿಯರಾಗಿ ಇಂದು ಸಿಎಂ ಅವರ ಭೇಟಿ ಮಾಡಿದ್ದಾರೆ.
ಮೈ ಶುಗರ್ ವ್ಯಾಪ್ತಿಯ ಜೆಡಿಎಸ್ ಶಾಸಕರಾದ ಸಿ.ಎಸ್. ಪುಟ್ಟರಾಜು, ರವೀಂದ್ರ ಶ್ರೀ ಕಂಠಯ್ಯ, ಡಿ.ಸಿ. ತಮ್ಮಣ್ಣಾ, ಡಾ. ಕೆ ಅನ್ನದಾನಿ ಸೇರಿದಂತೆ ರೈತ ಮುಖಂಡರು ಸಿಎಂ ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಕಾರ್ಖಾನೆಯನ್ನು ಸರ್ಕಾರಿ ಸ್ವಾಮ್ಯದಲ್ಲೇ ಉಳಿಸಿಕೊಂಡು ಸರ್ಕಾರ ಮುನ್ನಡೆಸಿಕೊಂಡು ಹೋಗಬೇಕು ಎಂದು ಮನವಿ ಸಲ್ಲಿಸಿದ್ದಾರೆ.
ರಾಜ್ಯ ಸರ್ಕಾರ ಮೈಶುಗರ್ ಕಾರ್ಖಾನೆಯನ್ನು ಖಾಸಗೀಕರಣ ಅಥವಾ ಒ ಆ್ಯಂಡ್ ಎಂ ಆಧಾರದಲ್ಲಿ ನೀಡಲು ತೀರ್ಮಾನಿಸಿ ಸಭೆ ನಡೆಸಿತ್ತು. ಆದರೆ, ಹೋರಾಟಗಾರರು ಈ ಎರಡೂ ತೀರ್ಮಾನಕ್ಕೆ ವಿರೋಧಿಸಿ, ಸರ್ಕಾರದ ಅಧೀನದಲ್ಲಿ ಕಾರ್ಖಾನೆ ನಡೆಸುವಂತೆ ಹೋರಾಟ ಮಾಡಿದ್ದರು.
ಸದ್ಯ ಕುಮಾರಸ್ವಾಮಿ ಸೂಚನೆ ಮೇರೆಗೆ ಸಿಎಂ ಯಡಿಯೂರಪ್ಪ ಅವರನ್ನು ಜೆಡಿಎಸ್ ಶಾಸಕರು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಉಸ್ತುವಾರಿ ಸಚಿವರಾದ ನಾರಾಯಣಗೌಡ, ಶಿವರಾಮ್ ಹೆಬ್ಬಾರ್ ಸಹ ಇದ್ದರು. ಈ ಬಗ್ಗೆ ಚರ್ಚಿಸಿ ತೀರ್ಮಾನ ಪ್ರಕಟಿಸುವುದಾಗಿ ಸಿಎಂ ಭರವಸೆ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ.