ಮಂಡ್ಯ: ಬಿದ್ದ ಮಣ್ಣಲ್ಲೇ ಗೆಲುವು ಸಾಧಿಸಲು ಗೌಡರ ಕುಟುಂಬ ಯೋಜನೆ ರೂಪಿಸಿದೆ. ಲೋಕ ಸಮರದ ಸೋಲಿನಿಂದ ಮೇಲೆ ಬರಲು ಹವಣಿಸುತ್ತಿದ್ದು, ವಿಧಾನಸಭಾ ಚುನಾವಣೆಯಲ್ಲಿ ಗೌಡರ ಕುಟುಂಬದಿಂದ ಕೆ.ಆರ್.ಪೇಟೆ ಕ್ಷೇತ್ರದಿಂದ ಸ್ಪರ್ಧೆ ಮಾಡುವುದು ಬಹುತೇಕ ಖಚಿತ ಎಂದು ಹೇಳಲಾಗುತ್ತಿದೆ.
ಜೆಡಿಎಸ್ ಮುಖಂಡ ಕುಮಾರ್ ಮಾತನಾಡಿದರು. ಜೆಡಿಎಸ್ ಕಾರ್ಯಕರ್ತರು ನಿಖಿಲ್ ಕುಮಾರಸ್ವಾಮಿ ಅಥವಾ ಗೌಡರ ಪುತ್ರಿ ಅನುಸೂಯ ಅವರ ಸ್ಪರ್ಧೆಗೆ ಕುಮಾರಸ್ವಾಮಿ ಮೇಲೆ ಒತ್ತಡ ಹಾಕುತ್ತಿದ್ದಾರೆ. ಜೆಡಿಎಸ್ಗೆ ಮೋಸ ಮಾಡಿ ಹೋದ ನಾರಾಯಣಗೌಡರಿಗೆ ಹಾಗೂ ಬಿಜೆಪಿಗೆ ತಕ್ಕ ಪಾಠ ಕಲಿಸಲು ಗೌಡರ ಕುಟುಂಬವೇ ಸರಿ ಎಂಬ ನಿರ್ಧಾರಕ್ಕೆ ಕಾರ್ಯಕರ್ತರು ಬಂದಿದ್ದಾರೆ ಎಂದು ಹೇಳಲಾಗಿದೆ.
ನಿಖಿಲ್ ಕುಮಾರಸ್ವಾಮಿ ಅಥವಾ ಅನಸೂಯ ಅವರ ಸ್ಪರ್ಧೆಗೆ ಕಣ ಸಿದ್ಧ ಮಾಡಲು ಯೋಜನೆ ರೂಪಿಸಲಾಗಿದೆ. ಒಂದೊಮ್ಮೆ ಸ್ಥಳೀಯ ಕೂಗು ಕೇಳಿ ಬಂದರೆ ದೇವೇಗೌಡರ ಪುತ್ರಿ ಅನಸೂಯ ಕೆ.ಆರ್.ಪೇಟೆ ತಾಲೂಕಿಗೆ ಮದ್ವೆ ಆಗಿರುವ ಹಿನ್ನೆಲೆ ಅವರೇ ಸ್ಪರ್ಧೆ ಮಾಡಿದರೆ ಉತ್ತಮ ಎಂಬ ಮಾತುಗಳು ಕೇಳಿ ಬಂದಿವೆ.
ಅನಸೂಯ ಅವರು ಕ್ಷೇತ್ರದ ಜನರ ಜೊತೆಗೆ ಉತ್ತಮ ಸಂಬಂಧ ಹೊಂದಿದ್ದಾರೆ. ಒಡನಾಟ ಹೊಂದಿದ್ದಾರೆ. ಹೀಗಾಗಿ ಅವರೇ ಸ್ಪರ್ಧೆ ಮಾಡಿದರೆ ಗೆಲುವು ನಿಶ್ಚಿತ ಎಂಬ ನಿರ್ಧಾರಕ್ಕೆ ಕಾರ್ಯಕರ್ತರು ಬಂದಿದ್ದಾರೆ. ಹೀಗಾಗಿ ಒತ್ತಡವನ್ನೂ ಹಾಕಿದ್ದಾರೆ ಎಂದು ಹೇಳಲಾಗಿದೆ. ಹೀಗಾಗಿ ಮಾಜಿ ಸಿಎಂ ಕುಮಾರಸ್ವಾಮಿ ಇಂದು ಕೆ.ಆರ್.ಪೇಟೆಗೆ ಆಗಮಿಸುತ್ತಿದ್ದು, ಕಾರ್ಯಕರ್ತರ ಅಭಿಪ್ರಾಯ ಸಂಗ್ರಹ ಮಾಡಲಿದ್ದಾರೆ.