ಮಂಡ್ಯ: ಡಿಕೆಶಿಗೆ ದರೋಡೆ ಮಾಡೋದಕ್ಕೆ ನಾವು ಹೇಳಿದ್ವಾ? ಇದಕ್ಕೆಲ್ಲ ನಾನು ಹೊಣೆಯಾ? ಹೀಗಂತಾ ಮೈಸೂರಿನ ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಹೇಳಿದ್ರಂತೆ ಎಂದು ಮಾಜಿ ಸಚಿವ ಎನ್. ಚಲುವರಾಯಸ್ವಾಮಿ ಹೊಸ ಬಾಂಬ್ ಸಿಡಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇದರ ಬಗ್ಗೆ ನನಗೆ ಸತ್ಯ ಗೊತ್ತಿಲ್ಲ. ಸತ್ಯಗೊತ್ತಿಲ್ಲದೇ ನಾನು ಮಾತನಾಡೋದು ತಪ್ಪು. ಹೆಚ್ಡಿಕೆಯ ಆ ಹೇಳಿಕೆ ಬಗ್ಗೆ ಯಾರೋ ಆ ರೀತಿ ಹೇಳುತ್ತಿದ್ದರು ಎಂದು ತಮ್ಮ ಮಾತಿನಿಂದ ಜಾರಿಗೊಂಡರು.
ಹೆಚ್ಡಿಕೆಯ ಸಿಎಂ ಪಟ್ಟ ಉಳಿಸಲು ಡಿಕೆಶಿ ಎಲ್ಲರನ್ನೂ ಎದುರು ಹಾಕಿಕೊಂಡರು. ಇವತ್ತು ಡಿಕೆಶಿ ಜೊತೆಯಲ್ಲಿ ಕುಮಾರಸ್ವಾಮಿ ನಿಲ್ಲಲಿಲ್ಲ. ಕುಮಾರಸ್ವಾಮಿ ಅವರಿಗೆ ಇಂತಹ ಕಷ್ಟ ಬಂದಿದ್ರೆ ಡಿಕೆಶಿ ಠಾಣೆ ಹತ್ತಿರಾನೇ ಕೂರುತ್ತಿದ್ರು. ಆದ್ರೆ, ಹೆಚ್ಡಿಕೆ ಮಾಡಿದ್ದು ಏನು? ಒಕ್ಕಲಿಗ ಸಂಘಟನೆಗಳಿಂದ ನಡೆದ ಹೋರಾಟಕ್ಕೂ ಬೆಂಬಲ ಮಾಡಲಿಲ್ಲ ಎಂದು ಹರಿಹಾಯ್ದರು.
ಡಿ.ಕೆ.ಶಿವಕುಮಾರ್ ಮಾಡಬಾರದ ತಪ್ಪು ಮಾಡಿಲ್ಲ. ಬಿಜೆಪಿ ಜೊತೆ ಜೆಡಿಎಸ್ ಹೊಂದಾಣಿಕೆ ಮಾಡಿಕೊಳ್ಳಲು ಡಿಕೆಶಿ ಬಿಡಲಿಲ್ಲ. ಕಾಂಗ್ರೆಸ್ ರಕ್ಷಣೆ ಮಾಡಿಕೊಳ್ಳಲು ನಿಂತಿದ್ರು. ಈ ಸಿಟ್ಟು ಬಿಜೆಪಿ ನಾಯಕರಿಗೆ ಇತ್ತು. ಈ ಹಿಂದೆ ದೇವೇಗೌಡ್ರ ಕುಟುಂಬಕ್ಕೂ ಡಿಕೆಶಿಗೂ ವೈಮನಸ್ಸಿತ್ತು ಎಂದು ಪರೋಕ್ಷವಾಗಿ ಡಿಕೆಶಿ ಬಂಧನಕ್ಕೆ ದೇವೇಗೌಡರ ಕುಟುಂಬ ಕಾರಣ ಎಂದರು.
ದೇವೇಗೌಡ್ರು ಹೇಳೋದೆಲ್ಲ ಸುಳ್ಳು. ಅವರಿಂದ ಅನೇಕರಿಗೆ ನೋವಾಗಿದೆ. ಜನರಿಗೆ ಮನವರಿಕೆ ಆಗುವ ವರೆಗೂ ಇದು ನಡೆಯುತ್ತಲೇ ಇರುತ್ತೆ. ಜನರಿಗೆ ಅರ್ಥವಾದಾಗ ಎಲ್ಲವೂ ಸರಿಹೋಗುತ್ತೆ. ಆ ದಿನ ಬೇಗ ಬರುತ್ತೆ ಎಂದ ಅವರು, ಜಿ.ಟಿ.ದೇವೇಗೌಡ್ರು ಜೆಡಿಎಸ್ ನಿಂದ ಅಂತರ ಕಾಯ್ದುಕೊಂಡಿದ್ದಾರೆ. ಶ್ರೀನಿವಾಸ್ ಕೂಡ ಸಿಡಿದೆದ್ದು ಹಲವು ವಿಚಾರ ಪ್ರಸ್ತಾಪ ಮಾಡಿದ್ದಾರೆ. ಜೆಡಿಎಸ್ ವರಿಷ್ಠರು ಯಾರೇ ಹೋದ್ರೂ, ಬಂದ್ರೂ ತೆಲೆಕೆಡಿಸಿಕೊಳ್ಳಲ್ಲ ಎಂದರು.