ಗಂಗಾವತಿ (ಕೊಪ್ಪಳ): 2009ರಲ್ಲಿ ಗಂಗಾವತಿ ತಾಲೂಕಿನ ಆನೆಗೊಂದಿಯ ತಳವಾರ ಘಟ್ಟದಲ್ಲಿ ನಡೆದಿದ್ದ ನಿರ್ಮಾಣ ಹಂತದಲ್ಲಿದ್ದ ಸೇತುವೆ ಕುಸಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಇಲ್ಲಿನ ಜೆಎಂಎಫ್ಸಿ ನ್ಯಾಯಾಲಯವು ಗುತ್ತಿಗೆದಾರನಿಗೆ ಶಿಕ್ಷೆ ವಿಧಿಸಿ ಆದೇಶಿಸಿದೆ.
2009ರಲ್ಲಿ ಗಂಗಾವತಿ-ಹೊಸಪೇಟೆ ಸಂಪರ್ಕ ಕಲ್ಪಿಸುವ ಸೇತುವೆ ನಿರ್ಮಾಣ ಹಂತದಲ್ಲಿದ್ದಾಗ ಕುಸಿದು ಬಿದ್ದು 8 ಜನ ಸಾವಿಗೀಡಾಗಿದ್ದರು. ಈ ಸಂಬಂಧ ಹೈದರಾಬಾದ್ ಮೂಲದ ಪ್ರಧಾನ ಗುತ್ತಿಗೆದಾರ ಬಿ.ಎಸ್.ರೆಡ್ಡಿಗೆ 21.60 ಲಕ್ಷ ರೂಪಾಯಿ ದಂಡ ಹಾಗೂ ಸೂಪರ್ ವೈಸರ್ ಆಗಿದ್ದ ಪ್ರತಾಪ್ ರೆಡ್ಡಿಗೆ ದಂಡ ಹಾಗೂ ವಿವಿಧ ಐಪಿಸಿ ಕಲಂಗಳಡಿ ಪ್ರತ್ಯೇಕ ಜೈಲು ಶಿಕ್ಷೆ ವಿಧಿಸಲಾಗಿದೆ. ಅಂದರೆ ಬಿ.ಎಸ್.ರೆಡ್ಡಿಗೆ ಐಪಿಸಿ ಕಲಂ 336ರಡಿ 2 ತಿಂಗಳು, ಕಲಂ 337ರಡಿ 3 ತಿಂಗಳು, ಕಲಂ 338ರಡಿ 6 ತಿಂಗಳು ಹಾಗೂ ಕಲಂ 304(A)ರಡಿ 1 ವರ್ಷ ಆರು ತಿಂಗಳು ಸಜೆ ವಿಧಿಸಲಾಗಿದೆ. ಸೂಪರ್ ವೈಸರ್ ಪ್ರತಾಪ ರೆಡ್ಡಿಗೆ ಕಲಂ 336ರಡಿ ಎರಡು ತಿಂಗಳು ಸಾದಾ ಜೈಲು ಶಿಕ್ಷೆ ವಿಧಿಸಿದೆ.
ಘಟನೆಯಲ್ಲಿ ಸಾವನ್ನಪ್ಪಿದ 8 ಜನರ ಕುಟುಂಬಕ್ಕೆ ತಲಾ ಎರಡೂವರೆ ಲಕ್ಷ ರೂ. ಪರಿಹಾರ, ಗಂಭೀರವಾಗಿ ಗಾಯಗೊಂಡ ಮೂವರಿಗೆ ತಲಾ 25 ಸಾವಿರ ರೂ. ಹಾಗೂ ಸಾಧಾರಣ ಗಾಯಗೊಂಡ 34 ಜನರಿಗೆ ತಲಾ ಎರಡೂವರೆ ಸಾವಿರ ರೂ.ನಂತೆ ಪರಿಹಾರ ನೀಡುವ ಸಂಬಂಧ ಗುತ್ತಿಗೆದಾರರಿಗೆ ಒಟ್ಟು 21.60 ಲಕ್ಷ ರೂ. ದಂಡ ವಿಧಿಸಲಾಗಿದೆ.
ಜೆಎಂಎಫ್ಸಿ ನ್ಯಾಯಾಲಯದ ನ್ಯಾಯಾಧೀಶರಾ ಆರ್.ಎಂ.ನದಾಫ್ ತೀರ್ಪು ನೀಡಿದ್ದಾರೆ. ಸರ್ಕಾರದ ಪರವಾಗಿ ಸರ್ಕಾರಿ ಸಹಾಯಕ ಅಭಿಯೋಜಕ ವಿಜಯೇಂದ್ರ ಪ್ರಭು ವಾದ ಮಂಡಿಸಿದ್ದರು.