ಕೊಪ್ಪಳ: 'ನಿಮಗೆ ಅಗತ್ಯವಿಲ್ಲದಿದ್ದರೆ ಇಲ್ಲಿ ಇಡಿ, ಅಗತ್ಯವಿದ್ದರೆ ತೆಗೆದುಕೊಳ್ಳಿ', ಈ ಬರಹವಿರುವ ಸಣ್ಣ ಪೆಟ್ಟಿಗೆಯೊಂದು ನಗರದ ಸಿಂಪಿ ಲಿಂಗಣ್ಣ ರಸ್ತೆಯಲ್ಲಿ ಗಮನ ಸೆಳೆಯುತ್ತಿದೆ. 'ಕರುಣೆಯ ಗೋಡೆ' ಎಂಬ ಹೆಸರಿನ ಈ ಪೆಟ್ಟಿಗೆಯಲ್ಲಿ ಅಗತ್ಯವಿಲ್ಲದ ವಸ್ತುಗಳನ್ನಿಟ್ಟು ಹೋದರೆ, ಅದನ್ನು ಅಗತ್ಯವಿರುವವರು ತೆಗೆದುಕೊಂಡು ಹೋಗಿ ಉಪಯೋಗಿಸುತ್ತಾರೆ. ಈ ಮೂಲಕ ಸಹಾಯ ಮಾಡಲು ಅನುಕೂಲ ಮಾಡಿಕೊಡುತ್ತಿದೆ ಈ ಕರುಣೆಯ ಗೋಡೆ.
ಬಡವರಿಗೆ ಇದರಿಂದ ನೆರವಾಗುತ್ತದೆ ಎಂಬ ಉದ್ದೇಶದಿಂದ, ಯೂರೋಪ್ ಟೈಲರ್ ಶಾಪ್ ಮಾಲೀಕ ಅಯೂಬ್ ಹಾಗೂ ಸ್ನೇಹಿತರು ಸೇರಿಕೊಂಡು ಇದನ್ನು ಮಾಡಿಸಿಟ್ಟಿದ್ದಾರೆ. ಜನರು ತಾವು ಉಪಯೋಗಿಸಿದ ಅಥವಾ ಉಪಯೋಗಿಸದೇ ಇರುವ ಅಗತ್ಯವಿರದ ಬಟ್ಟೆಗಳು, ಪುಸ್ತಕಗಳು, ಮಕ್ಕಳ ಆಟಿಕೆಗಳು, ಎಲೆಕ್ಟ್ರಾನಿಕ್ ವಸ್ತುಗಳನ್ನು ಬಿಸಾಡದೆ ಈ ಕರುಣೆಯ ಗೋಡೆಯಲ್ಲಿ ತಂದಿಟ್ಟರೆ ಅದನ್ನು ಅಗತ್ಯವಿರುವ ಬಡವರು ತೆಗೆದುಕೊಂಡು ಹೋಗಿ ಬಳಸ್ತಾರೆ.
ಸುಮಾರು ಎರಡು ತಿಂಗಳ ಹಿಂದೆ ಪ್ರಾರಂಭಿಸಲಾಗಿರುವ ಕರುಣೆಯ ಗೋಡೆಯಲ್ಲಿ, ಅನೇಕರು ತಮಗೆ ಅಗತ್ಯವೆನಿಸದ ವಸ್ತುಗಳನ್ನು ತಂದಿಟ್ಟು ಹೋಗುತ್ತಿದ್ದಾರೆ. ಅಗತ್ಯವಿರದ ವಸ್ತುಗಳನ್ನು ಎಲ್ಲೆಂದರಲ್ಲಿ ಸುಮ್ಮನೆ ಬಿಸಾಡುವ ಬದಲು, ಇಲ್ಲಿ ತಂದಿಟ್ಟರೆ ಅಗತ್ಯವಿರುವವರು ಬಳಸಿಕೊಳ್ಳುತ್ತಾರೆ ಎಂಬ ಉದ್ದೇಶ ಸಾರ್ಥಕ ಪಡೆಯುತ್ತಿದೆ.