ಕುಷ್ಟಗಿ(ಕೊಪ್ಪಳ) : ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲೂಕಿನ ಢಾಣಕಶಿರೂರು ಗ್ರಾಮದ ಕೊರೊನಾ ಸೋಂಕಿತರ ಪ್ರಾಥಮಿಕ ಸಂಪರ್ಕದಲ್ಲಿದ್ದ ನಿಲೋಗಲ್ನ 18 ಜನರ ಕೊರೊನಾ ಲ್ಯಾಬ್ ರಿಪೋರ್ಟ್ ನೆಗೆಟಿವ್ ಎಂದು ಬಂದಿದೆ.
ಈ 18 ಜನರ ಕೊರೊನಾ ವರದಿ ತಾಂತ್ರಿಕ ಸಮಸ್ಯೆಯಿಂದಾಗಿ ಎರಡು ದಿನ ವಿಳಂಬವಾದ ಹಿನ್ನೆಲೆ ಮುಂದೆ ಏನಾಗಲಿದೆಯೋ ಎನ್ನುವ ಆತಂಕದ ಕಾರ್ಮೋಡ ಜಿಲ್ಲಾಡಳಿತ ಪ್ರಕಟಿಸಿದ ವರದಿಯಿಂದ ಕೋಲ್ಮಿಂಚಿನಂತೆ ಮಾಯವಾಗಿದೆ.
ಈ ಕುರಿತು ಮಾತನಾಡಿದ ಗ್ರಾಮದ ಮಹಾಂತೇಶ ಶೆಟ್ಟರ್, 18 ಜನರ ಕೊರೊನಾ ಲ್ಯಾಬ್ ರಿಪೋರ್ಟ್ ನೆಗಟಿವ್ ಬಂದಿದೆ. ಇದಕ್ಕಿಂತ ಸಂತೋಷದ ಸಂಗತಿ ಇನ್ನೇನಿದೆ. ಒಂದು ವೇಳೆ ಒಂದೇ ಒಂದು ಪಾಸಿಟಿವ್ ಬಂದಿದ್ದರೂ ಇಡೀ ಗ್ರಾಮ ಸೀಲ್ಡೌನ್ ಆಗಿ, ಕುಷ್ಟಗಿ ತಾಲೂಕು ಲಾಕ್ಡೌನ್ ಆಗುವ ಸಾಧ್ಯತೆ ಇತ್ತು. ಆದಾಗ್ಯೂ ಈ ವರದಿ ಗ್ರಾಮಸ್ಥರಿಗೆ ಎಚ್ಚರಿಕೆಯ ಗಂಟೆಯಾಗಿದೆ. ಹೀಗಾಗಿ ಗ್ರಾಮದಲ್ಲಿ ಸಾಮಾಜಿಕ ಅಂತರ, ಮಾಸ್ಕ್ ಧರಿಸುವುದು ಕಟ್ಟು ನಿಟ್ಟಾಗಿ ಪಾಲಿಸುವ ಕುರಿತು ಸ್ವಯಂ ಪ್ರೇರಿತರಾಗಿದ್ದಾರೆಂದರು.
ಬಹುತೇಕ ಜನರಲ್ಲಿ ನಿಲೋಗಲ್ ಶಂಕಿತರು, ಸೋಂಕಿತರಾದರೆ? ಕೊಪ್ಪಳ ಜಿಲ್ಲೆ ಗ್ರೀನ್ ಝೋನ್ನಿಂದ ಕೈ ತಪ್ಪುವ ಆತಂಕವಿತ್ತು. ಜೊತೆಗೆ ಈ ಗ್ರಾಮ ಅಪಖ್ಯಾತಿಗೆ ಗುರಿಯಾಗುವ ಸಾಧ್ಯತೆಗಳಿದ್ದವು. ಇದೀಗ ಕೊರೊನಾ ಲ್ಯಾಬ್ ರಿಪೋರ್ಟ್ ವರದಿ ಖುಷಿ ತಂದಿದೆ ಎಂದು ಗ್ರಾಪಂ ಅಧ್ಯಕ್ಷ ಯಮನಪ್ಪ ಗಾಜಿ ಸಂತಸ ವ್ಯಕ್ತಪಡಿಸಿದರು.