ಕೊಪ್ಪಳ: ತಾಲೂಕಿನ ಓಜನಹಳ್ಳಿ ಗ್ರಾಮದ ದಂಪತಿ ಕಿಡ್ನಿ ವೈಫಲ್ಯದಿಂದ ಬಳಲುತ್ತಿರುವ ತಮ್ಮ ಮಗನಿಗೆ ಚಿಕಿತ್ಸೆ ಕೊಡಿಸಲು ಪರದಾಡುತ್ತಿದ್ದಾರೆ. ತನ್ನದೊಂದು ಕಿಡ್ನಿ ನೀಡಲು ತಾಯಿ ಮುಂದಾಗಿದ್ದು, ಕಿಡ್ನಿ ಕಸಿ ಚಿಕಿತ್ಸೆಗೆ ಹೆಚ್ಚಿನ ಹಣಕಾಸು ಬೇಕಾಗಿದೆ. ಹಾಗಾಗಿ ದಾನಿಗಳ ನೆರವಿಗೆ ಮೊರೆ ಇಟ್ಟಿದ್ದಾರೆ.
ಕಿಡ್ನಿ ವೈಫಲ್ಯದಿಂದ ಬಳಲುತ್ತಿರುವ ಪುತ್ರನ ನೆರವಿಗೆ ಬರುವಂತೆ ಪೋಷಕರ ಮನವಿ ಓಜನಹಳ್ಳಿ ಗ್ರಾಮದ ಶರಣಪ್ಪಗೌಡ ಹಾಗೂ ಪಾರ್ವತಿ ಮಾಲಿಪಾಟೀಲ್ ದಂಪತಿ ಪುತ್ರ ಮಂಜಪ್ಪಗೌಡ (24) ಕಳೆದ ಒಂದೂವರೆ ತಿಂಗಳಿನಿಂದ ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದಾನೆ. ಕೂಲಿ ಕೆಲಸ ಮಾಡಿ ಬದುಕು ಸಾಗಿಸುತ್ತಿರುವ ಈ ದಂಪತಿಯ ಪುತ್ರ ಕಿಡ್ನಿ ವೈಫಲ್ಯಕ್ಕೊಳಗಾಗಿರುವುದು ಬರಸಿಡಿಲು ಬಡಿದಂತಾಗಿದೆ. ಈಗಾಗಲೇ ಒಂದೂವರೆ ಲಕ್ಷ ರೂಪಾಯಿ ಖರ್ಚು ಮಾಡಿ ಮಗನಿಗೆ ಚಿಕಿತ್ಸೆ ಕೊಡಿಸಿದ್ದಾರೆ. ಎರಡೂ ಕಿಡ್ನಿ ವೈಫಲ್ಯವಾಗಿರುವುದರಿಂದ ಕಿಡ್ನಿ ಕಸಿ ಮಾಡುವ ಅಗತ್ಯವಿದೆ. ಆದರೆ ಕಿಡ್ನಿ ಕಸಿಗೆ ಲಕ್ಷಾಂತರ ರೂಪಾಯಿ ಹಣ ಖರ್ಚಾಗುತ್ತದೆ.
ತನ್ನ ಮಗನಿಗೆ ಒಂದು ಕಿಡ್ನಿ ದಾನ ಮಾಡಲು ಮಂಜಪ್ಪಗೌಡನ ತಾಯಿ ಪಾರ್ವತಿ ಮುಂದಾಗಿದ್ದಾರೆ. ಆದರೆ ಈ ಕಿಡ್ನಿ ಕಸಿ ಚಿಕಿತ್ಸೆಗೆ ಸುಮಾರು 7 ಲಕ್ಷ ರೂಪಾಯಿ ಖರ್ಚಾಗುತ್ತದೆ ಎಂದು ಬಿಜಿಎಸ್ ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ. ಕೂಲಿ ಮಾಡಿ ಜೀವನ ನಡೆಸುವ ಮಂಜಪ್ಪಗೌಡ ಅವರ ತಂದೆ-ತಾಯಿ ಅಷ್ಟೊಂದು ಹಣ ಹೊಂದಿಸಲು ಆಗದೆ ಕಣ್ಣೀರು ಹಾಕುವ ಪರಿಸ್ಥಿತಿ ನಿರ್ಮಾಣವಾಗಿದೆ. ಸದ್ಯ ಯಾರಾದರೂ ದಾನಿಗಳು ಚಿಕಿತ್ಸೆಗೆ ನೆರವು ನೀಡುವಂತೆ ಮಂಜಪ್ಪಗೌಡನ ಪಾಲಕರು ಮನವಿ ಮಾಡಿಕೊಂಡಿದ್ದಾರೆ.
ಈ ಸುದ್ದಿಯನ್ನೂ ಓದಿ: ಕೊರಗಜ್ಜ ದೈವದ ದರ್ಶನದಲ್ಲಿ ಮುಸ್ಲಿಂ ಮಹಿಳೆಗೆ ಆವೇಶ: ವಿಡಿಯೋ ವೈರಲ್
ಇನ್ನು ಯುವಕನಿಗೆ ಚಿಕಿತ್ಸೆಗಾಗಿ ಆತನ ಸ್ನೇಹಿತರು, ಗ್ರಾಮದವರು ಒಂದಿಷ್ಟು ಹಣವನ್ನು ಸಂಗ್ರಹ ಮಾಡುತ್ತಿದ್ದಾರೆ. ಚಿಕಿತ್ಸೆಗೆ ಸುಮಾರು 7 ಲಕ್ಷ ರೂಪಾಯಿಗೂ ಅಧಿಕ ಹಣ ಬೇಕಾಗಿರುವುದರಿಂದ ನಾವು ಸಹ ಒಂದಿಷ್ಟು ಹಣ ಸಂಗ್ರಹಿಸುತ್ತಿದ್ದೇವೆ. ಉಳಿದ ಹಣಕ್ಕೆ ದಾನಿಗಳಲ್ಲಿ ಕೈಮುಗಿದು ಕೇಳಿಕೊಳ್ಳುತ್ತೇವೆ. ದಾನಿಗಳು ಯುವಕನ ಚಿಕಿತ್ಸೆಗೆ ನೆರವು ನೀಡುವ ಮೂಲಕ ಕುಟುಂಬದ ಕಣ್ಣೀರು ಒರೆಸುವಂತೆ ಮಂಜಪ್ಪಗೌಡನ ಸ್ನೇಹಿತರು ಮನವಿ ಮಾಡಿದ್ದಾರೆ.