ಗಂಗಾವತಿ: ಅನರ್ಹ ಶಾಸಕರ ಸ್ಪರ್ಧೆಯ ಬಗ್ಗೆ ಸುಪ್ರೀಂ ಕೋರ್ಟ್ ನಿರ್ಣಯ ಕೈಗೊಳ್ಳಬೇಕಿದೆ. ಅಲ್ಲಿ ಪ್ರಕಟವಾಗುವ ತೀರ್ಪಿನ ಆಧಾರದ ಮೇಲೆ ಅವರನ್ನು ಬೆಂಬಲಿಸಬೇಕೋ, ಬೇಡವೋ ಎಂಬ ತೀರ್ಮಾನವನ್ನು ಪಕ್ಷ ಕೈಗೊಳ್ಳುತ್ತದೆ ಎಂದು ಸಚಿವ ಸಿ.ಟಿ. ರವಿ ಹೇಳಿದ್ದಾರೆ.
ಅನರ್ಹರಿಗೆ ಟಿಕೆಟ್ ನೀಡುವ ಬಗ್ಗೆ ಪಕ್ಷದಲ್ಲಿ ಗೊಂದಲವಿದ್ದು, ಇದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ನುಂಗಲಾರದ ತುತ್ತಾಗಿದೆ ಎಂಬ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಸಚಿವರು, ವಿಷಯ ಕೋರ್ಟ್ನಲ್ಲಿದೆ. ಅನರ್ಹ ಶಾಸಕರ ಸ್ಪರ್ಧೆಯ ಬಗ್ಗೆ ಸುಪ್ರೀಂ ಕೋರ್ಟ್ ನಿರ್ಣಯ ಕೈಗೊಳ್ಳಬೇಕಿದೆ. ಆ ಬಗ್ಗೆ ಹೆಚ್ಚಿನ ಚರ್ಚೆ ಮಾಡಿದರೆ ನ್ಯಾಯಾಲಯದ ತೀರ್ಪಿಗೆ ವ್ಯತಿರಿಕ್ತವಾದಂತಾಗುತ್ತದೆ ಎಂದು ಹೇಳಿದರು.
ಕನಕಗಿರಿ ಉತ್ಸವದ ತೀರ್ಮಾನ ನಿಮ್ದು, ಸಹಕಾರ ನಮ್ದು...
ಕನಕಗಿರಿ ಉತ್ಸವ ಆಚರಣೆಗೆ ಸಂಬಂಧಿಸಿದಂತೆ ಸ್ಥಳೀಯರು ಕೈಗೊಳ್ಳುವ ತೀರ್ಮಾನ ಅಂತಿಮವಾಗಿದ್ದು, ಕೇವಲ ಸಹಕಾರ ಮಾತ್ರ ನಾವು ನೀಡುತ್ತೇವೆ ಎಂದು ಸಚಿವ ಸಿ.ಟಿ. ರವಿ ಹೇಳಿದರು.
ಕಳೆದ ಹಲವು ವರ್ಷಗಳಿಂದ ಕನಕಗಿರಿ ಉತ್ಸವ ಸ್ಥಗಿತವಾಗಿದೆ. ಮತ್ತೆ ಸ್ಥಳೀಯರು ಉತ್ಸಾಹ ತೋರಿದರೆ ಉತ್ಸವ ಆಚರಣೆಗೆ ಸಿದ್ಧ ಎಂದರು.
ನಮ್ಮವರೇ ಸ್ಥಳೀಯ ಶಾಸಕರಿದ್ದಾರೆ. ಸಹಕಾರಕ್ಕೆ ಕೊರತೆಯಿಲ್ಲ. ಆದರೆ ಸ್ಥಳೀಯರ ಸಹಭಾಗಿತ್ವವೂ ಮುಖ್ಯ. ಈ ಹಿನ್ನೆಲೆ ಶಾಸಕರೊಂದಿಗೆ ಚರ್ಚಿಸಿ ಅಂತಿಮ ತೀರ್ಮಾನ ಕೈಗೊಂಡರೆ ಆನೆಗೊಂದಿ ಜೊತೆಗೆ ಕನಕಗಿರಿ ಉತ್ಸವವೂ ಆಚರಿಸಲಾಗುವುದು ಎಂದರು.