ಗಂಗಾವತಿ: ಚಿರತೆಯೊಂದು ದ್ರಾಕ್ಷಿ ತೋಟದಲ್ಲಿ ಇರಿಸಿದ್ದ ಬೋನಿಗೆ ಬಿದ್ದ ಘಟನೆ ಕನಕಗಿರಿ ತಾಲ್ಲೂಕಿನ ಅಡವಿಭಾವಿಯಲ್ಲಿ ನಡೆದಿದೆ.
ರೈತ ಯಮನೂರಪ್ಪ ನಾಯಕ ಎಂಬುವರ ದ್ರಾಕ್ಷಿ ತೋಟದಲ್ಲಿ ಅರಣ್ಯ ಇಲಾಖೆ ಇರಿಸಿದ್ದ ಬೋನಿಗೆ ಗಂಡು ಚಿರತೆ ಸೆರೆಯಾಗಿದೆ. ಚಿರತೆ ಅಂದಾಜು ಎರಡರಿಂದ ಮೂರು ವರ್ಷದ್ದಾಗಿದೆ. ಸುಮಾರು ನಾಲ್ಕು ಅಡಿ ಉದ್ದ ಇದ್ದು, ಚಿರತೆ ಸಂಪೂರ್ಣ ಆರೋಗ್ಯವಾಗಿದೆ ಎಂದು ಅರಣ್ಯ ಇಲಾಖೆಯ ಗಾರ್ಡ್ ಶಿವನಗೌಡ ತಿಳಿಸಿದ್ದಾರೆ.
ಆರೋಗ್ಯ ತಪಾಸಣೆಯ ಬಳಿಕ ಚಿರತೆಯನ್ನು ಸುರಕ್ಷಿತ ಸ್ಥಳಕ್ಕೆ ಬಿಟ್ಟು ಬರುವ ಅಥವಾ ಮೃಗಾಲಯಕ್ಕೆ ಕಳಿಸುವ ಬಗ್ಗೆ ಚಿಂತನೆ ನಡೆಸಲಾಗುವುದು ಎಂದು ಇಲಾಖೆಯ ಸಿಬ್ಬಂದಿ ತಿಳಿಸಿದ್ದಾರೆ.