ಕೊಪ್ಪಳ: ಹೆಂಡತಿಯ ಅನೈತಿಕ ಸಂಬಂಧಕ್ಕೆ ಬೇಸತ್ತ ಗಂಡನೋರ್ವ ಮನನೊಂದು ಆತ್ಮಹತ್ಯೆಗೆ ಶರಣಾಗಿರುವ ಜಿಲ್ಲೆಯ ಚಿಕ್ಕ ಸಿಂದೋಗಿ ಗ್ರಾಮದಲ್ಲಿ ನಡೆದಿದೆ. ಚಿಕ್ಕ ಸಿಂದೋಗಿ ಗ್ರಾಮದ ಧನಗುಂಡಯ್ಯ ಅವರ ಹೆಂಡತಿ ಗವಿಸಿದ್ದಮ್ಮ ಪಕ್ಕದ ಗ್ರಾಮವಾದ ಬೇಳೂರಿನ ವೀರಯ್ಯ ಎಂಬುವನ ಜೊತೆ ಅನೈತಿಕ ಸಂಬಂಧ ಹೊಂದಿದ್ದಳು. ಈ ಬಗ್ಗೆ ಗವಿಸಿದ್ದಮ್ಮನ ಮನೆಯವರಿಗೆ ವಿಷಯ ತಿಳಿದು, ಗ್ರಾಮದ ಹಿರಿಯರನ್ನ ಕರೆಯಿಸಿ ಬುದ್ಧಿ ಹೇಳಿದ್ದರು.
ಆದ್ರೂ, ಅವರಿಬ್ಬರ ನಡುವಿನ ಅನೈತಿಕ ಸಂಬಂಧ ಮುಂದುವರೆದಿತ್ತು. ಈ ಸಂಬಂಧಕ್ಕೆ ಗಂಡ ಧನಗುಂಡಯ್ಯ ಅಡ್ಡಿಯಾಗಿದ್ದಾನೆಂದು ಹೆಂಡತಿ ಗವಿಸಿದ್ದಮ್ಮ ಆಗಾಗ ನಿಂದಿಸುತ್ತಿದ್ದಳು. ಶನಿವಾರ ಮುಂಜಾನೆ ಇದೇ ವಿಷಯವಾಗಿ ಗವಿಸಿದ್ದಮ್ಮ ಮತ್ತು ಧನಗುಂಡಯ್ಯ ನಡುವೆ ಜಗಳವಾಗಿತ್ತು. ಈ ಜಗಳದಲ್ಲಿ ಬೇಳೂರಿನ ವೀರಯ್ಯನು ಭಾಗಿಯಾಗಿ ಅವಾಚ್ಯ ಪದಗಳಿಂದ ಧನಗುಂಡಯ್ಯಗೆ ನಿಂದಿಸಿದ್ದನಂತೆ.
ಇದರಿಂದಾಗಿ ಮನನೊಂದ ಧನಗುಂಡಯ್ಯ ಅದೇ ಗ್ರಾಮದ ಬಾಲಚಂದ್ರಪ್ಪ ಚಳಗೇರಿ ಎಂಬುವರ ಜಮೀನಿನಲ್ಲಿ ನೇಣಿಗೆ ಶರಣಾಗಿದ್ದಾನೆ. ಈ ಘಟನೆ ಜರುಗುತ್ತಿದ್ದಂತೆ ಆತನ ಹೆಂಡತಿ ಗವಿಸಿದ್ದಮ್ಮ ಅಳವಂಡಿ ಪೊಲೀಸ್ ಠಾಣೆಗೆ ತೆರಳಿ ತನ್ನ ಗಂಡ ಸಾಲ ಮಾಡಿಕೊಂಡಿದ್ದ, ಅದನ್ನ ತೀರಿಸಲಾಗದೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ದೂರು ನೀಡಿದ್ದಳು. ನಂತರ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲಿಸಿದಾಗ ಸತ್ಯಾಸತ್ಯತೆ ಬೆಳಕಿಗೆ ಬಂದಿದೆ. ಸದ್ಯ ಇವರಿಬ್ಬರನ್ನ ಬಂಧಿಸಿರುವ ಪೊಲೀಸರು ಕಲಂ 306, 508, 323, ಅಡಿ ಪ್ರಕರಣ ದಾಖಲಿಸಿದ್ದಾರೆ.
ಇದನ್ನೂ ಓದಿ: ಗಂಗಾವತಿಯಲ್ಲಿ ಎರಡು ಪ್ರತ್ಯೇಕ ಪ್ರಕರಣದಲ್ಲಿ 6 ಜನರ ಬಂಧನ.. ವಾಹನ-ಚಿನ್ನಾಭರಣ ವಶ