ಗಂಗಾವತಿ: ತುಂಗಭದ್ರಾ ಎಡದಂಡೆ ಮತ್ತು ವಿಜಯನಗರದ ಕಾಲುವೆಗಳಲ್ಲಿ ನಡೆಯುತ್ತಿರುವ ನೂರಾರು ಕೋಟಿ ರೂಪಾಯಿ ಮೊತ್ತದ ಕಾಮಗಾರಿ ಸ್ಥಳಕ್ಕೆ ರೈತ ಮುಖಂಡರು ಭೇಟಿ ನೀಡಿದ್ದು, ಕಳಪೆ ಗುಣಮಟ್ಟದಿಂದ ಕಾಮಗಾರಿ ನಡೆಯುತ್ತಿದೆ ಎಂದು ರೈತ ಮುಖಂಡರು ಆರೋಪಿಸಿದ್ದಾರೆ.
ತಾಲ್ಲೂಕಿನ ದಾಸನಾಳದ ಸಮೀಪ 63 ಕೋಟಿ ರೂಪಾಯಿ ಮೊತ್ತದಲ್ಲಿ ನಡೆಯುತ್ತಿರುವ ಎಡದಂಡೆ ಮುಖ್ಯ ಕಾಲುವೆ ಒಳಭಾಗ ಬಲಪಡಿಸುವ ಹಾಗೂ ದೇವಘಾಟ ಸಮೀಪ 63 ಕೋಟಿ ರೂಪಾಯಿ ಮೊತ್ತದಲ್ಲಿ ನಡೆಯುತ್ತಿರುವ ವಿಜಯನಗರ ಕಾಲುವೆಗಳ ಅಧುನೀಕರಣ ಕಾಮಗಾರಿಯನ್ನು ರೈತ ಮುಖಂಡರು ಪರಿಶೀಲನೆ ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ರೈತ ಮುಖಂಡ ರೆಡ್ಡಿ ಶ್ರೀನಿವಾಸ, ರೈತರ ಉಪಯೋಗಕ್ಕೆ ಮಾಡುತ್ತಿರುವ ಕಾಮಗಾರಿಗಳಲ್ಲಿ ಗುಣಮಟ್ಟ ಕಂಡು ಬರುತ್ತಿಲ್ಲ. ಅನುದಾನ ಲೂಟಿ ಹೊಡೆಯುವ ಉದ್ದೇಶಕ್ಕೆ ಗುತ್ತಿಗೆದಾರರು ಹಾಗೂ ಅಧಿಕಾರಿಗಳು ಶಾಮೀಲಾಗಿ ಕಳಪೆ ಕಾಮಗಾರಿ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.