ಕೊಪ್ಪಳ: ಇಲ್ಲಿನ ಭಾಗ್ಯನಗರದ ಅಡವಿ ಆಂಜನೇಯ ದೇವಸ್ಥಾನದ ಬಳಿಯಿರುವ ಮನೆಯೊಂದರ ದಂಪತಿ, ಗಾಯಗೊಂಡ ಪಕ್ಷಿಗಳ ಆರೈಕೆ ಜೊತೆಗೆ ಪಕ್ಷಿ ಸಂಕುಲವನ್ನು ಉಳಿಸುವ ನಿಟ್ಟಿನಲ್ಲಿ ವಿಶೇಷ ಕಾಳಜಿ ವಹಿಸಿ ಸಂರಕ್ಷಿಸುತ್ತಿದ್ದಾರೆ.
ರಾಯಚೂರು ಕೃಷಿ ವಿಶ್ವವಿದ್ಯಾಲಯದ ಕೃಷಿ ವಿಸ್ತರಣಾ ಕೊಪ್ಪಳ ಕೇಂದ್ರದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿರುವ ಡಾ. ನಾಗೇಶ ಜಾನಕಲ್ ಅವರ ಪತ್ನಿ ರೀನಾ ಅವರು ಗಾಯಗೊಂಡ ಗುಬ್ಬಚ್ಚಿಗಳ ಆರೈಕೆ ಮಾಡುತ್ತಿದ್ದಾರೆ. ಅಲ್ಲದೇ ಅವುಗಳ ಸಂತಾನಾಭಿವೃದ್ಧಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಗುಬ್ಬಚ್ಚಿ ಗೂಡುಗಳನ್ನು ನೇತು ಹಾಕಿ ಅದರಲ್ಲಿ ಆಹಾರ ಹಾಗೂ ಗುಬ್ಬಚ್ಚಿಗಳ ಸಂತಾನಾಭಿವೃದ್ಧಿಗೆ ಅನುಕೂಲವಾಗುವಂತೆ ಮಾಡಿದ್ದಾರೆ. ಇದರಿಂದಾಗಿ ಗುಬ್ಬಚ್ಚಿಗಳು ಸಂಜೆ ಹಾಗೂ ಬೆಳಗಿನ ವೇಳೆ ಗೂಡುಗಳಿಗೆ ಧಾವಿಸಿ ಮೊಟ್ಟೆಗಳನ್ನಿಟ್ಟು ಸಂತಾನಾಭಿವೃದ್ಧಿ ಮಾಡಿಕೊಂಡು ಹೋಗುತ್ತಿವೆ.
ಗುಬ್ಬಚ್ಚಿಗಳ ಸಂತತಿ ಈಗ ಅಳಿವಿನ ಅಂಚಿನಲ್ಲಿದೆ. ಗುಬ್ಬಚ್ಚಿಗಳನ್ನು ಉಳಿಸುವ ನಿಟ್ಟಿನಲ್ಲಿ ಎಲ್ಲರೂ ಪ್ರಯತ್ನ ಮಾಡಬೇಕಿದೆ. ಮೊದಲಿನಂತೆ ಈಗ ಗುಬ್ಬಚ್ಚಿಗಳು ಕಂಡು ಬರುತ್ತಿಲ್ಲ. ಹೀಗಾಗಿ ಪಕ್ಷಿಗಳ ಮೇಲಿನ ಪ್ರೀತಿಯಿಂದಾಗಿ ನಮ್ಮ ಮನೆಯಲ್ಲಿ ಗಾಯಗೊಂಡ ಗುಬ್ಬಚ್ಚಿಗಳನ್ನು ಆರೈಕೆ ಮಾಡಿ ನಂತರ ಹೊರಗೆ ಬಿಡಲಾಗುತ್ತದೆ ಎಂದು ಡಾ. ನಾಗೇಶ ಜಾನಕಲ್ ಹೇಳಿದರು.