ಕೋಲಾರ: ಕೆಜಿಎಫ್ ಎಸ್ಪಿ ಇಲಕ್ಕಿಯಾ ಕರುಣಾಗರನ್ ಗನ್ಮ್ಯಾನ್ ಮುನಿರತ್ನಗೆ ಅಡ್ಡಗಟ್ಟಿ ಹಲ್ಲೆ ಮಾಡಿದ್ದ ಐವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಹಣ ದೋಚುವ ಹಿನ್ನೆಲೆ ಆರೋಪಿಗಳು ಹಲ್ಲೆ ಮಾಡಿದ್ದರು ಎಂದು ವಿಚಾರಣೆಯಲ್ಲಿ ತಿಳಿದು ಬಂದಿದೆ.
ಕಳೆದ ಭಾನುವಾರ ಸಂಜೆ ಕೋಲಾರ ಜಿಲ್ಲೆ ಕೆಜಿಎಫ್ ತಾಲೂಕು ಅಜ್ಜಪ್ಪಲ್ಲಿ ಬಳಿ ಕೆಜಿಎಫ್ ಎಸ್ಪಿಯ ಗನ್ ಮಾನ್ ಮುನಿರತ್ನ ಕರ್ತವ್ಯ ನಿರ್ವಹಿಸಿ ಬೈಕ್ನಲ್ಲಿ ಮನೆಗೆ ತೆರಳುತ್ತಿದ್ದ ವೇಳೆ ದುಷ್ಕರ್ಮಿಗಳು ಅಡ್ಡಗಟ್ಟಿದ್ದಾರೆ. ಬಳಿಕ ಗನ್ ಮ್ಯಾನ್ನಿಂದ ಮೊಬೈಲ್ ಹಾಗೂ ಹಣ ದೋಚಲು ಯತ್ನಿಸಿದ್ದರು. ಕೆಜಿಎಫ್ ಮೂಲದ ಅವಿನಾಶ್ ರಾಜ್, ಸ್ಯಾಮ್ ಸ್ಟೀಫನ್, ರಂಜಿತ್, ಅಜಯ್, ಪ್ರಕಾಶ್ ಬಂಧಿತ ಆರೋಪಿಗಳು.
ಈ ವೇಳೆ ಮುನಿರತ್ನಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ಆರೋಪಿಗಳು ಪರಾರಿಯಾಗಿದ್ದರು. ಈ ಸಂಬಂಧ ಉರಿಗಾಂ ಠಾಣೆಯಲ್ಲಿ ಗನ್ಮ್ಯಾನ್ ಪ್ರಕರಣ ದಾಖಲಿಸಿದ್ದರು.