ಕೊಡಗು: ವಿದೇಶದಲ್ಲಿ ಉದ್ಯೋಗ ಮಾಡಲು ಯಾರಿಗೆ ಇಷ್ಟಯಿಲ್ಲ ಹೇಳಿ. ಅವಕಾಶ ಸಿಕ್ಕರೆ ಒಂದು ಕೈ ನೋಡಿಯೇ ಬಿಡೋಣ ಎನ್ನುವವರೇ ಹೆಚ್ಚಿದ್ದಾರೆ. ಆದ್ರೆ ಹೀಗೆ ಹುಮ್ಮಸ್ಸಿನಿಂದ ಕುವೈತ್ಗೆ ಉದ್ಯೋಗಕ್ಕೆ ಹೋದ ಕೊಡಗಿನ ಮಹಿಳೆ ಏಜೆಂಟ್ನಿಂದಾಗಿ ಸಂಕಷ್ಟಕ್ಕೆ ಸಿಲುಕಿ ಬಂಧನಕ್ಕೆ ಒಳಗಾಗಿದ್ದರು. ಅವರನ್ನು ಜಿಲ್ಲಾಡಳಿತ ರಾಯಭಾರ ಕಚೇರಿಯೊಂದಿಗೆ ಸಂಪರ್ಕಿಸಿ ತವರಿಗೆ ಕರೆತಂದಿದೆ.
ಹೌದು.. ಕುವೈತ್ನಲ್ಲಿ ಗೃಹ ಬಂಧನದಲ್ಲಿದ್ದ ಕೊಡಗು ಮೂಲದ ಮಹಿಳೆ ಕೊನೆಗೂ ಮರಳಿ ತಾಯಿನಾಡಿಗೆ ಬಂದಿದ್ದಾರೆ. ಮೂಲತಃ ಕೊಡಗು ಜಿಲ್ಲೆ ಕುಶಾಲನಗರ ತಾಲ್ಲೂಕಿನ ನೆಲ್ಯಹುದಿಕೇರಿಯ ನಿವಾಸಿ ಪಾವರ್ತಿ ಬಂದಿಯಾಗಿದ್ದ ಮಹಿಳೆ. ಏಜೆಂಟ್ ಮಾಡಿದ ಮೋಸಕ್ಕೆ ಬಲಿಯಾಗಿ ಅರಬ್ ದೇಶದ ಕುವೈತ್ ಮನೆಯೊಂದರಲ್ಲಿ ಪಾರ್ವತಿ ಬಂಧಿಯಾಗಿದ್ದರು. ನೆಲ್ಲಿಹುದಿಕೇರಿ ಗ್ರಾಮದ ಕರಡಿಗೋಡು ನಿವಾಸಿ ಚಿಕ್ಕಿ ಎಂಬುವವರ ಪುತ್ರಿ ಪಾರ್ವತಿ ಕೇರಳದ ಕಣ್ಣೂರು ಜಿಲ್ಲೆಯ ತಲಚೇರಿಯಲ್ಲಿ ಮನೆಕೆಲಸಕ್ಕೆ ಸೇರಿಕೊಂಡಿದ್ದರು.
ಅಲ್ಲಿ ತಮಿಳುನಾಡು ಏಜೆಂಟ್ ಹನೀಫ್ ಮೂಲಕ ವಿದೇಶದಲ್ಲಿ ಮನೆಕೆಲಸ ಮಾಡಲು ಕಳೆದ ಸೆಪ್ಟೆಂಬರ್ 3 ರಂದು ಕರಡಿಗೋಡಿನಿಂದ ಹೊರಟು ಸೆಪ್ಟೆಂಬರ್ 4ಕ್ಕೆ ಕುವೈತ್ಗೆ ತಲುಪಿದ್ದರು. ಅಲ್ಲಿ ಪಾರ್ವತಿ ಭಾರತದ ಏಜೆಂಟ್ ಮೂಲಕ ಕುವೈತ್ನ ಶ್ರೀಲಂಕಾದ ಏಜೆಂಟ್ ಸಂಪರ್ಕಿಸಿ ಕೆಲಸಕ್ಕೆ ಸೇರಿದ್ದರು. ಕುವೈತ್ನಲ್ಲಿ ಮಾಲೀಕರೊಬ್ಬರ ಮನೆಗೆ ಕೆಲಸಕ್ಕೆ ಸೇರಿದ ಪಾರ್ವತಿಗೆ ಅಲ್ಲಿ ನಿತ್ಯ ಕಿರುಕುಳ ನೀಡುತ್ತಿದ್ದರಂತೆ. ಈ ಬಗ್ಗೆ ತನ್ನ ಸಂಕಷ್ಟದ ಸ್ಥಿತಿಯನ್ನು ಆಡಿಯೋದಲ್ಲಿ ಹೇಳಿಕೊಂಡಿದ್ದರು.
ಅರಬ್ಬೀ ಮನೆಯಲ್ಲಿ ಕೆಲಸಕ್ಕಿದ್ದ ಸಂದರ್ಭ ಪಾರ್ವತಿ ಬಿಟ್ಟುಬಾರದಂತೆ ವೀಸಾ ಹಾಗು ಪಾಸ್ ಪೋರ್ಟ್ನ್ನು ಮಾಲೀಕರು ಕಿತ್ತುಕೊಂಡಿದ್ದರು. ಏಜೆಂಟ್ ಪಡೆದಿರುವ ಮೂರು ಲಕ್ಷ ನೀಡಿದರೆ ಮಾತ್ರ ವೀಸಾ ಹಾಗು ಪಾಸ್ ಪೋರ್ಟ್ ನೀಡುತ್ತೇನೆ ಎಂದು ಮಾಲೀಕ ಕಿರಿಕ್ ಮಾಡಿದ್ದರಂತೆ. ಪಾರ್ವತಿಯನ್ನು ಭಾರತದ ಮೂಲದ ಮನೆಯಲ್ಲಿ ಕೆಲಸಕ್ಕೆ ಸೇರಿಸುತ್ತೇನೆಂದು ನಂಬಿಸಿ ಮತ್ತೆ ಹಾಸ್ಟೆಲ್ನಲ್ಲಿ ಕೂಡಿಡಲಾಗಿತ್ತು. ಆ ಹಾಸ್ಟೆಲ್ನಲ್ಲಿ ಈಗಾಗಲೇ ಶ್ರೀಲಂಕಾದ ನಾಲ್ವರು ಮಹಿಳೆಯರನ್ನು ಬಂಧಿಸಿಡಲಾಗಿತ್ತು. ಅಲ್ಲದೆ ಕೊಠಡಿಯ ಮೂಲಕ ಶ್ರೀಲಂಕಾ ಮೂಲದ ಮಹಿಳೆ ತಪ್ಪಿಸಿಕೊಂಡು ಹೋದಳು ಎಂದು ಪಾರ್ವತಿ ಆತಂಕ ಆಡಿಯೋ ಮೂಲಕ ನೋವು ವ್ಯಕ್ತಪಡಿಸಿದ್ದರು.
ಪಾರ್ವತಿ ಮನೆಯವರು ಕೊಡಗು ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದರು. ಅದರಂತೆ ಜಿಲ್ಲಾಡಳಿತ ಕುವೈತ್ನ ಭಾರತೀಯ ರಾಯಭಾರ ಕಚೇರಿಗೂ ಸಂಪರ್ಕಿಸಿ ಪಾರ್ವತಿಯ ಸ್ಥಿತಿಗತಿಯ ಬಗ್ಗೆ ವಿಚಾರಿಸಲು ಮನವಿ ಮಾಡಿದ್ದರು. ಕುವೈತ್ನ ಭಾರತೀಯ ರಾಯಭಾರ ಕಚೇರಿಯಿಂದ ಅಧಿಕಾರಿಯೊಬ್ಬರು ಗುರುವಾರ ಸಂತ್ರಸ್ತೆ ಪಾರ್ವತಿಯನ್ನು ಫೋನ್ ಮೂಲಕ ಸಂಪರ್ಕಿಸಿದ್ದು ಅವರ ಪ್ರಸ್ತುತ ಸ್ಥಿತಿಯ ಕುರಿತು ಆಕೆಯಿಂದಲೇ ಮಾಹಿತಿ ಪಡೆದಿದ್ದರು.
ಜಿಲ್ಲಾಧಿಕಾರಿ ಬಿ.ಸಿ ಸತೀಶ ಅವರ ನಿರ್ದೇಶನದ ಮೇರೆಗೆ ಪಾರ್ವತಿಯನ್ನು ಸುರಕ್ಷಿತವಾಗಿ ಕರೆತರುವ ಜವಾಬ್ದಾರಿಯನ್ನು ಜಿಲ್ಲಾ ವಿಪತ್ತು ನಿರ್ವಹಣ ಪರಿಣಿತರ ಅಧಿಕಾರಿ ಅನನ್ಯ ವಾಸುದೇವ್ ಅವರ ಹೆಗಲಿಗೆ ವಹಿಸಿದ್ದರು. ವಿಷಯದ ಬಗ್ಗೆ ಕುವೈತ್ನಲ್ಲಿರುವ ಭಾರತೀಯ ರಾಯಭಾರಿ ಕಚೇರಿಗೆ ಮಾಹಿತಿ ನೀಡಿರುವ ಅನನ್ಯ ವಾಸುದೇವ್ ಸಂತ್ರಸ್ತೆಯೊಂದಿಗೆ ಸಂಪರ್ಕದಲ್ಲಿದ್ದು, ದೈರ್ಯ ತುಂಬಿದ್ದು, ಅಲ್ಲದೇ ತಾಂತ್ರಿಕ ಕ್ರಮಗಳನ್ನು ಕೈಗೊಂಡಿದ್ದು, ಸಂತ್ರಸ್ತೆಯನ್ನು ಸುರಕ್ಷಿತವಾಗಿ ಕರೆ ತರುವಲ್ಲಿ ಯಶಸ್ವಿಯಾಗಿದ್ದಾರೆ.
ಇದನ್ನೂ ಓದಿ: ಡ್ರೈವರ್ ಆಗಲು ಮ್ಯಾನೇಜರ್ ಹುದ್ದೆ ತೊರೆದ ಮಹಿಳೆ: ಸಾರಿಗೆ ಸಂಸ್ಥೆಯಲ್ಲಿ ಮಹಿಳಾ ಡ್ರೈವರ್ಗಳ ಯುಗಾರಂಭ