ಕಲಬುರಗಿ : ಶ್ರಾವಣದ ಒಂದು ತಿಂಗಳು ನಗರದ ಮಹಾದಾಸೋಹಿ ಶ್ರೀ ಶರಣಬಸವೇಶ್ವರ ದೇವಸ್ಥಾನಕ್ಕೆ ಭಕ್ತ ಸಮೂಹವೇ ಹರಿದು ಬರುತ್ತಿತ್ತು. ಆದರೆ, ಈ ಬಾರಿ ಕೊರೊನಾ ಹಿನ್ನೆಲೆ ದೇವಸ್ಥಾನದ ಬಾಗಿಲು ಮುಚ್ಚಲಾಗಿದ್ದು, ಭಕ್ತರು ಗೇಟ್ ಬಳಿಯೇ ಪೂಜೆ ಸಲ್ಲಿಸಿ ತೆರಳುತ್ತಿದ್ದಾರೆ.
ಇಂದು ಶ್ರಾವಣ ತಿಂಗಳ ಮೊದಲ ಸೋಮವಾರದ ಹಿನ್ನೆಲೆ, ದೇವಸ್ಥಾನ ಬಳಿ ನೂರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದರು. ಆದರೆ, ಒಳ ಪ್ರವೇಶಿಸಲು ಅವಕಾಶವಿಲ್ಲದ ಹಿನ್ನೆಲೆ ಗೇಟ್ ಹೊರಗಡೆಯೇ ಪೂಜೆ ಸಲ್ಲಿಸಿದರು.
ಶೃದ್ಧಾ ಭಕ್ತಿಯಿಂದ ಶ್ರಾವಣ ಮಾಸದ ಒಂದು ತಿಂಗಳ ಕಾಲ ಉಪವಾಸ ಆಚರಿಸುವ ಭಕ್ತರು, ಶರಣ ಬಸವೇಶ್ವರ ದರ್ಶನ ಪಡೆಯುತ್ತಿದ್ದರು. ಉತ್ತರ ಕರ್ನಾಟಕದ ವಿವಿಧೆಡೆಯಿಂದ ಭಕ್ತರು ಇಲ್ಲಿಗೆ ಆಗಮಿಸುತ್ತಿದ್ದರು. ಆದ್ರೆ, ಈ ಬಾರಿ ಕೊರೊನಾ ಹಿನ್ನೆಲೆ ಸಂಭ್ರಮ ಇಲ್ಲದಂತಾಗಿದೆ. ಈ ದೇವಸ್ಥಾನ ಮಾತ್ರವಲ್ಲದೇ, ಗಾಣಗಾಪೂರ ದತ್ತಾತ್ರೇಯ ದೇವಸ್ಥಾನ ಹಾಗೂ ಘತ್ತರಗಿ ಭಾಗಮ್ಮ ದೇವಿ ದೇಗುಲಗಳನ್ನು ಕೂಡ ಬಂದ್ ಮಾಡಲಾಗಿದೆ.