ಕಲಬುರಗಿ: ಕೊರೊನಾ ನಿಯಂತ್ರಣಕ್ಕೆ ಖಾಸಗಿ ವೈದ್ಯರು ಸಹಕರಿಸುತ್ತಿಲ್ಲ ಎಂದು ಕಲಬುರಗಿ ಜಿಲ್ಲಾಧಿಕಾರಿ ಶರತ್ ಬಿ. ಅಸಮಾಧಾನ ಹೊರಹಾಕಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಲಬುರಗಿ ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು, ಈಗಾಗಲೇ ಸೋಂಕಿತರ ಸಂಖ್ಯೆ ಮೂರು ಸಾವಿರ ಗಡಿ ದಾಟಿದೆ. ಜಿಲ್ಲೆಯಲ್ಲಿ ಬಹುತೇಕ ಐಸಿಯು ಕೇಂದ್ರ, ಬೆಡ್ಗಳು ಭರ್ತಿಯಾಗಿವೆ. ಜಿಮ್ಸ್ನಲ್ಲಿ 28, ಇ.ಎಸ್.ಐ.ಯಲ್ಲಿ 30, ಬಸವೇಶ್ವರದಲ್ಲಿ 24 ಐಸಿಯು ಬೆಡ್ಗಳಿದ್ದು, ಬಹುತೇಕ ಎಲ್ಲಾ ಆಸ್ಪತ್ರೆಯಲ್ಲೂ ಬೆಡ್ ಭರ್ತಿಯಾಗಿವೆ.
ಹೆಚ್ಚುವರಿಯಾಗಿ ಟ್ರಾಮಾ ಕೇರ್ ಸೆಂಟರ್ ಬಳಕೆ ಮಾಡಿಕೊಳ್ಳಲಾಗುತ್ತಿದ್ದು, ಅಲ್ಲಿಯೂ ಐಸಿಯು ವ್ಯವಸ್ಥೆ ಮಾಡಿ 30 ಬೆಡ್ ವ್ಯವಸ್ಥೆ ಕಲ್ಪಿಸಲಾಗಿದೆ. ಮುಂಬರುವ ದಿನಗಳಲ್ಲಿ ಇನ್ನೂ ಹೆಚ್ಚಿನ ಬೆಡ್ಗಳ ವ್ಯವಸ್ಥೆ ಮಾಡಲು ಕ್ರಮ ಕೈಗೊಳ್ಳಲಾಗುತ್ತಿದೆ. ಇಷ್ಟೆಲ್ಲಾ ಕ್ರಮ ಕೈಗೊಂಡರೂ ಸಹ ಸೋಂಕಿತರ ಸಂಖ್ಯೆ ಕಡಿಮೆಯಾಗುವ ಯಾವುದೇ ಲಕ್ಷಣಗಳು ಕಾಣುತ್ತಿಲ್ಲ. ಸೋಂಕಿತರಿಗೆ ಚಿಕಿತ್ಸೆ ನೀಡುವಲ್ಲಿ ಒಂದಷ್ಟು ತೊಂದರೆಯಾಗುತ್ತಿದೆ. ಅದರಲ್ಲಿಯೂ ಖಾಸಗಿ ವೈದ್ಯರ ಅಸಹಕಾರದಿಂದ ದೊಡ್ಡ ಸಮಸ್ಯೆ ಉಂಟಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಐಸಿಯು, ಬೆಡ್ಗಳ ವ್ಯವಸ್ಥೆಯನ್ನು ಹೇಗೋ ಮಾಡಬಹುದು. ಆದರೆ ಸೇವೆ ಮಾಡೋ ವೈದ್ಯರೇ ಲಭ್ಯವಿಲ್ಲವೆಂದರೆ ಹೇಗೆ ಮಾಡೋದು. ಸೋಂಕು ನಿಯಂತ್ರಣಕ್ಕೆ ಜಿಲ್ಲೆಯಲ್ಲಿ ಖಾಸಗಿ ವೈದ್ಯರು ಸಹಕಾರ ನೀಡುತ್ತಿಲ್ಲ. ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್ ವಾರ್ಡ್ ಸ್ಥಾಪಿಸಲು ಹೇಳಿದ್ದರೂ ಯಾರೂ ಅದನ್ನು ಗಂಭೀರವಾಗಿ ತೆಗದೆುಕೊಂಡಿಲ್ಲ. ಎರಡು-ಮೂರು ಆಸ್ಪತ್ರೆಯವರು ಸೇರಿ ಒಂದು ಆಸ್ಪತ್ರೆಯನ್ನು ಕೋವಿಡ್ಗಾಗಿ ಮೀಸಲಿಟ್ಟರೆ ನಮ್ಮದೇನೂ ಅಭ್ಯಂತರವಿಲ್ಲ ಎಂದರು.
ಮುಂಬರುವ ದಿನಗಳಲ್ಲಿ ಗಂಭೀರ ಪರಿಸ್ಥಿತಿ ಎದುರಾಗಬಹುದು. ಹೀಗಾಗಿ ಖಾಸಗಿ ವೈದ್ಯರ ಸಹಕಾರ ಅತ್ಯಮೂಲ್ಯವಾಗಿದೆ. ಈ ಕುರಿತು ಇಂದೇ ಖಾಸಗಿ ವೈದ್ಯರ ಸಭೆ ಕರೆದಿದ್ದು, ಮುಂದಿನ ವಿಚಾರಗಳ ಬಗ್ಗೆ ತೀರ್ಮಾನ ಕೈಗೊಳ್ಳುಲಾಗುವುದು ಎಂದು ತಿಳಿಸಿದ್ದಾರೆ.