ಕಲಬುರಗಿ: ಐದು ದಿನಗಳ ಕಾಲ ನಡೆಯುವ ಗುಲ್ಬರ್ಗಾ ವಿಶ್ವವಿದ್ಯಾಲಯದ 36ನೇ ಅಂತರ ವಿಶ್ವವಿದ್ಯಾಲಯ ದಕ್ಷಿಣ ಪೂರ್ವ ವಲಯ ಬೃಹತ್ ಯುವಜನೋತ್ಸವಕ್ಕೆ ಚಾಲನೆ ಸಿಕ್ಕಿದೆ. ಪ್ರಥಮ ದಿನವಾದ ಶುಕ್ರವಾರ ಸಂಜೆ ಕ್ಯಾಂಪಸ್ನಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು. ಮೂರು ರಾಜ್ಯಗಳ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಪಾರಂಪರಿಕ ಕಲಾವೈಭವವನ್ನು ಪ್ರದರ್ಶಿಸಿದರು.

ಗುಲ್ಬರ್ಗಾ ವಿಶ್ವವಿದ್ಯಾಲಯ ಆವರಣದಲ್ಲಿ ಜ. 27 ರಿಂದ 31ರವರೆಗೆ ಯುವಜನೋತ್ಸವ ಪ್ರಾರಂಭಗೊಂಡಿದೆ. ಕರ್ನಾಟಕ, ತೆಲಂಗಾಣ ಹಾಗೂ ಛತ್ತಿಸಗಡ್ ರಾಜ್ಯಗಳ ಒಟ್ಟು 23 ವಿಶ್ವವಿದ್ಯಾಲಯಗಳ ಸುಮಾರು 1,200 ವಿದ್ಯಾರ್ಥಿಗಳು ಸಂಭ್ರಮದಲ್ಲಿ ಭಾಗವಹಿಸಿದ್ದಾರೆ. ಶುಕ್ರವಾರ ಮಧ್ಯಾಹ್ನ ರೋಮಾಂಚಕ ಸಾಂಸ್ಕೃತಿಕ ಪ್ರದರ್ಶನಗಳು ಮತ್ತು ಸಾಂಪ್ರದಾಯಿಕ ಜಾನಪದ ನೃತ್ಯಗಳೊಂದಿಗೆ ಯುವಜನೋತ್ಸವ ಪ್ರಾರಂಭಗೊಂಡಿದೆ.

ಕರ್ನಾಟಕ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಕುಲಪತಿ ಪ್ರೋ. ಬಿ.ಕೆ. ತುಳಸಿಮಾಲ, ಕನ್ನಡ ಚಿತ್ರರಂಗದ ಖ್ಯಾತ ನಟ ಮತ್ತು ನಿರ್ದೇಶಕ ಸುಚೇಂದ್ರ ಪ್ರಸಾದ್ ಯುವಜನೋತ್ಸವಕ್ಕೆ ಚಾಲನೆ ನೀಡಿದರು. ಬಳಿಕ ಕಾರ್ಯಸೌಧದಿಂದ ಡಾ. ಅಂಬೇಡ್ಕರ್ ಭವನದವರೆಗೆ ಅದ್ಧೂರಿ ಮೆರವಣಿಗೆ ನಡೆಯಿತು. ಮೆರವಣಿಗೆ ಮಾರ್ಗದುದ್ದಕ್ಕೂ ಆಯಾ ರಾಜ್ಯಗಳ ಸಂಸ್ಕೃತಿಕ ಕಲೆಗಳನ್ನು ವಿದ್ಯಾರ್ಥಿಗಳು ಪ್ರದರ್ಶನ ಮಾಡಿದರು. ಈ ವೇಳೆ ಕಲಬುರಗಿಯ ಶರಣಬಸವೇಶ್ವರ ಪಲ್ಲಕ್ಕಿ, ರಥ, ಬೆಂಗಳೂರಿನ ಪೂಜಾ ಕುಣಿತ, ಡೊಳ್ಳು ಕುಣಿತ, ವಿರಾಗಸೆ, ನಂದಿಕುಣಿತ, ಹಲಗೆ ವಾದನ, ಕಂಸಾಳೆ ವಾದನ, ತಮಟೆ ವಾದನ, ಮಂಗಳೂರಿನ ಹುಲಿ ಕುಣಿತ, ಛತ್ತಿಸಗಡ್ ರಾಜ್ಯ ನೃತ್ಯ ನೆರೆದವರ ಗಮನ ಸೆಳೆಯಿತು.

ಪ್ರತಿದಿನ ಬೆಳಗ್ಗೆ 9 ಗಂಟೆಯಿಂದ ರಾತ್ರಿ 11 ಗಂಟೆವರೆಗೆ ನಾನಾ ಸ್ಪರ್ಧೆಗಳು ನಡೆಯಲಿವೆ. ಡಾ.ಬಿ.ಆರ್. ಅಂಬೇಡ್ಕರ್ ಭವನದಲ್ಲಿ ನಾಟ್ಯಮಂದಿರ, ಮಹಾತ್ಮಗಾಂಧಿ ಸಭಾಂಗಣದಲ್ಲಿ ಸಂಗೀತ, ಮಹಾದೇವಪ್ಪ ರಾಂಪುರೆ ಬಯಲು ರಂಗಮಂದಿರದಲ್ಲಿ ನೃತ್ಯ, ಒಳಾಂಗಣ ಹಾಗೂ ಹೊರಾಂಗಣ ಕ್ರೀಡಾಂಗಣದಲ್ಲಿ ಕಲೆ, ಗಣಿತ ವಿಭಾಗದಲ್ಲಿ ಸಾಹಿತ್ಯ ಸ್ಪರ್ಧೆಗಳು ನಡೆಯಲಿವೆ. 28, 29 ಮತ್ತು 30 ಮೂರು ದಿನ ಸ್ಪರ್ಧೆಗಳು ನಡೆಯಲಿವೆ. ಕೊನೆಯ ದಿನ ಜ.31ರಂದು ಬೆಳಗ್ಗೆ 10 ಗಂಟೆಗೆ ಸಮಾರೋಪದಲ್ಲಿ ಸ್ಪರ್ಧೆಗಳ ಫಲಿತಾಂಶ, ಬಹುಮಾನ ವಿತರಣೆ ಕಾರ್ಯ ನಡೆಯಲಿದೆ.

ಇದನ್ನೂ ಓದಿ: ಹೊಸ ಮೀಸಲಾತಿ ಅನ್ವಯ ಪ್ರವೇಶ ನೀಡದ ಕವಿವಿ ವಿರುದ್ಧ ವಿದ್ಯಾರ್ಥಿಗಳ ಆಕ್ರೋಶ..
ಕರ್ನಾಟಕ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಕುಲಪತಿ ಪ್ರೋ. ಬಿ.ಕೆ. ತುಳಸಿಮಾಲ ಉದ್ಘಾಟಕರಾಗಿ, ಕನ್ನಡ ಚಿತ್ರರಂಗದ ಖ್ಯಾತ ನಟ ಮತ್ತು ನಿರ್ದೇಶಕ ಸುಚೇಂದ್ರ ಪ್ರಸಾದ್ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಗುಲ್ಬರ್ಗಾ ವಿಶ್ವವಿದ್ಯಾಲಯದ ಕುಲಪತಿ ಪ್ರೋ. ದಯಾನಂದ ಆಗಸರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ನವದೆಹಲಿಯ ಭಾರತೀಯ ವಿಶ್ವವಿದ್ಯಾಲಯಗಳ ಸಂಘದ ಜಂಟಿ ಕಾರ್ಯದರ್ಶಿ ಡಾ. ಬಲ್ವಿತ್ ಸಿಂಗ್ ಸುಖೋನ್ ಅತಿಥಿಗಳಾಗಿ ಭಾಗವಹಿಸಿದ್ದರು.


ಕಾರ್ಯಕ್ರಮದಲ್ಲಿ ಮಾತನಾಡಿದ ಸುಚೇಂದ್ರ ಪ್ರಸಾದ್, ಸಂಸ್ಕೃತಿಯ ರಕ್ಷಣೆ ಯುವಕರ ಕೈಯಲ್ಲಿದೆ. ಎಲ್ಲರೊಂದಿಗೆ ಸಕ್ಯ ಬೆಳೆಸಿ, ಸೌಖ್ಯದಿಂದಿರುವುದೇ ಸಂಸ್ಕೃತಿ. ಇಂತಹ ಕಾರ್ಯಕ್ರಮಗಳ ಆಯೋಜನೆಯಿಂದ ವಿದ್ಯಾರ್ಥಿಗಳಲ್ಲಿ ಸಂಸ್ಕೃತಿಯ ಅರಿವಾಗುತ್ತದೆ. ಹೀಗಾಗಿ, ಇಂದಿನ ಯುವಕರಿಗೆ ಪಾಠದ ಜತೆ ಸಾಂಸ್ಕೃತಿಕ ಕಾರ್ಯಕ್ರಮಗಳು ಮುಖ್ಯವಾಗಿದೆ ಎಂದರು.
ಇದನ್ನೂ ಓದಿ: ಜಿಂಕೆ ಮೇಲೆ ಸವಾರಿ ಮಾಡಿದ ಕೋತಿ: ಕುವೆಂಪು ವಿವಿ ಆವರಣದಲ್ಲಿ ದೃಶ್ಯ ಸೆರೆ, ವೈರಲ್ ವಿಡಿಯೋ