ಕಲಬುರಗಿ: ಗ್ರಾ.ಪಂ ಅಧ್ಯಕ್ಷರು, ಉಪಾಧ್ಯಕ್ಷರು, ಪಿಡಿಒ , ಸದಸ್ಯರು ಮಾತ್ರವಲ್ಲ ಗ್ರಾಮ ಪಂಚಾಯತ್ ಕಚೇರಿಗೆ ಬರುವ ಸಾರ್ವಜನಿಕರು ಸಹ ನನ್ನ ವಶದಲ್ಲಿ ಇರಬೇಕು ಎಂದು ಗ್ರಾ.ಪಂ ಕಚೇರಿಗೆ ವಾಮಾಚಾರ ಮಾಡಿಸಿದ್ದಾರೆ ಎನ್ನಲಾದ ವಿಚಿತ್ರ ಘಟನೆ ನಡೆದಿದೆ.
![Balck Magic in Grampanchayat office](https://etvbharatimages.akamaized.net/etvbharat/prod-images/4553891_black.jpg)
ಶಹಾಬಾದ ಸಮೀಪದ ಮಾಲಗತ್ತಿ ಗ್ರಾಮ ಪಂಚಾಯ್ತಿ ಕಾರ್ಯಾಲಯಕ್ಕೆ ಇಂತಹದೊಂದು ಬ್ಲ್ಯಾಕ್ ಮಾಜಿಕ್ ಮಾಡಲಾಗಿದೆ. ಕಚೇರಿ ಪ್ರವೇಶಿಸುವ ಮುಖ್ಯದ್ವಾರದ ಬಲಭಾಗದ ಮೂಲೆಯಲ್ಲಿರುವ ಕಪಾಟಿನ ಅಡಿ ವಾಮಾಚಾರ ಮಾಡಿದ ಎರಡು ಚೀಟಿಗಳು ಪತ್ತೆಯಾಗಿವೆ. ಚೀಟಿಗಳಲ್ಲಿ ಕುಂಬಳಕಾಯಿ ಚಿತ್ರ, ಮನುಷ್ಯನ ಮುಖದ ಆಕಾರದ ಚಿತ್ರ, ತಕ್ಕಡಿ ಆಕಾರದ ಮಧ್ಯದಲ್ಲಿ ಸ್ವಸ್ತಿಕ್ ಚಿತ್ರ, ದೇವರ ನಾಮಸ್ಮರಣ, ಆದಿಶಕ್ತಿ, ಆದೀಶ್ವರ ನಾಮಸ್ಮರಣ, ಹಲವು ಅಂಕಿ - ಸಂಖ್ಯೆಗಳು, ಅನೇಕರ ಹೆಸರುಗಳು ಇವೆ. ಒಂದರಲ್ಲಿ ಗ್ರಾಮ ಪಂಚಾಯ್ತಿ ಸಿಬ್ಬಂದಿ, ಜನಪ್ರತಿನಿಧಿಗಳು ಸೇರಿ 24 ಹೆಸರುಗಳಿದ್ದು, ಇನ್ನೊಂದರಲ್ಲಿ ಗ್ರಾಮ ಪಂಚಾಯಿತಿ 11 ಜನಪ್ರತಿನಿಧಿಗಳ ಹೆಸರಿದೆ. ಚೀಟಿಗೆ ಅರಿಶಿಣ - ಕುಂಕುಮ, ಗುಲಾಲ್ ಹಚ್ಚಿ ಪೂಜೆ ಮಾಡಲಾಗಿದೆ.
ಸರ್ವಜನ ವಶೀಕರಣ ಎಂದು ಚೀಟಿಯ ಕೊನೆಯಲ್ಲಿ ಬರೆಯಲಾಗಿದೆ. ಇದರೊಂದಿಗೆ ಕಚೇರಿಗೆ ಬರುವ ಎಲ್ಲರನ್ನೂ ವಾಮಾಚಾರದ ಮೂಲಕ ತಮ್ಮ ಹತೋಟಿಯಲ್ಲಿ ಇಟ್ಟುಕೊಳ್ಳುವ ದುರುದ್ದೇಶ ವ್ಯಕ್ತವಾಗಿದೆ ಎಂಬ ವಿಶ್ಲೇಷಣೆಗಳು ಕೇಳಿ ಬಂದಿವೆ. ಎರಡು ಚೀಟಿಗಳು ಸದಸ್ಯರೊಬ್ಬರಿಗೆ ಸಿಕ್ಕಿದ್ದು, ಈ ಕುರಿತು ಸೂಕ್ತ ತನಿಖೆಗೆ ಸದಸ್ಯರು ಆಗ್ರಹಿಸಿದ್ದಾರೆ.
ಇಲ್ಲಿ ನಿಜಕ್ಕೂ ವಾಮಾಚಾರ ನಡೆದಿದೆಯೋ ಅಥವಾ ಯಾರಾದರು ಕಿಡಿಗೇಡಿಗಳು ಈ ಕೃತ್ಯವೆಸಗಿದ್ದಾರೋ ಎಂಬುದು ತನಿಖೆಯಿಂದ ಬಯಲಾಗಬೇಕಿದೆ.