ಕಲಬುರಗಿ: ಅನಧಿಕೃತ ಕಾಲ್ ಸೆಂಟರ್ ತೆರೆದು ದೂರವಾಣಿ ಮೂಲಕ ಬಿಜೆಪಿ ಅಭ್ಯರ್ಥಿ ಉಮೇಶ್ ಜಾಧವ್ ಪರವಾಗಿ ಮತಯಾಚನೆ ಮಾಡಲಾಗುತ್ತಿದೆ ಎಂಬ ಆರೋಪದ ಮೇಲೆ ಚುನಾವಣಾ ಅಧಿಕಾರಿಗಳು ಐಟಿ ಸೆಂಟರ್ ಮೇಲೆ ದಿಢೀರ್ ದಾಳಿ ನಡೆಸಿದ್ದಾರೆ.
ನಗರದ ಹೊರವಲಯದಲ್ಲಿರುವ ಐಟಿ ಪಾರ್ಕ್ ಕಿಯೋನಿಕ್ಸ್ ಸರ್ಕಾರಿ ಸ್ವಾಮ್ಯದ ಕಟ್ಟಡದಲ್ಲಿ ಇನ್ಫೋಥಿಂಕ್ ಟೆಕ್ನಾಲಜಿಸ್ ಹೆಸರಿನ ಕಚೇರಿ ಮೇಲೆ ದಾಳಿ ಮಾಡಲಾಗಿದೆ. ಇದೆ ಕಚೇರಿಯಿಂದ ಟೆಲಿಕಾಲರ್ ಗಳ ಮೂಲಕ ಬಿಜೆಪಿ ಅಭ್ಯರ್ಥಿ ಉಮೇಶ್ ಜಾಧವ್ಗೆ ಮತ ಹಾಕುವಂತೆ ದೂರವಾಣಿ ಕರೆ ಮಾಡುತ್ತಿದ್ದರು ಎನ್ನಲಾಗಿದೆ. ಇನ್ಫೋಥಿಂಕ್ ಟೆಕ್ನಾಲಜಿಸ್ ಸೆಂಟರ್ ಮೇಲೆ ಅಧಿಕಾರಿಗಳು ದಾಳಿ ನಡೆಸಿ ಪರೀಶಿಲನೆ ಮಾಡಿದ್ದು, ದಾಳಿ ವೇಳೆ ನೂರಾರು ಯುವತಿಯರು ಇಲ್ಲಿ ಕೆಲಸ ಮಾಡುವುದು ಪತ್ತೆಯಾಗಿದೆ.
ಟೆಲಿಕಾಲಿಂಗ್ ಅಗತ್ಯವಾದ ಯಂತ್ರೋಪಕರಣಗಳು ಹಾಗೂ ಸಾರ್ವಜನಿಕರ ಮೊಬೈಲ್ ನಂಬರ್ ಮಾಹಿತಿಯುಳ್ಳ ದಾಖಲೆಗಳು ದೊರೆತಿವೆ ಎನ್ನಲಾಗಿದೆ. ಇನ್ನು ದಾಳಿ ನಂತರ ಯುವತಿಯರು ಅಲ್ಲಿಂದ ಕಾಲ್ಕಿತ್ತಿದ್ದಾರೆ. ಈ ಕಚೇರಿ ಬಿಜೆಪಿಯಲ್ಲಿ ಗುರುತಿಸಿಕೊಂಡಿರುವ ವ್ಯಕ್ತಿಯೊಬ್ಬರಿಗೆ ಸೇರಿದ್ದಾಗಿದೆ. ಸದ್ಯ ಅಧಿಕಾರಿಗಳು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ. ಇನ್ನು ಇದೆ ರೀತಿ ಅನಧಿಕೃತವಾಗಿ ನಗರದ ಸನ್ ಸಿಟಿ ಮಾಲ್ನಲ್ಲಿ ಟೆಲಿಕಾಲಿಂಗ್ ದಂಧೆ ನಡೆಯುತ್ತಿದೆ ಎಂಬ ಆರೋಪಕೇಳಿ ಬಂದಿದೆ. ಈ ಆಧಾರದ ಮೇಲೆ ಅಲ್ಲಿಯೂ ಅಧಿಕಾರಿಗಳು ದಾಳಿ ನಡೆಸಿ ತನಿಖೆ ನಡೆಸುತ್ತಿದ್ದಾರೆ.
ಸಚಿವ ಪ್ರಿಯಾಂಕ್ ಖರ್ಗೆ ಪ್ರತಿಕ್ರಿಯೆ :
ಇನ್ನು ಬಿಜೆಪಿಯವರು ಕಳ್ಳ ಮಾರ್ಗಗಳಿಂದ ಮತಯಾಚನೆ ಮಾಡುತ್ತಿದ್ದಾರೆಂದು ಕಾಂಗ್ರೆಸ್ ನಾಯಕರು ಆರೋಪಿಸಿದ್ದಾರೆ. ಇದೆ ವಿಷಯವಾಗಿ ಮಾತನಾಡಿದ ಸಚಿವ ಪ್ರಿಯಾಂಕ್ ಖರ್ಗೆ, ಬಿಜೆಪಿ ಐಟಿ ಸೆಲ್ ಒಂದು ಸುಳ್ಳಿನ ಕಾರ್ಖಾನೆಯಂತಿದೆ. ಕಾನೂನು ಬಾಹಿರ ಕೆಲಸ ಮಾಡುತ್ತಿದೆ. ಅನಧಿಕೃತವಾಗಿ ಬಿಜೆಪಿಗೆ ಮತ ಹಾಕುವಂತೆ ಕರೆ ಮಾಡುತ್ತಿದ್ದಾರೆ. ಯುವಕರಿಗೆ ಉದ್ಯೋಗದ ಆಮಿಷವನ್ನು ಒಡ್ಡಲಾಗುತ್ತಿದೆ. ಟೆಲಿಕಾಲರ್ಗಳಿಂದ ದೂರವಾಣಿ ಕರೆ ಮೂಲಕ ಮತದಾರರಿಗೆ ಆಮಿಷ ಹಾಕಲಾಗುತ್ತಿದೆ. ಅನುಮತಿ ಪಡೆದು ಅಧಿಕೃತವಾದ ಟೆಲಿಕಾಲ್ ಸೆಂಟರ್ ಮೂಲಕ ಪ್ರಚಾರ ಮಾಡಬೇಕಿತ್ತು. ಆದರೆ ಅನಧಿಕೃತವಾಗಿ ಟೆಲಿಕಾಲ್ ಸೆಂಟರ್ ತೆರೆದು ದೂರವಾಣಿ ಮೂಲಕ ಮತದಾರರಿಗೆ ಆಮಿಷ ಒಡ್ಡಲಾಗುತ್ತಿದೆ ಎಂದು ಪ್ರಿಯಾಂಕ್ ಖರ್ಗೆ ಆರೋಪಿಸಿದ್ದಾರೆ.
ಸರ್ಕಾರಿ ಕಚೇರಿಯಲ್ಲಿ ಅನಧಿಕೃತವಾಗಿ ಟೆಲಿಕಾಲಿಂಗ್ ಕಚೇರಿ ಸ್ಥಾಪಿಸಿ ಸರ್ಕಾರಿ ಕಚೇರಿ ದುರ್ಬಳಕೆ ಹಾಗೂ 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಯುವತಿಯರನ್ನು ಟೆಲಿಕಾಲರ್ ಗಳಾಗಿ ಬಳಸಿಕೊಳ್ಳಲಾಗಿದೆ ಎಂದು ಆರೋಪಿಸಿದ್ದಾರೆ. ಬಿಜೆಪಿಯವರು ಕಾನೂನು ಉಲ್ಲಂಘನೆ ಮಾಡಿದ್ದು ಸ್ಪಷ್ಟವಾಗಿದೆ. ಈ ಬಗ್ಗೆ ಚುನಾವಣಾ ಆಯೋಗಕ್ಕೆ ದೂರು ನೀಡುವುದಾಗಿ ತಿಳಿಸಿದ್ದಾರೆ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.