ಹಾಸನ: ಸಕಲೇಶಪುರ ಪಟ್ಟಣದಲ್ಲಿ ಮಳೆಯಿಂದ ಹಾನಿಯಾಗಿರುವ ಬಡಾವಣೆಗಳಿಗೆ ಇಂದು ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಕೆ. ಕುಮಾರಸ್ವಾಮಿ ಭೇಟಿ ನೀಡಿದ್ದರು.
ಬಳಿಕ ಪತ್ನಿ ಚಂಚಲ ಕುಮಾರಸ್ವಾಮಿಯವರೊಂದಿಗೆ ಹೊಳೆಮಲ್ಲೇಶ್ವರ ದೇವಾಲಯದ ತಟದಲ್ಲಿ ಹರಿಯುವ ಹೇಮಾವತಿ ನದಿಗೆ ಗಂಗೆ ಪೂಜೆ ಮಾಡಿ ಬಾಗಿನ ಅರ್ಪಿಸಿದ್ರು. ಹೇಮಾವತಿ ಹಿನ್ನೀರಿನ ಪ್ರದೇಶಕ್ಕೆ ಭೇಟಿ ನಿಡಿದ ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ, ಜನರ ಆರೋಗ್ಯ ರಕ್ಷಣೆಗಾಗಿ ಮಾಂಸದ ಅಂಗಡಿಗಳನ್ನ ತೆರವುಗಳಿಸುವುದಕ್ಕೆ ಸೂಚಿಸಿದರು. ಅಲ್ಲದೇ ಗಂಜಿ ಕೇಂದ್ರಗಳನ್ನ ತೆರೆದು ಸಂತ್ರಸ್ತ ಕುಟುಂಬಗಳಿಗೆ ಬೇಕಾಗಿರುವ ಮೂಲ ಸೌಲಭ್ಯ ಮತ್ತು ಸೌಕರ್ಯಗಳನ್ನ ಒದಗಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ತಅಕೀತು ಮಾಡಿದರು.
ಸಕಲೇಶಪುರ ಪಟ್ಟಣದ ಕೆಲ ಬಡಾವಣೆಗಳಲ್ಲಿರುವ ಮನೆಗಳಲ್ಲಿ ನೀರು ತುಂಬಿರುವುದಿರಂದ ಇಲ್ಲಿರುವ ಜನರನ್ನ ಸುರಕ್ಷಿತ ಸ್ಥಳಗಳಿಗೆ ತಲುಪಿಸುವ ಕಾರ್ಯವನ್ನ ವಿಪತ್ತು ನಿರ್ವಹಣಾ ತಂಡ ಮಾಡುತ್ತಿದೆ. ಭಾರಿ ಮಳೆಯಿರುವ ಕಾರಣ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.
ಇನ್ನು, ಇಂದು ಆಲೂರು-ಸಿಂಗಾಪುರ ಸಮೀಪ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ನಡೆಯುತ್ತಿರುವುದಿರಂದ ಟ್ರಕ್ಗಳು ಮಣ್ಣಿನಲ್ಲಿಯೇ ಸಿಲುಕಿ ಸುಮಾರು 2 ಗಂಟೆಗೂ ಹೆಚ್ಚು ಕಾಲ ರಸ್ತೆ ಬಂದ್ ಆಗಿತ್ತು. ಈ ನಡುವೆ ಮಳೆ ಸುರಿಯುತ್ತಿರುವುದರಿಂದ ವಾಹನಗಳ ತೆರವಿಗೆ ಮತ್ತು ಮಳೆಯಿಂದ ರಸ್ತೆಗೆ ಬಿದ್ದ ಮರಗಳನ್ನ ತೆರವುಗೊಳಿಸಲು ಅರಣ್ಯ ಇಲಾಖೆ ಮತ್ತು ಸಂಚಾರಿ ಪೊಲೀಸರು ಹರಸಾಹಸಪಟ್ಟು ಸಂಚಾರಕ್ಕೆ ಅನುವು ಮಾಡಿಕೊಟ್ಟರು.