ಹಾಸನ/ಅರಕಲಗೂಡು: ತಾಲೂಕಿನ ಎಲ್ಲಾ ಇಲಾಖೆಗೆ ಸಂಬಂಧಿಸಿದ ಸಮಸ್ಯೆಗಳನ್ನು ನನ್ನ ಮೇಲೆ ಹೇರುವ ಬದಲು ಆಯಾ ಇಲಾಖೆಯ ಅಧಿಕಾರಿಗಳೇ ಜನರ ಬಳಿಗೆ ತೆರಳಿ ಅವರ ಸಮಸ್ಯೆಗೆ ಪರಿಹಾರ ದೊರಕಿಸಿಕೊಡಿ ಎಂದು ಶಾಸಕ ಎ.ಟಿ. ರಾಮಸ್ವಾಮಿ ಸೂಚನೆ ನೀಡಿದ್ದಾರೆ.
ಅಧಿಕಾರಿಗಳಿಗೆ ಶಾಸಕ ಎ.ಟಿ.ರಾಮಸ್ವಾಮಿ ಕಿವಿಮಾತು ಹಾಸನದ ಜಿಲ್ಲೆಯ ಅರಕಲಗೂಡು ತಾಲೂಕಿನ ರಾಮನಾತಪುರ ಹೋಬಳಿ ಮಟ್ಟದ ಜನಸಂಪರ್ಕ ಸಭೆಯಲ್ಲಿ ಮಾತನಾಡಿದ ಅವರು, ನಿಮ್ಮ ಬಳಿಗೆ ಸಮಸ್ಯೆ ಹೇಳಿಕೊಂಡು ಬರುವ ಸಾರ್ವಜನಿಕರನ್ನ ನೇರವಾಗಿ ನನ್ನ ಬಳಿಗೆ ಕರೆತರುವ ಬದಲು ತಾವುಗಳೇ ಮುಂದಾಳತ್ವ ವಹಿಸಿ ಅಧಿಕಾರಿಗಳ ಬಳಿ ತೆರಳಿ ಜನರ ಸಮಸ್ಯೆ ನಿವಾರಣೆಗೆ ಸಹಕರಿಸಬೇಕು.
ಜೊತೆಗೆ ಅಧಿಕಾರಿಗಳು ರೈತರ ಮತ್ತು ಸಾರ್ವಜನಿಕರ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಜನಸಾಮಾನ್ಯರುಗಳ ಪೌತಿ ಖಾತೆ, ಭೂ ದಾಖಲೆಗಳಲ್ಲಿನ ಲೋಪದೋಷಗಳು, ಖಾತೆ ವರ್ಗಾವಣೆ, ವೃದ್ದಾಪ್ಯ ವೇತನ ಅಂಗವಿಕಲ ವೇತನ ಅರ್ಜಿಗಳ ವಿಲೇವಾರಿ ಮಾಡಿ ಸಮಸ್ಯೆಗಳನ್ನು ಪರಿಹರಿಸುವಂತೆ ಸ್ಥಳದಲ್ಲೆ ಇದ್ದ ತಾಲೂಕು ಮಟ್ಟದ ಹಾಗೂ ಹೋಬಳಿ ಮಟ್ಟದ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದರು.
ನಂತರ ಸಕಲೇಶಪುರದ ಉಪವಿಭಾಗಾಧಿಕಾರಿ ಗಿರೀಶ್ ನಂದನ್ ಮಾತನಾಡಿ ಸಾರ್ವಜನಿಕರು ಹಾಗೂ ರೈತರು ವಿವಿಧ ಇಲಾಖೆಗಳ ಕಚೇರಿಗೆ ನೇರವಾಗಿ ಬಂದು ತಮ್ಮ ಕೆಲಸ ಕಾರ್ಯಗಳನ್ನು ಮಾಡಿಸಿಕೊಳ್ಳುವ ಬದಲು ಮಧ್ಯವರ್ತಿಗಳ ಮೂಲಕ ತಮ್ಮ ಕೆಲಸಕಾರ್ಯಗಳನ್ನು ಮಾಡಿಸಿಕೊಳ್ಳಲು ಪರದಾಡುತ್ತಿರುತ್ತಾರೆ. ಅಂತಹ ಅವಕಾಶಗಳಿಗೆ ಎಡೆ ಮಾಡಿಕೊಡದೆ ನೇರವಾಗಿ ಜನರೇ ಅಧಿಕಾರಿಗಳ ಬಳಿ ಬಂದು ತಮ್ಮ ಕೆಲಸ ಕಾರ್ಯಗಳನ್ನು ನಿರ್ವಹಿಸಿ ಕೊಳ್ಳಬೇಕೆಂದು ಮತ್ತು ಅಧಿಕಾರಿಗಳು ತಮ್ಮ ಸ್ವಂತ ಕೆಲಸಗಳನ್ನು ಬದಿಗಿರಿಸಿ ಕಚೇರಿಯ ಕೆಲಸಕ್ಕೆ ಆಗಮಿಸಿ ಸಾರ್ವಜನಿಕರು ಹಾಗೂ ರೈತರ ಕೆಲಸ ಕಾರ್ಯಗಳನ್ನು ವಿಳಂಬ ಮಾಡದೆ ನಿರ್ದಿಷ್ಟಾವದಿಯಲ್ಲಿ ನಿರ್ವಹಿಸಬೇಕು ಎಂದು ಕಿವಿಮಾತು ಹೇಳಿದರು.