ಹಾಸನ : ಖಾಸಗಿ ವ್ಯಕ್ತಿಗಳು ಅಕ್ರಮವಾಗಿ ಲೇಔಟ್ ನಿರ್ಮಿಸುವುದನ್ನು ನೋಡುತ್ತಿದ್ದರೆ ಹಾಸನದಲ್ಲಿರುವ ನಗರಾಭಿವೃದ್ಧಿ ಪ್ರಾಧಿಕಾರ ಮತ್ತು ಹೌಸಿಂಗ್ ಬೋರ್ಡ್ ಇಲಾಖೆಗಳನ್ನು ಮುಚ್ಚುವುದೇ ಒಳ್ಳೆಯದು ಎಂದು ಮಾಜಿ ಸಚಿವ ಹೆಚ್ ಡಿ ರೇವಣ್ಣ ಆಕ್ರೋಶ ವ್ಯಕ್ತಪಡಿಸಿದರು.
ಹಾಸನದ ಪ್ರವಾಸಿ ಮಂದಿರದಲ್ಲಿ ಮಾತನಾಡಿದ ಅವರು, ನಗರ ಮತ್ತು ಹೊರವಲಯದ ಸುತ್ತಮುತ್ತ ಹೊರ ಜಿಲ್ಲೆಯಿಂದ ಬಂದಂತಹ ವ್ಯಕ್ತಿಗಳು ಕಾನೂನು ಬಾಹಿರವಾಗಿ ಲೇಔಟ್ ಮಾಡುತ್ತಿದ್ದು, ಇದರಲ್ಲಿ ಕೆಲವು ಅಧಿಕಾರಿಗಳು ಭಾಗಿಯಾಗಿದ್ದಾರೆ.
ಹೀಗಾಗಿ, ನಾನು ಸಿಎಂ ಮತ್ತು ವಸತಿ ಸಚಿವರಿಗೆ ಮನವಿ ಮಾಡುತ್ತೇನೆ. ಕೂಡಲೇ ಹಾಸನದಲ್ಲಿರುವ ನಗರಾಭಿವೃದ್ಧಿ ಪ್ರಾಧಿಕಾರ ಮತ್ತು ಹೌಸಿಂಗ್ ಬೋರ್ಡ್ಗಳನ್ನು ಮುಚ್ಚುವುದು ಒಳ್ಳೆಯದು. ಇಲ್ಲವಾದರೆ ಅಧಿಕಾರಿಗಳಿಗೆ ಲೂಟಿ ಮಾಡುವುದಕ್ಕೆ ಸರ್ಕಾರವೇ ಅವಕಾಶ ಮಾಡಿಕೊಟ್ಟಂತಾಗುತ್ತದೆ ಎಂದು ಹೇಳಿದರು.
ಓದಿ : ಶಾಲಾ ಅವ್ಯವಸ್ಥೆ, ಮಕ್ಕಳ ಪರದಾಟ, ಮೂಲ ಸೌಕರ್ಯಕ್ಕೆ ಗ್ರಾಮಸ್ಥರ ಒತ್ತಾಯ
ಲೇಔಟ್ ನಿರ್ಮಾಣ ಮಾಡುವುದು ಹಾಸನದಲ್ಲಿ ದಂಧೆಯಾಗಿ ಮಾರ್ಪಟ್ಟಿದೆ. ನಗರದಲ್ಲಿ ಯಾವ ಜಾಗ, ಯಾರ ಹೆಸರಿಗೆ ಬೇಕಾದರೂ ಬರೆಸಿಕೊಳ್ಳಬಹುದು. ಪರ್ಸೆಂಟೇಜ್ ಲೆಕ್ಕದಲ್ಲಿ ಹಂಚಿಕೆಯಾಗಿ ಲೇಔಟ್ಗಳು ನಡೆಯುತ್ತಿವೆ. ಸ್ಥಳೀಯವಾಗಿ ಸಣ್ಣಪುಟ್ಟ ಲೇಔಟ್ ಮಾಡುವವರಿಗೆ ತೊಂದರೆ ಕೊಡುತ್ತಿದ್ದಾರೆ. ಇದನ್ನು ಸಮಗ್ರ ತನಿಖೆ ನಡೆಸಬೇಕು.
ಒಂದು ಇಲಾಖೆಯ ಹೆಸರೇಳಿ ಸೈಟ್ ಮಾಡಿ ದಂಧೆ ಮಾಡುತ್ತಿದ್ದಾರೆ. ಇದರ ಬಗ್ಗೆ ಸರ್ಕಾರ ಕೂಡ ಚಿಂತನೆ ಮಾಡಬೇಕು. ಜಿಲ್ಲಾಧಿಕಾರಿಗಳು ಇಂತಹ ವ್ಯಕ್ತಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ಮುಂದಿನ ದಿನಗಳಲ್ಲಿ ಇದರ ವಿರುದ್ಧ ಹೋರಾಟ ಮಾಡುವ ಪ್ರಮೇಯ ಬಂದರೆ, ಎಲ್ಲಾ ಶಾಸಕರು ಸೇರಿ ಕಚೇರಿ ಮುಂದೆ ಪ್ರತಿಭಟನೆ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು.