ಹಾಸನ: ನ್ಯಾಯಯುತವಾದ ಬೇಡಿಕೆಗಳನ್ನು ಈಡೇರಿಸುವವರೆಗೂ ತುರ್ತು ಸೇವೆ ಹೊರತುಪಡಿಸಿ ಉಳಿದ ಎಲ್ಲಾ ಸೇವೆಗಳನ್ನು ಸ್ಥಗಿತಗೊಳಿಸಲಾಗುವುದು ಹಾಗೂ ಕೊರೊನಾ ಪ್ರಕರಣದ ಸೇವೆ ಮಾಡಲಾಗುವುದು ಆದರೆ ಅಂಕಿ-ಅಂಶ ನೀಡಲಾಗುವುದಿಲ್ಲ ಎಂದು ಕರ್ನಾಟಕ ಸರ್ಕಾರಿ ವೈದ್ಯಾಧಿಕಾರಿಗಳ ಸಂಘದಿಂದ ಜಿಲ್ಲಾಧಿಕಾರಿ ಆರ್. ಗಿರೀಶ್ ಗೆ ಮನವಿ ಸಲ್ಲಿಸಲಾಯಿತು.
ಕಳೆದ ಆರೇಳು ತಿಂಗಳಿನಿಂದ ಸರ್ಕಾರಿ ವೈದ್ಯಾಧಿಕಾರಿಗಳ ಸಂಘವು ಬೇಡಿಕೆ ಈಡೇರಿಸುವಂತೆ ವಿವಿಧ ಹಂತಗಳಲ್ಲಿ ಮುಖ್ಯಮಂತ್ರಿಗಳ ಗಮನಕ್ಕೆ ತಂದು ಮನವಿ ಸಲ್ಲಿಸಲಾಗಿದ್ದರೂ ಇದುವರೆಗೂ ಈಡೇರಿಸಿರುವುದಿಲ್ಲ. ವೈದ್ಯಕೀಯ ಶಿಕ್ಷಣ ಇಲಾಖೆಯಲ್ಲಿ ಏಳನೇ ವೇತನ ಆಯೋಗದ ನಿಯಮದಂತೆ ಸರಿಸಮನಾದ ವೇತನ ನೀಡುತ್ತಿರುವಾಗ ನಮಗೂ ನೀಡಬೇಕು. ನಾವುಗಳು ಸಮಾನ ಕೆಲಸ ಮಾಡುತ್ತಿರುವಾಗ ಸಮಾನ ವೇತನ ಕೊಡಬೇಕು ಎಂದು ಒತ್ತಾಯಿಸಿದರು.
ಕೊರೊನಾ ಸಂದರ್ಭದಲ್ಲಿ ವೈದ್ಯರು ತಮ್ಮ ಸಂಸಾರ ಮರೆತು ವೈಯಕ್ತಿಕ ಬದುಕನ್ನು ಬದಿಗಿಟ್ಟು ಹಗಲು -ಇರುಳು ಶ್ರಮಿಸುತ್ತಿದ್ದಾರೆ. ನಮ್ಮ ಜೊತೆ ಕೆಲಸ ಮಾಡಿದವರು ಬಹಳ ಮಂದಿ ಸಾವನ್ನಪ್ಪಿದ್ದಾರೆ. ವೇತನವನ್ನು ಹೆಚ್ಚಿಸುವುದರಿಂದ ಒಂದು ನೈತಿಕ ಬೆಂಬಲವನ್ನು ವೈದ್ಯಾಧಿಕಾರಿಗಳಿಗೆ ಕೊಟ್ಟಾಂತಾಗುತ್ತದೆ ಎಂದರು.
ಬೆಂಗಳೂರಿನ ಬಿಬಿಎಂಪಿ ವ್ಯಾಪ್ತಿಯಲ್ಲಿ 48 ವಿವಿಧ ಪ್ರಾಥಮಿಕ ಸಮುದಾಯ ಆರೋಗ್ಯ ಕೇಂದ್ರಗಳಿವೆ. ಈ ಆರೋಗ್ಯ ಕೇಂದ್ರಗಳನ್ನು ಆರೋಗ್ಯ ಇಲಾಖೆ ವ್ಯಾಪ್ತಿಗೆ ಒಳಪಡಿಸಿದರೆ ಇನ್ನೂ ಹೆಚ್ಚಿನ ಸೇವೆಗಳನ್ನು ನೀಡುವಲ್ಲಿ ಆರೋಗ್ಯ ಇಲಾಖೆಗೆ ಸಹಾಯಕವಾಗುತ್ತದೆ ಎಂದು ಹೇಳಿದ ಅವರು, ಸರ್ಕಾರವು ನ್ಯಾಯಯುತ ಎರಡು ಬೇಡಿಕೆಗಳನ್ನು ಈಡೇರಿಸಬೇಕು ಎಂದು ಇಡೀ ರಾಜ್ಯಾದ್ಯಂತ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಮನವಿ ಸಲ್ಲಿಸಲಾಗುತ್ತಿದೆ ಎಂದು ತಿಳಿಸಿದರು.
ಮಂಗಳವಾರದಿಂದ ತುರ್ತು ಸೇವೆ ಹೊರತುಪಡಿಸಿ ಉಳಿದ ಎಲ್ಲಾ ಹೊರ ರೋಗಿ ಸೇವೆಗಳನ್ನು ಸ್ಥಗಿತಗೊಳಿಸಲಾಗುವುದು. ಕೊರೊನಾ ಪ್ರಕರಣದ ಸೇವೆ ಮಾಡಲಾಗುವುದು. ಕೋವಿಡ್ನ ಯಾವ ವರದಿಯನ್ನು ಸಲ್ಲಿಸಬಾರದು ಎಂದು ನಮ್ಮ ಕೇಂದ್ರ ಸಂಘದಿಂದ ತೀರ್ಮಾನಕೈಗೊಳ್ಳಲಾಗಿದೆ. ಅದರಂತೆ ಹಾಸನ ಜಿಲ್ಲೆಯಲ್ಲಿ ಕೊರೊನಾ ಪ್ರಕರಣದ ಬಗ್ಗೆ ಇಂದಿನಿಂದ ಯಾವ ಮಾಹಿತಿ ಲಭ್ಯವಿರುವುದಿಲ್ಲ ಎಂದು ಮನವಿ ಮಾಡಿದರು.