ಹಾಸನ: ಆರ್ಟಿಓ ಅಧಿಕಾರಿ ಮತ್ತು ನಿವೃತ್ತ ನೌಕರರು ಸೇರಿ ಇಲಾಖೆಯ ನೌಕರರ ವರ್ಗಾವಣೆ ದಂಧೆಯಲ್ಲಿ ತೊಡಗಿರುವುದಾಗಿ ಮಾಜಿ ಸಚಿವ ಹೆಚ್.ಡಿ.ರೇವಣ್ಣ ಗಂಭೀರವಾಗಿ ಆರೋಪಿಸಿದ್ದಾರೆ.
ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಲ್ಲಿಕಾರ್ಜುನ ಎಂಬ ಆರ್ಟಿಓ ಅಧಿಕಾರಿ ಹಾಗೂ ಇತರೆ 6 ಮಂದಿ ನಿವೃತ್ತ ನೌಕರರು ಸೇರಿ ಇದೇ ಇಲಾಖೆಯ ನೌಕರರ ವರ್ಗಾವಣೆ ದಂಧೆಯಲ್ಲಿ ತೊಡಗಿದ್ದಾರೆ. ಸಾರಿಗೆ ಇಲಾಖೆಯಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆಯುತ್ತಿದ್ದು, ನೂರು ಮಂದಿ ಆರ್ಟಿಓ ಅಧಿಕಾರಿಗಳ ವರ್ಗಾವಣೆಗೆ 85 ಕೋಟಿ ನೀಡುವಂತೆ ಒತ್ತಡ ಹೇರಲಾಗುತ್ತಿದೆ ಎಂದರು.
ರಾಜ್ಯದಲ್ಲಿ ಸಾರಿಗೆ ಇಲಾಖೆ ಮೂಲಕ ಚೆಕ್ ಪೋಸ್ಟ್ಗಳನ್ನು ನಿರ್ಮಾಣ ಮಾಡಲಾಗಿದ್ದು,14 ಚೆಕ್ ಪೋಸ್ಟ್ಗಳಲ್ಲಿ ಪ್ರತಿದಿನ ಕೋಟ್ಯಂತರ ರೂಪಾಯಿ ವಸೂಲಿ ಮಾಡಲಾಗುತ್ತಿದ್ದು, ಪ್ರತಿದಿನ 12 ಕೋಟಿ ವಸೂಲಿ ಮಾಡಲಾಗುತ್ತಿದೆ. ರಾಜ್ಯ ಸಾರಿಗೆ ಇಲಾಖೆಯಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆಯುತ್ತಿದ್ದು, ಮುಖ್ಯಮಂತ್ರಿ ಯಡಿಯೂರಪ್ಪ ಅವರು ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕು ಎಂದು ಆಗ್ರಹಿಸಿದರು.
ಬಿಜಾಪುರದ ಮಲ್ಲಿಕಾರ್ಜುನ ಎಂಬ ಕಾನ್ಸ್ಟೇಬಲ್ (ಗನ್ಮ್ಯಾನ್) ಒಬ್ಬರು ಬಡ್ತಿ ಪಡೆದು ಆರ್ಟಿಓ ಅಧಿಕಾರಿಯಾಗಿ ನೇಮಕವಾಗಿದ್ದಾರೆ. ಇವರು ವರ್ಗಾವಣೆಗೆ ಕೋಟ್ಯಂತರ ರೂಪಾಯಿ ಪಡೆಯುತ್ತಿರುವ ಬಗ್ಗೆ ಪ್ರಕಟವಾಗಿದೆ. ಜೊತೆಗೆ ಈ ಬಗ್ಗೆ ನನಗೂ ಮಾಹಿತಿದೆ. ಹಾಸನ ಜಿಲ್ಲೆಯಲ್ಲಿ 8 ಆರ್ಟಿಓ ಇನ್ಸ್ಪೆಕ್ಟರ್ಗಳ ಹುದ್ದೆ ಖಾಲಿಯಿದ್ದು, ನಿಯೋಜನೆ ಮೇರೆಗೆ ಪದ್ಮನಾಭ ಕಾರ್ಯ ನಿರ್ವಹಿಸುತ್ತಿದ್ದಾರೆ. ಸಕಲೇಶಪುರ ಆರ್ಟಿಓನಲ್ಲಿ ಎರಡು ಹುದ್ದೆಗಳಿದ್ದು, ಸತೀಶ್ ಒಬ್ಬರೇ ಕಾರ್ಯನಿರ್ವಹಿಸುತ್ತಿದ್ದಾರೆ. ಇದೇ ರೀತಿ ರಾಜ್ಯದ ಸಾರಿಗೆ ಇಲಾಖೆಯಲ್ಲಿ ಅಧಿಕಾರಿಗಳ ನಿಯೋಜನೆ ಸಮರ್ಪಕವಾಗಿಲ್ಲ. ಎಸಿಬಿ, ಲೋಕಾಯುಕ್ತ ಬಂದ್ ಮಾಡೋದು ಒಳ್ಳೆಯದು. ಇದರಿಂದ ಭ್ರಷ್ಟಾಚಾರ ಫ್ರೀಯಾಗಿ ನಡೆಯಲಿ ಎಂದು ವ್ಯಂಗ್ಯವಾಡಿದರು.
ಹೀಗೆ ಮಾಡಿದರೆ ಭ್ರಷ್ಟಾಚಾರ ನಿರಾತಂಕವಾಗಿ ನಡೆಯಲಿದೆ. ಎಸಿಬಿ ಮತ್ತು ಲೋಕಾಯುಕ್ತ ಏನು ಮಾಡುತ್ತಿದೆ ಎಂದು ಕೆಂಡಾಮಂಡಲವಾದ ರೇವಣ್ಣ, ಮುಖ್ಯಮಂತ್ರಿಗಳೇ ನೀವು ಕಣ್ಣು ಮುಚ್ಚಿ ಕುಳಿತ್ತಿದ್ದೀರಾ ಎಂದು ಪ್ರಶ್ನಿಸಿದರು. ಆರ್ಟಿಓ ನಿವೃತ್ತ ಅಧಿಕಾರಿಗಳು ಕೋಟಿ ಕೋಟಿ ಹಣ ಮಾಡಿದ್ದಾರೆ. ಅವರ ಮನೆ ಮೇಲೆ ರೈಡ್ ಮಾಡಲಿ ನೋಡೋಣ ಎಂದು ಸವಾಲು ಹಾಕಿದರು. ಸಾರಿಗೆ ಇಲಾಖೆಯ ಪ್ರಧಾನ ಕಾರ್ಯದರ್ಶಿಯವರು ಯಾವುದೇ ನಿಯೋಜನೆಗಳನ್ನು ಮಾಡಬಾರದೆಂದು ಸಾರಿಗೆ ಆಯುಕ್ತರಿಗೆ ಸ್ಪಷ್ಟವಾಗಿ ನಿರ್ದೇಶನ ನೀಡಿದ್ದರೂ ಸಹ ಇಲಾಖೆಯಲ್ಲಿ ಕಳೆದ ಹದಿನೈದು ದಿನಗಳಲ್ಲಿ ಸುಮಾರು 50ಕ್ಕಿಂತ ಹೆಚ್ಚು ನಿಯೋಜನೆಗಳು ಮಾಡಿದ್ದು, ಮುಖ್ಯಮಂತ್ರಿಗಳಿಂದ ಅನುಮೋಧನೆ ಪಡೆದಿರುವುದಿಲ್ಲ ಎಂದರು. ಇಲಾಖೆಗಳಲ್ಲಿ ಈ ರೀತಿ ಭ್ರಷ್ಟಾಚಾರ ನಡೆಯುತ್ತಿದ್ದರೆ, ತನಿಖೆ ಸಂಸ್ಥೆಗಳಾದ ಲೋಕಾಯುಕ್ತ ಹಾಗೂ ಎಸಿಬಿ ಯಾಕೆ ಬೇಕು. ಈ ಸಂಸ್ಥೆಗಳನ್ನು ಸರ್ಕಾರ ಕೂಡಲೇ ಬಂದ್ ಮಾಡುವಂತೆ ತಾಕೀತು ಮಾಡಿದರು.
ಇನ್ನು, ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಹಲವು ಇಲಾಖೆಗಳಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆಯುತ್ತಿರುವ ಬಗ್ಗೆ ಮಾಹಿತಿ ಬಂದಿದ್ದು, ಮುಂದಿನ ದಿನಗಳಲ್ಲಿ ಪ್ರತಿ ಇಲಾಖೆಗಳ ಭ್ರಷ್ಟಾಚಾರದ ಬಗ್ಗೆ ದಾಖಲೆ ಸಮೇತ ಬಿಡುಗಡೆ ಮಾಡುವುದಾಗಿ ಎಚ್ಚರಿಸಿದರು.