ಹಾಸನ: ನಗರದ ಯೂನಿಟಿ ಸ್ಕ್ಯಾನಿಂಗ್ ಸೆಂಟರ್ಗೆ ಜಿಲ್ಲಾಧಿಕಾರಿ ಆರ್. ಗಿರೀಶ್ ಭೇಟಿ ನೀಡಿದ್ದು, ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ಸ್ಕ್ಯಾನಿಂಗ್ ಸೌಲಭ್ಯವಿದ್ದರೂ ಖಾಸಗಿ ಸ್ಕ್ಯಾನಿಂಗ್ ಸೆಂಟರ್ಗೆ ಹೋಗಲು ಬರೆದು ಕೊಟ್ಟ ಪ್ರಕರಣಗಳನ್ನು ಪರಿಶೀಲಿಸಿ ರೋಗಿಗಳಿಂದ ಮಾಹಿತಿ ಪಡೆದು ಎಚ್ಚರಿಕೆ ನೀಡಿದರು.
ಜಿಲ್ಲಾಧಿಕಾರಿ ಆರ್. ಗಿರೀಶ್ರ ಅವರು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ ಸತೀಶ್, ಜಿಲ್ಲಾ ಶಸ್ತ್ರ ಚಿಕಿತ್ಸಕರಾದ ಡಾ ಕೃಷ್ಣಮೂರ್ತಿ ಹಾಗೂ ಹಾಸನ ತಾಲೂಕು ವೈದ್ಯಾಧಿಕಾರಿ ಡಾ ವಿಜಯ್ ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ ಹಿರಣ್ಣಯ್ಯ ಅವರೊಂದಿಗೆ ನಗರದ ಯೂನಿಟಿ ಸ್ಕ್ಯಾನಿಂಗ್ ಸೆಂಟರ್ಗೆ ಭೇಟಿ ನೀಡಿದರು. ಈ ವೇಳೆ ಜಿಲ್ಲಾಧಿಕಾರಿ ಸರ್ಕಾರಿ ಆಸ್ಪತ್ರೆಯಿಂದ ಚೀಟಿ ಬರೆಸಿ ತಂದಿರುವ ರೋಗಿಗಳನ್ನು ವಿಚಾರಿಸಿ ವೈದ್ಯಾಧಿಕಾರಿಗಳಿಂದಲೂ ವಿವರಣೆ ಪಡೆದುಕೊಂಡರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರಕಾರಿ ಆಸ್ಪತ್ರೆಯಲ್ಲಿ ವೈದ್ಯರು ಸ್ಕ್ಯಾನ್ ಮಾಡಲು ಖಾಸಗಿ ಆಸ್ಪತ್ರೆಗೆ ಶಿಫಾರಸು ಮಾಡುತ್ತಿದ್ದಾರೆ ಎನ್ನುವ ಬಗ್ಗೆ ರೈತರ ಜೊತೆ ಸಭೆ ಮಾಡಿದಾಗ ಹೆಚ್ಚಿನ ದೂರುಗಳು ಕೇಳಿ ಬಂದಿದ್ದವು. ಈ ಹಿನ್ನಲೆಯಲ್ಲಿ ಸ್ಕ್ಯಾನಿಂಗ್ ಹಾಗೂ ಆಸ್ಪತ್ರೆಗೆ ಭೇಟಿ ಕೊಡಲಾಗಿದೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಕೆಲ ಕಡೆ ಟೆಕ್ನಿಶನ್ಗಳ ಕೊರತೆ ಇದೆ. ನಮ್ಮಲ್ಲಿ ಸೌಲಭ್ಯಗಳು ಇದ್ದರೂ ಇಲ್ಲಿಗೆ ಬರೆದು ಕಳುಹಿಸಿದ್ದಾರೆ. ಕೊರತೆ ಇರುವ ನೌಕರರ ನೇಮಕಕ್ಕೆ ಕ್ರಮಕೈಗೊಳ್ಳುವುದಾಗಿ ಹೇಳಿದರು.
ಇನ್ನು ಜಿಲ್ಲಾ ಆಸ್ಪತ್ರೆಯಲ್ಲಿ ಸೌಲಭ್ಯ ಇದ್ದರೂ ಬೇರೆಡೆಗೆ ಬರೆದುಕೊಟ್ಟ ಪ್ರಕರಣದಲ್ಲಿ ಸಂಬಂಧ ಪಟ್ಟವರಿಂದ ವಿವರಣೆ ಪಡೆಯಲು ಅವರು ವೈದ್ಯಾಧಿಕಾರಿಗಳಿಗೆ ಸೂಚಿಸಿದರು.