ಹಾಸನ: ಅದೊಂದು ಪಟ್ಟ ಹಳ್ಳಿಯ ಶಾಲೆ, ಶಾಲೆಯಲ್ಲಿ ಬರೋಬ್ಬರಿ 250 ಮಕ್ಕಳು, ಈ ಶಾಲೆಯಲ್ಲಿ ಎಲ್ಲ ರೀತಿಯ ಸೌಲಭ್ಯಗಳು ಇವೆ. ಆದರೆ ವಲಸೆ ಹೋಗುವ ತಂದೆ - ತಾಯಿಗಳು ಮಾತ್ರ ನಮ್ಮ ಮಕ್ಕಳು ಈ ಶಾಲೆಗೆ ಹೋಗಬೇಕು, ಇಲ್ಲಿಯೇ ವಿದ್ಯಾಭ್ಯಾಸ ಮಾಡಬೇಕು ಅಂತಾರೆ.
ಸರ್ಕಾರಿ ಶಾಲೆಗಳೆಂದರೆ ಮೂಗು ಮುರಿಯುವ ಪೋಷಕರೇ ಹೆಚ್ಚು. ಆದರೆ ಅದಕ್ಕೆ ಅಪವಾದವೆಂಬಂತೆ ಹಕ್ಕಿ-ಪಿಕ್ಕಿ ಮತ್ತು ಶಿಳ್ಳೆಕ್ಯಾತ ಜನಾಂಗದ ಮಕ್ಕಳೇ ಹೆಚ್ಚಿರುವ ಬೇಲೂರು ತಾಲೂಕಿನ ಶಾಲೆ ತಾಲೂಕಿನಲ್ಲಿ ಎರಡನೇ ಅತಿ ದೊಡ್ಡ ಶಾಲೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಪ್ರಾಥಮಿಕ ಶಾಲಾ ಶಿಕ್ಷಣ ವ್ಯವಸ್ಥೆಯಲ್ಲಿ ಮುಂಚೂಣಿಯ ಹಾದಿಯಲ್ಲಿದೆ ಈ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ. ಇತರ ಶಾಲೆಗಳಿಗೂ ಮಾದರಿಯಾಗುವಂತೆ ಬೆಳವಣಿಗೆ ಕಂಡಿದೆ.
ಪರಿಶಿಷ್ಟ ಜಾತಿ ಪರಿಶಿಷ್ಟ ಜನಾಂಗದವರೇ ಹೆಚ್ಚಾಗಿರುವ ಹಿಂದುಳಿದ ಪ್ರದೇಶವೆಂದೇ ಗುರುತಿಸಲ್ಪಟ್ಟಿರುವ ಈ ಶಾಲೆಯಲ್ಲಿ ಶಾಲಾ ಶಿಕ್ಷಕರು, ಶಾಲಾಭಿವೃದ್ದಿ ಸಮಿತಿಯ ಕಾಳಜಿ ಪರಿಶ್ರಮ ಸ್ಥಳೀಯ ಗ್ರಾಮಸ್ಥರ ಪ್ರೋತ್ಸಾಹದ ಜೊತೆಗೆ ಖಾಸಗಿ ಸಂಘ ಸಂಸ್ಥೆ ಹಾಗೂ ಇತರರ ಉದಾರ ಕೊಡುಗೆಯಿಂದ ಹಲವು ಕೊರತೆಗಳನ್ನು ಎದುರಿಸಿ ಗ್ರಾಮದವರೆಲ್ಲ ಸೇರಿ ಶೈಕ್ಷಣಿಕ ವಾತಾವರಣವನ್ನು ಚಂದಗೊಳಿಸಿದೆ.
50 ಲಕ್ಷದಲ್ಲಿ ಶಾಲೆಯ ನವೀಕರಣ ಮಾಡಿದ ಖಾಸಗಿ ಕಂಪನಿ:
ಈ ಶಾಲೆ ಇರುವುದು ಹಾಸನ ಜಿಲ್ಲೆ ಬೇಲೂರು ತಾಲೂಕಿನ ಅಂಗಡಿಹಳ್ಳಿ ಗ್ರಾಮದಲ್ಲಿ. ಗ್ರಾಮದಲ್ಲಿ ಅತಿ ಹೆಚ್ಚು ಹಕ್ಕಿ ಪಕ್ಕಿ ಜನಾಂಗದವರು ವಾಸ ಮಾಡುತ್ತಿದ್ದಾರೆ. ಕಳೆದ ಮೂರ್ನಾಲ್ಕು ವರ್ಷಗಳ ಹಿಂದೆ ಈ ಶಾಲೆಯ ದುಃಸ್ಥಿತಿಯ ಕಂಡು ಮರುಕಪಟ್ಟ ದಿನಗಳು ಇದೆ. ಆದರೆ ಕೊಲಿಯನ್ಸ್ ಎರೋಸ್ಪೇಸ್ ಅನ್ನೋ ಖಾಸಗಿ ಕಂಪನಿಯೊಂದು ಈ ಶಾಲೆಯ ದುಃಸ್ಥಿತಿ ಕಂಡು ಸುಮಾರು 50 ಲಕ್ಷ ಹಣ ಕೊಟ್ಟು ದತ್ತು ತೆಗೆದುಕೊಂಡಿತ್ತು. ಅದರ ಫಲವಾಗಿ ಇಡೀ ಬೇಲೂರು ತಾಲೂಕಿಗೆ ಎರಡನೇ ಅತಿ ಹೆಚ್ಚು ವಿದ್ಯಾರ್ಥಿಗಳಿರುವ ಶಾಲೆ ಎಂದು ಹೆಸರು ವಾಸಿಯಾಗಿದೆ. ಈ ಹಿಂದೆ ಶಾಲೆಯ ಪರಿಸರವಂತು ಹೇಳತೀರದು. ಆದರೆ, ಇವತ್ತಿನ ಪರಿಸ್ಥಿತಿ ಮಾತ್ರ ತುಂಬ ಸೊಗಸಾಗಿದೆ ಅನ್ನುತ್ತಾರೆ ಇಲ್ಲಿ ಶಾಲೆ ಶಿಕ್ಷಕರು.
120 ರಿಂದ 260ಕ್ಕೆ ಏರಿಕೆಯಾದ ಮಕ್ಕಳ ಸಂಖ್ಯೆ:
120 ಮಕ್ಕಳಿದ್ದ ಈ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಈಗ 260 ಮಕ್ಕಳಿದ್ದಾರೆ. ಇದರಲ್ಲಿ 206 ಮಕ್ಕಳು ಅತ್ಯಂತ ಹಿಂದುಳಿದ ಹಕ್ಕಿಪಿಕ್ಕಿ ಜನಾಂಗಕ್ಕೆ ಸೇರಿದ್ದು, 37 ಮಕ್ಕಳು ಶಿಳ್ಳೆಕ್ಯಾತ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಉಳಿದಂತೆ ಇತರ ಹಿಂದುಳಿದ ವರ್ಗದ 17 ಮಕ್ಕಳಿದ್ದಾರೆ. ರಾಜ್ಯದಲ್ಲೇ ವಿರಳ ಸಂಖ್ಯೆಯಲ್ಲಿ ಇರುವ ಹಾಗೂ ಅತ್ಯಂತ ಹಿಂದುಳಿದ ವರ್ಗಗಳಾಗಿರುವ ಹಕ್ಕಿಪಿಕ್ಕಿ ಹಾಗೂ ಶಿಳ್ಳೆಕ್ಯಾತ ಜನಾಂಗದ ಜನರು ಉತ್ತಮ ಶಿಕ್ಷಣ ಪಡೆದಿರುವುದು ಕಡಿಮೆ. ಅಂತಹ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಒದಗಿಸುವ ನಿಟ್ಟಿನಲ್ಲಿ ಅಭಿವೃದ್ಧಿಗೆ ಕೋಲಿನ್ಸ್ ಏರೋಸ್ಪೇಸ್ ಸಂಸ್ಥೆಯು ಸಾಮಾಜಿಕ ಹೊಣೆಗಾರಿಕೆ ನಿಧಿಯಿಂದ 50 ಲಕ್ಷ ರೂ. ವೆಚ್ಚದಲ್ಲಿ ಎರಡು ಕೊಠಡಿ ಒಂದು ಸಭಾಂಗಣ ಮತ್ತು ಹಾಲಿ ಇದ್ದ ಎಲ್ಲಾ ಕೊಠಡಿಗಳ ನವೀಕರಣ ಮಾಡಿಕೊಟ್ಟಿದೆ.
ಅಡುಗೆ ಕೋಣೆ, ಶೌಚಾಲಯಗಳು, ಸ್ವಚ್ಛವಾಗಿ ನಿರ್ವಹಣೆಗೊಂಡಿದ್ದು, ಇದರಲ್ಲಿ ಶಾಲಾ ಮುಖ್ಯಶಿಕ್ಷಕಿ ಎ.ಎಸ್ ಭಾರತಿ ಹಾಗೂ ಶಿಕ್ಷಕರ ಶ್ರಮವು ಎದ್ದು ಕಾಣುತ್ತದೆ. ಶಾಲೆಯಲ್ಲಿ 7 ತರಗತಿ ಕೊಠಡಿ ಹಾಗೂ 2 ಶಿಕ್ಷಕರ ಕೊಠಡಿಗಳು ಇದ್ದು, ಹತ್ತು ಮಂದಿ ಶಿಕ್ಷಕರಿದ್ದಾರೆ. ಶಾಲೆಯ ಆವರಣ ಒಂದು ರೀತಿಯಲ್ಲಿ ಶೃಂಗಾರಗೊಂಡ ಮದುವಣಗಿತ್ತಿಯಂತಿದೆ. ಜಾನಪದ ಶೈಲಿಯ ಚಿತ್ರಕಲೆಗಳನ್ನು ಒಳಗೊಂಡು ಆಕರ್ಷಿಸುತ್ತಿವೆ.
ಗೋಡೆ ಬರಹದ ಮೂಲಕ ಕಲಿಕೆಗೆ ಪ್ರೇರಣೆ:
ಶಾಲೆಯಲ್ಲಿ ಹತ್ತಾರು ವಿಶಿಷ್ಟ ಆಕರ್ಷಕ ಚಿತ್ರಗಳ ಮೂಲಕ ಭೂ ಮಂಡಲ, ಸೂರ್ಯಗ್ರಹಣ ಚಂದ್ರಗ್ರಹಣ ಸೇರಿದಂತೆ ಅನೇಕ ವಿಜ್ಞಾನ ವಿಷಯಗಳನ್ನು ಸರಳವಾಗಿ ಅರ್ಥವಾಗುವಂತೆ ಹಾಗೂ ಮಕ್ಕಳ ಜ್ಞಾನದ ಹಸಿವು ಹೆಚ್ಚಿಸುವಂತೆ ಚಿತ್ರಗಳ ಮೂಲಕ ವಿವರಿಸಲಾಗಿದೆ. ಶಾಲಾ ಕೊಠಡಿಯೊಳಗೆ ಇದೇ ರೀತಿ ಕಲಿಕೆಗೆ ಪೂರಕ ವಾತಾವರಣ ಸೃಷ್ಟಿಸಲಾಗಿದೆ. ಜಾನಪದ ಶೈಲಿಯ ಚಿತ್ರಗಳು ಗಮನ ಸೆಳೆಯುತ್ತಿವೆ. ಶೋಷಿತ ಜನರ ಶ್ರೇಯೋಭಿವೃದ್ಧಿಗೆ ಶ್ರಮಿಸುತ್ತಿರುವ ಮರಿಜೋಸೆಫ್ ಹಾಗೂ ಹೂರಾಜ ಮತ್ತಿತರ ಕಾಳಜಿ ಹಾಗೂ ಸ್ಥಳೀಯರ ಪರಿಶ್ರಮ ಪ್ರೇರಣೆಯಿಂದ ಕೋಲಿಯನ್ಸ್ ಏರೋಸ್ಪೇಸ್ ಸಂಸ್ಥೆ ಇತ್ತೀಚೆಗೆ ದೊಡ್ಡಮಟ್ಟದ ಕೊಡುಗೆ ನೀಡಿದೆ.
ಶಾಲಾ ಮುಖ್ಯೋಪಾಧ್ಯಾಯರಾದ ಎ.ಎಸ್ ಭಾರತಿ ಅವರು ಶಾಲೆಯ ಶ್ರೇಯೋಭಿವೃದ್ಧಿ ಮಕ್ಕಳ ಶೈಕ್ಷಣಿಕ ಪ್ರಗತಿಗೆ ವಿಶೇಷವಾದ ಗಮನ ವಹಿಸುತ್ತಿದ್ದು, ನಿತ್ಯ ಸಂಜೆ 6 ಗಂಟೆಯವರೆಗೂ ಶಾಲೆಯಲ್ಲಿ ಇದ್ದು ಕಾಳಜಿ ವಹಿಸುತ್ತಿದ್ದಾರೆ. ಇದೀಗ ಒಂದು ಎಕರೆಯಷ್ಟು ಆಟದ ಮೈದಾನವೂ ಶಾಲೆಗೆ ದೊರೆತಿದ್ದು, ಮಕ್ಕಳ ದೈಹಿಕ ಬೆಳವಣಿಗೆಗೆ ಸಹಕಾರಿಯಾಗಲಿದೆ. ಗ್ರಾಮೀಣ ಪ್ರದೇಶಗಳ ಸರ್ಕಾರಿ ಶಾಲೆಗಳು ಹೀಗೆ ಮಾದರಿಯಾಗಿ ಅಭಿವೃದ್ಧಿಗೊಂಡರೆ ಖಾಸಗಿ ಶಾಲೆಗಳ ಮೇಲಿನ ಪೋಷಕರ ಆಕರ್ಷಣೆ, ಅವಲಂಬನೆ ಕಡಿಮೆಯಾಗುತ್ತದೆ.
ಒಟ್ಟಾರೆ, ಹಕ್ಕಿಪಿಕ್ಕಿ ಜನಾಂಗವೇ ಇರುವ ಅಂಗಡಿಹಳ್ಳಿ ಶಾಲೆಯಲ್ಲಿ ಪ್ರತಿ ವರ್ಷಕ್ಕೆ ಸುಮಾರು 20 ರಿಂದ 30 ಮಕ್ಕಳು ಹೆಚ್ಚುತ್ತಿದ್ದಾರೆ. ಅಕ್ಕ ಪಕ್ಕದ ಗ್ರಾಮದಿಂದ ಈ ಶಾಲೆಗೆ ತಮ್ಮ ತಮ್ಮ ಮಕ್ಕಳನ್ನು ಸೇರಿಸಲು ಮುಂದಾಗಿದ್ದಾರೆ. ಖಾಸಗಿ ಶಾಲೆಗಳು ನೀಡುವ ಹಣದ ಕಿರುಕುಳದಿಂದ ಬೇಸತ್ತ ಸಾಕ್ಷಷ್ಟು ಪೊಷಕರು ಇಲ್ಲಿಗೆ ದಾಖಲು ಮಾಡಿರೋ ಉದಾಹರಣೆ ಇವೆ. ಇನ್ನಾದರೂ ಪೋಷಕರು ತಮ್ಮ ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸಿ ಹಿಂದುಳಿದ ಪ್ರದೇಶಗಳ ಇನ್ನಷ್ಟು ಸರ್ಕಾರಿ ಶಾಲೆಗಳಿಗೆ, ಸ್ವಯಂಸೇವಾ ಸಂಸ್ಥೆಗಳಿಗೆ, ಗ್ರಾಮಸ್ಥರಿಗೆ ಪ್ರೇರಣೆಯಾಗುವುದು ಅಂತೂ ಖಚಿತ.