ಗದಗ: ತಾಳಿ ಮಾದರಿಯ ವಿವಾಹ ಮುದ್ರೆಯನ್ನು ಗಂಡು ಹೆಣ್ಣೆಂಬ ಬೇಧವಿಲ್ಲದೇ ವಧು-ವರರಿಬ್ಬರೂ ಬದಲಾಯಿಸಿಕೊಂಡು ಹೊಸ ಜೀವನಕ್ಕೆ ಕಾಲಿಟ್ಟ ವಿಶಿಷ್ಟ ಮದುವೆ ಗದಗದಲ್ಲಿ ನಡೆದಿದೆ.
ಗದಗ ನಗರದ ನಿವಾಸಿ ಬಸವ ಧರ್ಮ ಪ್ರತಿಪಾದಕ ಅಶೋಕ ಬರಗುಂಡಿ ಹಾಗೂ ಅನ್ನಪೂರ್ಣ ದಂಪತಿಯ ಪುತ್ರ ಆಕಾಶ್ ಅವರ ವಿವಾಹವನ್ನು ವನಜಾಕ್ಷಿ ಹಾಗೂ ದಯಾನಂದ ಗೌಡ ದಂಪತಿಯ ಪುತ್ರಿ ಸುಷ್ಮಾ ಅವರೊಂದಿಗೆ ನಿಶ್ಚಯ ಮಾಡಲಾಗಿತ್ತು. ಬಸವ ಧರ್ಮದ ಅನುಸಾರವೇ ವಿವಾಹ ಮಾಡಲು ಗುರು ಹಿರಿಯರು ನಿಶ್ಚಯಿಸಿದ್ದರು.
ಅದರಂತೆಯೇ ಜೂನ್ 12ರಂದು ಇಷ್ಟಲಿಂಗ ಮುದ್ರೆ ಹೊಂದಿದ ವಿವಾಹ ಮುದ್ರೆ ಧಾರಣೆ, ಸಂವಿಧಾನ ಪ್ರತಿಜ್ಞಾವಿಧಿ ಸ್ವೀಕಾರ, ಪುಸ್ತಕ ಬಿಡುಗಡೆ ಸೇರಿದಂತೆ ಅನೇಕ ಅರ್ಥಪೂರ್ಣ ಕಾರ್ಯಕ್ರಮದೊಂದಿಗೆ ವಿವಾಹ ನೆರವೇರಿದೆ. ಈ ವಿಶೇಷ ವಿವಾಹದ ವಿಡಿಯೋ, ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.
ಮಠಾಧೀಶರ ನೇತೃತ್ವದಲ್ಲಿ ವಿವಾಹ: ಬುದ್ದ, ಬಸವ, ಅಂಬೇಡ್ಕರ್ ತತ್ವ ಚಿಂತಕರು, ಬಸವ ಧರ್ಮ ಪ್ರವರ್ತಕರು, ಲೇಖಕರು, ಲಿಂಗಾಯತ ವಿರಕ್ತ ಮಠಾಧೀಶರ ನೇತೃತ್ವದಲ್ಲಿ ನವ ದಂಪತಿಗೆ ಭಾರತ ಸಂವಿಧಾನ ಪೀಠಿಕೆ ಪಠಣ, ಬಸವಾದಿ ಶರಣರ ವಚನ ಘೋಷಗಳೊಂದಿಗೆ ಬಸವಣ್ಣನವರ ಮೂರ್ತಿಗೆ ಪುಷ್ಪನಮನ ಸಲ್ಲಿಸುವ ಮೂಲಕ ಕಲ್ಯಾಣ ಮಹೋತ್ಸವಕ್ಕೆ ಮುನ್ನುಡಿ ಬರೆಯಲಾಯಿತು.
ನವ ದಂಪತಿ ಲಿಂಗಾಯತ ಧರ್ಮದ ಷಟಸ್ಥಲ ಧ್ವಜಾರೋಹಣ ನೆರವೇರಿಸಿದರು. ಬಳಿಕ ಪರಸ್ಪರ ರುದ್ರಾಕ್ಷಿ ಕಂಕಣ ಕಟ್ಟಿಕೊಂಡರು. ವಿಭೂತಿಯನ್ನು ಧರಿಸಿಕೊಂಡು ವಚನಗಳನ್ನು ಹೇಳುತ್ತಾ ಹಸೆಮಣೆ ಏರಿದರು. ದಾಂಪತ್ಯ ಬಂಧನದ ವಿಧಿವಿಧಾನಗಳನ್ನು ಶರಣ ತತ್ವದಲ್ಲಿ ಪಾಲಿಸಲು ನವ ಜೋಡಿಗೆ ಸಿಂಧನೂರಿನ ವೀರಭದ್ರಪ್ಪ ಕುರಕುಂದಿ ವಚನ ಪ್ರತಿಜ್ಞೆ ಬೋಧಿಸಿದರು.
ವಿವಾಹ ಮುದ್ರೆ ಬದಲು: ಇಲಕಲ್ಲದ ಗುರುಮಹಾಂತಪ್ಪರು ಲಿಂಗಾಯತ ಧರ್ಮ ಪೀಠಿಕೆ ಹಾಗೂ ಪ್ರಮಾಣ ವಚನ ಬೋಧಿಸಿದರು. ಶರಣ ಸಾಹಿತಿ, ಪತ್ರಕರ್ತರಾದ ರಂಜಾನ್ ದರ್ಗಾ ಹಾಗೂ ಡಾ.ಜೆ.ಎಸ್.ಪಾಟೀಲ್ ಆಶಯ ನುಡಿಗಳನ್ನಾಡಿದರು. ಭಾರತ ಸಂವಿಧಾನ ಎಂಬ ಪುಸ್ತಕದ ಬಿಡುಗಡೆ ಮಾಡಲಾಯಿತು. ವಚನ ಪ್ರತಿಜ್ಞೆ, ವಚನ ಬಂಧದೊಂದಿಗೆ ಲಿಂಗ ತಾರತಮ್ಯ ನಿವಾರಣೆಗಾಗಿ ಆಕಾಶ್, ಸುಷ್ಮಾ ಪರಸ್ಪರ ವಿವಾಹ ಮುದ್ರೆ ಬದಲಾಯಿಸಿಕೊಂಡರು. ಈ ಮೂಲಕ ಲಿಂಗ ಸಮಾನತೆ ಮೆರೆದರು.
ಮದುವೆಯ ಮಂಟಪದಲ್ಲಿ ಗದುಗಿನ ಸಿದ್ದಲಿಂಗ ಶ್ರೀ, ಕುವೆಂಪು, ಅಂಬೇಡ್ಕರ್, ಡಾ.ಬಸವನಾಳ, ಫಗು ಹಳಕಟ್ಟಿ, ವಿವೇಕಾನಂದ, ಹರ್ಡೇಕರ ಮಂಜಪ್ಪ, ಡಾ.ಎಂ.ಎಂ. ಕಲಬುರ್ಗಿ, ಅಥಣಿಯ ಮುರುಗೇಂದ್ರ ಶಿವಯೋಗಿಗಳು ಸೇರಿದಂತೆ ಹಲವು ಮಹನೀಯರ ಭಾವಚಿತ್ರ, ಆದರ್ಶದ ಶುಭಾಶಯ ನುಡಿಗಟ್ಟುಗಳ ಕಟೌಟ್ ಮಾಡಿ ಹಾಕಲಾಗಿತ್ತು.
ಇದನ್ನೂ ಓದಿ: ಅಂದು ಮದ್ಯದಂಗಡಿಗೆ ಕಲ್ಲೇಟು, ಇಂದು ಹಸುವಿನ ಸಗಣಿ ಎಸೆದು ಉಮಾ ಸಿಟ್ಟು