ಗದಗ : ಅದು ಗಂಡ ಹೆಂಡತಿ ಜಗಳ, ನಾಲ್ಕು ಬುದ್ದಿ ಮಾತು ಹೇಳಿ ವಾರ್ನಿಂಗ್ ನೀಡಬಹುದಿತ್ತು. ಇಲ್ಲವಾದರೆ ಕಾನೂನು ರೀತಿ ಕ್ರಮ ಕೈಗೊಳಬೇಕಿತ್ತು. ಆದರೆ, ಆ ಆರಕ್ಷಕರು ಮೃಗೀಯವಾಗಿ ವರ್ತನೆ ಮಾಡಿದ್ದಾರೆ. ವಿಚಾರಣೆಗೆಂದು ಪೊಲೀಸ್ ಠಾಣೆಗೆ ಕರೆದು ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಎಫ್ಐಆರ್ ದಾಖಲಾಗದೇ ಮನಸೋ ಇಚ್ಚೆ ಥಳಿಸಿದ್ದಾರೆ. ಪೊಲೀಸರ ಏಟು ತಿಂದ ವ್ಯಕ್ತಿ ಈಗ ಜಿಮ್ಸ್ ಆಸ್ಪತ್ರೆಯಲ್ಲಿ ನರಳಾಡುತ್ತಿದ್ದಾನೆ. ಪೊಲೀಸರ ವರ್ತನೆಗೆ ಕುಟುಂಬಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪೊಲೀಸರ ವಿರುದ್ಧ ಗಂಭೀರ ಆರೋಪ : ನಗರದ ಮಹಿಳಾ ಪೊಲೀಸ್ ಠಾಣೆಯ ಪಿಎಸ್ಐ ಹಾಗೂ ಕಾನ್ಸ್ ಟೇಬಲ್ಗಳ ವಿರುದ್ಧ ಈ ರೀತಿಯ ಗಂಭೀರ ಆರೋಪ ಕೇಳಿ ಬಂದಿದೆ. ಅಂದಹಾಗೇ ಇಬ್ಬರ ಹೆಂಡಿರ ಮುದ್ದಿನ ಗಂಡನಿಗೆ ಪೊಲೀಸರು ಠಾಣೆಗೆ ಕರೆದು ಹಿಗ್ಗಾಮುಗ್ಗಾ ಥಳಿಸಿರೋ ಆರೋಪ ಕೇಳಿಬಂದಿದೆ. ಮಹಿಳಾ ಠಾಣೆಯ ನಾಲ್ಕೈದು ಜನ ಕಾನ್ಸ್ ಟೇಬಲ್ಗಳು ದಾವಲ್ ಸಾಬ್ ಕುಮನೂರ್ ಎಂಬಾತನಿಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ ಎನ್ನಲಾಗಿದೆ.
ಪೊಲೀಸರ ಲಾಠಿ, ಬೂಟಿನ ಏಟಿಗೆ ದಾವಲ್ ಸಾಬ್ ಜಿಮ್ಸ್ ಆಸ್ಪತ್ರೆಯಲ್ಲಿ ನರಳಾಡುತ್ತಿದ್ದಾನೆ. ಬೆನ್ನು, ಎದೆ, ಕೈ ಸೇರಿ ದೇಹದ ವಿವಿಧ ಭಾಗದಲ್ಲಿ ಬಾಸುಂಡೆ ಬರುವ ಹಾಗೆ ಹೊಡೆದಿದ್ದು, ತನ್ನ ಬಳಿ ಇದ್ದ ಸುಮಾರು 40 ಸಾವಿರ ಹಣ ಕಸಿದುಕೊಂಡು ಕಳಿಸಿದ್ದಾರೆ ಎಂದು ಪೊಲೀಸರ ಮೇಲೆ ಥಳಿತಕ್ಕೊಳಗಾದ ವ್ಯಕ್ತಿ ಆರೋಪ ಮಾಡಿದ್ದಾನೆ.
ಏನಿದು ಪ್ರಕರಣ ..?: ಅಂದಹಾಗೆ ದಾವಲ್ ಸಾಬ್ ಕುಮನೂರ್ ಗದಗ ತಾಲೂಕಿನ ಅಡವಿ ಸೋಮಾಪುರ ಗ್ರಾಮದ ನಿವಾಸಿ. ಇಬ್ಬರು ಹೆಂಡತಿಯರಿದ್ದು, ಮೊದಲನೇ ಹೆಂಡತಿ ಬಸಿರಾ ಜೊತೆಗೆ ಆಗಾಗ್ಗೆ ಜಗಳ ನಡೆಯುತ್ತಿತ್ತು. ನಿನ್ನೆಯೂ ಸಹ ಆಧಾರ್ ಕಾರ್ಡ್ ವಿಷಯವಾಗಿ ಇಬ್ಬರ ನಡುವೆ ಜಗಳ ನಡೆದಿತ್ತು. ಮೊದಲನೇ ಪತ್ನಿ ಬಸಿರಾ ಬಳಿ ಇದ್ದ ರೇಷನ್ ಕಾರ್ಡ್, ಆಧಾರ್ ಕಾರ್ಡ್ ಸೇರಿದಂತೆ ಕೆಲ ದಾಖಲೆಗಳನ್ನ ತೆಗೆದುಕೊಳ್ಳಲು ದಾವಲ್ ಸಾಬ್ ತೆರಳಿದ್ದ.
ಇದೇ ವಿಚಾರಕ್ಕೆ ಇಬ್ಬರ ನಡುವೆ ಜಗಳ ನಡೆದು ಬಸಿರಾ, ಗದಗ ನಗರದ ಮಹಿಳಾ ಠಾಣೆಗೆ ಪತಿ ವಿರುದ್ಧ ದೂರ ನೀಡಿದ್ದಾರೆ. ಆದರೆ ಪೊಲೀಸರು ಈ ಬಗ್ಗೆ ಎಫ್ ಐ ಆರ್ ದಾಖಲಿಸದೇ ದಾವಲ್ ಸಾಬ್ ನನ್ನ ಠಾಣೆಗೆ ಕರೆಸಿ ಪಿಎಸ್ಐ ನೂರಜಾನ್ ಕುಮ್ಮಕ್ಕಿನ ಮೇರೆಗೆ ನಾಲ್ಕೈದು ಜನ ಕಾನ್ ಸ್ಟೇಬಲ್ಗಳು ಮನಸ್ಸಿಗೆ ಬಂಧಂತೆ ಥಳಿಸಿದ್ದಾರೆ. ನನ್ನ ಯಾವುದೇ ವಿಚಾರಣೆ ಮಾಡದೇ, ನನ್ನಬಟ್ಟೆ ಕಳಚಿ ಲಾಠಿಯಿಂದ, ಬೂಟಗಾಲಿನಿಂದ ಮನಸ್ಸೋ ಇಚ್ಛೆ ಥಳಿಸಿದ್ದಾರೆ ಎಂದು ದಾವಲಸಾಬ್ ಆರೋಪಿಸಿದ್ದಾನೆ.
ಇದನ್ನು ಓದಿ:ಗದಗ ಜಿಲ್ಲಾಸ್ಪತ್ರೆಯಲ್ಲಿ ಡಯಾಲಿಸಿಸ್ ಕೇಂದ್ರ ಬಂದ್.. ಚಿಕಿತ್ಸೆ ಸಿಗದೇ ಕಿಡ್ನಿ ಫೇಲ್ಯೂರ್ ರೋಗಿಗಳ ನರಳಾಟ
ಕಾನೂನಿನ ಪ್ರಕಾರ ಎಫ್ ಐ ಆರ್ ದಾಖಲಾದ ಮೇಲೆ ಆರೋಪಿಯನ್ನ ನ್ಯಾಯಾಲಯಕ್ಕೆ ಹಾಜರು ಪಡಿಸಬೇಕು. ನಂತರ ನ್ಯಾಯಾಲಯದ ಅನುಮತಿ ಮೇರಿಗೆ ಕಸ್ಟಡಿಗೆ ತೆಗೆದುಕೊಂಡು ವಿಚಾರಣೆ ಮಾಡಬೇಕು. ಆದರೆ, ಗದಗ ಮಹಿಳಾ ಪೊಲೀಸ್ ಠಾಣೆಯ ಪಿಎಸ್ಐ ನೂರ್ಜಾನ್ ಎಫ್ಐಆರ್ ದಾಖಲು ಮಾಡದೇ, ಮೊದಲ ಹೆಂಡತಿ ಸಮ್ಮುಖದಲ್ಲಿ ನಾಲ್ಕು ಸಿಬ್ಬಂದಿಗಳ ಮೂಲಕ ದಾವಲ್ ಸಾಬ್ ಮೇಲೆ ಮನಸೋ ಇಚ್ಚೆ ಥಳಿಸಿದ್ದಾರೆ ಎಂದು ಆರೋಪಿಸಲಾಗಿದೆ.
ನಾವೂ ಯಾರ ಬಳಿ ನ್ಯಾಯ ಕೇಳೋದು : ತೀವ್ರವಾಗಿ ಗಾಯಗೊಂಡ ದಾವಲ್ ಸಾಬ್ ನನ್ನು ಗದಗ ಜಿಮ್ಸ್ ಆಸ್ಪತ್ರೆ ದಾಖಲು ಮಾಡಲಾಗಿದೆ. ದಾವಲ್ ಸಾಬ್ ಪರಿಸ್ಥಿತಿ ನೋಡಿ ದಾವಲ್ ಸಾಬ್ ತಾಯಿ, ಹಾಗೂ ಎರಡನೇಯ ಹೆಂಡತಿ ಕಣ್ಣೀರು ಹಾಕುತ್ತಿದ್ದಾರೆ. ರಕ್ಷಕರೇ ಈ ರೀತಿ ಹಲ್ಲೆ ಮಾಡಿದರೆ. ನಾವು ಯಾರ ಬಳಿ ನ್ಯಾಯ ಕೇಳೋದು ಅಂತ ಎರಡನೇ ಪತ್ನಿ ಪೊಲೀಸರ ವಿರುದ್ಧ ಕಿಡಿಕಾರಿದ್ದಾರೆ. ವಿಚಾರಣೆಗೆ ಎಂದು ಕರೆದುಕೊಂಡು ಹೋಗಿ ಹೀಗೆ ಥಳಿಸಿದಕ್ಕೆ ಪೊಲೀಸರ ವಿರುದ್ಧ ಕುಟುಂಬಸ್ಥರ ಆಕ್ರೋಶ ವ್ಯಕ್ತಪಡೆಸಿದ್ದಾರೆ.