ಗದಗ: ತಮಗೆ ಸಿಗಬೇಕಾದ ತಿಂಗಳ ಹಣಕ್ಕಾಗಿ ಸಾಲುಗಟ್ಟಿ ನಿಂತ ವೃದ್ಧರು, ಕೂರಲು ಆಗದೆ, ನಿಲ್ಲಲೂ ಆಗದೆ ಪರದಾಡುತ್ತಿರುವ ಮಹಿಳೆಯರು. ಕೂರಲು ಕುರ್ಚಿಯಿಲ್ಲ, ನಿಲ್ಲಲು ವ್ಯವಸ್ಥೆಯಿಲ್ಲ. ಬಿಸಿಲಲ್ಲಿ ಬಾಯಾರಿದರೆ ಕುಡಿಯಲು ನೀರೂ ಇಲ್ಲ. ಇದು ಗದಗ ನಗರದ ತಹಶೀಲ್ದಾರ್ ಕಚೇರಿ ಆವರಣದಲ್ಲಿ ಕಂಡು ಬಂದ ದಯನೀಯ ದೃಶ್ಯ.
ಸುಮಾರು ಐದು ತಿಂಗಳಿನಿಂದ ಗದಗ ತಾಲೂಕಿನ ನೂರಾರು ವೃದ್ಧರು, ವಿಶೇಷ ಚೇತನರು ಮಾಸಾಶನ ತಹಶೀಲ್ದಾರ್ ಕಚೇರಿಗೆ ಅಲೆದಾಡುತ್ತಿದ್ದಾರೆ. ಈ ಪೈಕಿ ಹೆಚ್ಚಿನವರು ತಮಗೆ ಮಕ್ಕಳು, ಕುಟುಂಬಸ್ಥರಿಲ್ಲದೆ ಕೇವಲ ಮಾಸಾಶನವನ್ನೇ ನಂಬಿ ಜೀವನ ಸಾಗಿಸುವವರು. ಆದರೆ, ಸಂಬಂಧಪಟ್ಟ ಅಧಿಕಾರಿಗಳು ಮಾತ್ರ ಇಲ್ಲ ಸಲ್ಲದ ಸಬೂಬುಗಳನ್ನು ನೀಡಿ ಇವರಿಗೆ ಸಿಗಬೇಕಾದ ಅಲ್ಪಸ್ವಲ್ಪ ಹಣವನ್ನು ನೀಡಲು ವಿಳಂಬ ಮಾಡುತ್ತಿದ್ದಾರೆ. ಕೆಲವರಿಗೆ ಹಲವು ವರ್ಷಗಳಿಂದಲೂ ಮಾಸಾಶನ ಸಿಕ್ಕಿಲ್ಲವಂತೆ. ಓರ್ವ ವೃದ್ಧೆ ಭಿಕ್ಷೆ ಬೇಡಿ ಜೀವನ ನಡೆಸುತ್ತಿದ್ದೇನೆ ಅಂತ ಕಣ್ಣೀರು ಹಾಕಿದರು.
ತಹಶೀಲ್ದಾರ್ ಕಚೇರಿಯಲ್ಲಿ ಅವ್ಯವಸ್ಥೆ
ಬೆಳಗ್ಗೆಯಿಂದ ಪಾಸ್ ಬುಕ್ ಹಿಡಿದುಕೊಂಡು ಜನ ಕಂಪ್ಯೂಟರ್ ಆಪರೇಟರ್ ಬಳಿ ಚೆಕ್ ಮಾಡಿಸುತ್ತಿದ್ದಾರೆ. ಅವರು ಏನೂ ಅಂತ ಸರಿಯಾಗಿ ಮಾಹಿತಿ ನೀಡುತ್ತಿಲ್ಲ. ಇಲ್ಲಿ ಕೂರಲು ಕುರ್ಚಿಗಳಿಲ್ಲ, ಕುಡಿಯುವ ನೀರಿನ ವ್ಯವಸ್ಥೆ ಇಲ್ಲ, ಶೌಚಾಲಯವಂತೂ ಮೊದಲೇ ಇಲ್ಲ. ಹೀಗಾಗಿ, ಇದು ತಹಶೀಲ್ದಾರ್ ಕಚೇರಿ ಅಂತ ಅನಿಸುತ್ತಿಲ್ಲ ಅನ್ನೋದು ಇಲ್ಲಿಗೆ ಬಂದಿರುವ ಜನರ ಗೋಳು. ಈ ಬಗ್ಗೆ ತಹಶೀಲ್ದಾರ್ ಶ್ರೀನಿವಾಸ ಮೂರ್ತಿ ಕುಲಕರ್ಣಿಯವರನ್ನು ಕೇಳೋಣ ಅಂದ್ರೆ, ಅವರು ಇನ್ನೂ ಕಚೇರಿಗೆ ಬಂದಿಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಾರೆ.
ಈಗಾಗಲೇ ಜಿಲ್ಲೆಯಲ್ಲಿ ಕೊರೊನಾ ಎರಡನೇ ಅಲೆ ಜೋರಾಗಿದೆ. ಒಂದೇ ವಾರದಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗಿದೆ. ಇಂತಹ ಸಂದರ್ಭದಲ್ಲಿ ಪರ್ಯಾಯ ವ್ಯವಸ್ಥೆ ಮಾಡಿ ನಮ್ಮ ಸಮಸ್ಯೆಗಳನ್ನು ಬಗೆಹರಿಸಬೇಕು ಎಂದು ಆಗ್ರಹಿಸಿದ್ದಾರೆ.
ತಹಶೀಲ್ದಾರ್ ಪ್ರತಿಕ್ರಿಯೆ
ವೃದ್ಧರು, ವಿಶೇಷ ಚೇತನರ ಮಾಸಾಶನ ವಿಳಂಬ ಕುರಿತು ತಹಶೀಲ್ದಾರ್ ಶ್ರೀನಿವಾಸ ಮೂರ್ತಿಯವರನ್ನು ಸಂಪರ್ಕಿಸಿದಾಗ ಪ್ರತಿಕ್ರಿಯೆ ನೀಡಿದ ಅವರು, ಆಧಾರ್ ಕಾರ್ಡ್ ಮತ್ತು ಬ್ಯಾಂಕ್ ಪಾಸ್ ಬುಕ್ ಅಪ್ಡೇಟ್ ಆಗದ ಕಾರಣ ಗದಗ ತಾಲೂಕಿನಲ್ಲಿ ಸುಮಾರು 30 ಸಾವಿರ ವೃದ್ಧರನ್ನು ಮಾಸಾಶನ ಪಟ್ಟಿಯಿಂದ ಕೈಬಿಡಲಾಗಿತ್ತು. ಈ ಪೈಕಿ ಸದ್ಯ 25 ಸಾವಿರ ಜನರ ಸಮಸ್ಯೆ ಬಗೆಹರಿದಿದೆ. ಇನ್ನುಳಿದವರ ಸಮಸ್ಯೆಯನ್ನು ಬೇಗ ಬಗೆಹರಿಸಲಾಗುವುದು ಎಂದರು.