ಹುಬ್ಬಳ್ಳಿ: ಶಾಲಾ-ಕಾಲೇಜುಗಳು ಪ್ರಾರಂಭಗೊಂಡಿದ್ದು, ಶಿಕ್ಷಕರಲ್ಲಿ ಹಾಗೂ ಮಕ್ಕಳಲ್ಲಿ ಸಂತೋಷ ಮನೆ ಮಾಡಿದೆ. ಇಷ್ಟು ದಿನ ಮನೆಯಲ್ಲಿಯೇ ಇದ್ದ ಮಕ್ಕಳು ಶಾಲೆಗೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಶಾಲಾ ಸಿಬ್ಬಂದಿ ಶಾಲೆಯನ್ನು ಮದುವಣಗಿತ್ತಿಯಂತೆ ಶೃಂಗರಿಸಿ ಮಕ್ಕಳನ್ನು ಸ್ವಾಗತಿಸಿದರು.
ಹೊಸ ವರ್ಷದ ಮೊದಲ ದಿನವೇ ಶಾಲಾ ಕಾಲೇಜು ಆರಂಭಗೊಂಡಿರುವುದು ಸಂಭ್ರಮಕ್ಕೆ ಹೊಸ ಹುರುಪು ಸಿಕ್ಕಂತಾಗಿದೆ. ದೇಶಪಾಂಡೆ ನಗರದ ಜ್ಞಾನಭಾರತಿ ಶಾಲೆಯಲ್ಲಿ ತಳಿರು ತೋರಣದ ಮೂಲಕ ಶೃಂಗಾರಗೊಳಿಸಿದ್ದು, ರಂಗೋಲಿ ಹಾಕಿ ವಿದ್ಯಾರ್ಥಿಗಳನ್ನು ಅದ್ದೂರಿಯಾಗಿ ಸ್ವಾಗತಿಸಲಾಯಿತು.
ವಿದ್ಯಾರ್ಥಿಗಳಲ್ಲಿರುವ ಕೊರೊನಾ ಭಯವನ್ನು ಹೋಗಲಾಡಿಸಿ ವಿದ್ಯಾಭ್ಯಾಸದಲ್ಲಿ ಹೆಚ್ಚಿನ ಆಸಕ್ತಿ ಹೊಂದುವಂತೆ ಶಿಕ್ಷಕರು ವಿನೂತನ ಪ್ರಯತ್ನ ನಡೆಸಿರುವುದು ಸಾರ್ವಜನಿಕ ಪ್ರಶಂಸೆಗೆ ಪಾತ್ರವಾಯಿತು.