ಹುಬ್ಬಳ್ಳಿ: ವಿದ್ಯಾನಗರ ಕೆಎಲ್ಇ ಸೊಸೈಟಿ ಶ್ರೀಮತಿ ಚನ್ನಬಸಮ್ಮ ಈಶ್ವರಪ್ಪ ಮುನವಳ್ಳಿ ಪಾಲಿಟೆಕ್ನಿಕ್ ಮಹಾ ವಿದ್ಯಾಲಯ ಪ್ರತಿ ವರ್ಷ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಉಚಿತ ಪ್ರವೇಶವನ್ನು ನೀಡುತ್ತಿದ್ದು, ಅವಕಾಶದ ಸದುಪಯೋಗಪಡಿಸಿಕೊಂಡ ವಿದ್ಯಾರ್ಥಿನಿಯೋರ್ವಳು ಅತ್ಯುತ್ತಮ ಸಾಧನೆ ಮಾಡಿ ಕಾಲೇಜಿಗೆ ಕೀರ್ತಿ ತಂದಿದ್ದಾಳೆ.
ಈ ಬಗ್ಗೆ ಪ್ರಾಚಾರ್ಯ ವಿರೇಶ ಅಂಗಡಿ ಮಾಹಿತಿ ನೀಡಿ, ಮಂಜುಳಾ ಎಂಬ ವಿದ್ಯಾರ್ಥಿನಿಗೆ ಕಾಲೇಜಿನಲ್ಲಿ ಉಚಿತ ಪ್ರವೇಶ ಕಲ್ಪಿಸಲಾಗಿತ್ತು, ಅದನ್ನು ಉಪಯೋಗಿಸಿಕೊಂಡ ಮಂಜುಳಾ, ಅತ್ಯುತ್ತಮ ಸಾಧನೆ ಮಾಡಿ ಕಾಲೇಜಿಗೆ ಕಿರ್ತಿ ತಂದಿದ್ದಾಳೆ. ನಮ್ಮ ಸಂಸ್ಥೆಯು ಆನಂದ್ ಗ್ರೂಪ್ ಕಂಪನಿ ಜೊತೆಗೆ ಒಡಂಬಡಿಕೆ ಮಾಡಿಕೊಂಡಿದ್ದು, ಅದರಂತೆ ಆರ್ಥಿಕವಾಗಿ ಹಿಂದುಳಿದಿರುವ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಉಚಿತ ಪ್ರವೇಶವ ನೀಡಿ, ಶಿಕ್ಷಣ ಪೂರ್ಣಗೊಂಡ ಬಳಿಕ ಕಂಪನಿಯಲ್ಲೇ ಉದ್ಯೋಗವಕಾಶ ಮಾಡಿಕೊಡುವ ಅವಕಾಶ ಒದಗಿಸುವ ಚಿಂತನೆ ನಡೆಸಲಾಗಿತ್ತು. ಹೀಗಾಗಿ ಆಯ್ಕೆಯಾದ ವಿದ್ಯಾರ್ಥಿಗಳ ಪ್ರವೇಶ ಶುಲ್ಕವನ್ನು ಆನಂದ್ ಗ್ರೂಪ್ ಆಫ್ ಕಂಪನಿ ಭರಿಸುತ್ತಿದೆ ಎಂದರು.
ವಿದ್ಯಾರ್ಥಿನಿ ಮಂಜುಳಾ, ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಶೇ.84.18ರಷ್ಟು ಅಂಕಗಳೊಂದಿಗೆ ತೇರ್ಗಡೆ ಹೊಂದಿ, ನಮ್ಮ ಸಂಸ್ಥೆಯಲ್ಲಿ ಉಚಿತ ಪ್ರವೇಶವನ್ನು ಪಡೆದಿದ್ದು, ಇದೀಗ ಡಿಪ್ಲೋಮಾ ಮೆಕ್ಯಾನಿಕಲ್ನ ಒಂದನೇ ವರ್ಷದಲ್ಲಿ ಶೇ.95 ರಷ್ಟು ಅಂಕಗಳೊಂದಿಗೆ ಪ್ರಥಮ ಸ್ಥಾನ ಪಡೆದಿದ್ದಾರೆ. ಎರಡನೇ ಸೆಮಿಸ್ಟರ್ನ ಮೂರು ವಿಷಯಗಳಲ್ಲಿ ಎರಡು ವಿಷಯಗಳಿಗೆ ನೂರಕ್ಕೆ ನೂರು ಅಂಕ ಪಡೆದು ಪ್ರತಿಭಾವಂತ ವಿದ್ಯಾರ್ಥಿ ಆಗಿದ್ದಾರೆ. ಇದು ನಮ್ಮ ಮಹಾವಿದ್ಯಾಲಯಕ್ಕೆ ಹೆಮ್ಮೆಯ ವಿಚಾರವಾಗಿದೆ ಎಂದರು.
ವಿದ್ಯಾರ್ಥಿನಿ ಮಂಜಳಾ ಮಾತನಾಡಿ, ನಮ್ಮಂತ ಬಡ ವಿದ್ಯಾರ್ಥಿಗಳಿಗೆ ಕೆಎಲ್ಇ ಮಹಾ ವಿದ್ಯಾಲಯದಲ್ಲಿ ಕಲಿಯುವುದು ಎಂದರೆ ಕನಸಿನ ಮಾತು. ಅಂತದರಲ್ಲಿ ಬಡ ವಿದ್ಯಾರ್ಥಿಗಳಿಗೆ ಮಹಾವಿದ್ಯಾಲಯ ಮತ್ತು ಆನಂದ್ ಗ್ರೂಪ್ ಕಂಪನಿ ಸಹಾಯ ಹಸ್ತ ಚಾಚಿರುವುದು ಖುಷಿಯ ವಿಚಾರ. ಮೆಕ್ಯಾನಿಕಲ್ ಡಿಪ್ಲೋಮಾದಲ್ಲಿ ಮಹಿಳೆಯರು ಬರುವುದು ಕಡಿಮೆ ಆ ವಿಷಯ ಅಧ್ಯಯನ ಮಾಡುತ್ತಿರುವುದು ಸಂತೋಷ ತಂದಿದೆ. ಈ ತರದ ಪ್ರೋತ್ಸಾಹ ನನಗೆ ಅಲ್ಲದೇ ಇತರರಿಗೂ ಸಿಗಲಿ ಎಂದರು.
ಈ ವೇಳೆ ಡಿಪ್ಲೋಮಾ ಕಲಿಕೆಯ ವಿದ್ಯಾರ್ಥಿಗಳಿಗಾಗಿ ಮುನವಳ್ಳಿ ಪಾಲಿಟೆಕ್ನಿಕ್ 5ನೇ ಸೆಮಿಸ್ಟರ್ ಸಿವಿಲ್ ವಿಭಾಗದ ವಿದ್ಯಾರ್ಥಿಗಳಾದ ಮಾರುತಿ ಬದ್ದಿ, ಮತ್ತು ವಿನಾಯಕ ಜಡಿ ಅಭಿವೃದ್ದಿಪಡಿಸಿದ, DIO -SQ ಆ್ಯಪ್ನ್ನು ಬಿಡುಗಡೆಗೊಳಿಸಲಾಯಿತು. ಪ್ರಸ್ತುತ ಆ್ಯಪ್ನಲ್ಲಿ ಮೆಕ್ಯಾನಿಕಲ್, ಆಟೋಮೊಬೈಲ್, ಕಂಪ್ಯೂಟರ್ ಸೈನ್ಸ್, ಇ ಎಂಡ್ ಸಿ, ಹಾಗೂ ಆರ್ಕಿಟೆಕ್ಚರ್ ಸೇರಿದಂತೆ ಒಟ್ಟು 7 ವಿಭಾಗದ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ಪಠ್ಯಕ್ರಮ, ವಾರ್ಷಿಕ ಪರೀಕ್ಷೆಯ ಡಿಸಿಇಟಿ ಪ್ರಶ್ನೆ ಪತ್ರಿಕೆ ಅಳವಡಿಸಲಾಗಿದೆ.