ಹುಬ್ಬಳ್ಳಿ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನೇತೃತ್ವದಲ್ಲಿ ಮುಂದಿನ ಚುನಾವಣೆ ಎದುರಿಸಲಿದ್ದು, ಹಿಂದಿನ ಸ್ಥಾನಕ್ಕಿಂತ ಹೆಚ್ಚಿನ ಸ್ಥಾನದಲ್ಲಿ ಗೆಲವು ಸಾಧಿಸಲಿದ್ದೇವೆ ಎಂದು ಸಿಟಿ ರವಿ ವಿಶ್ವಾಸ ವ್ಯಕ್ತಪಡಿಸಿದರು. ನಗರದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾಜಿ ಮುಖ್ಯಮಂತ್ರಿ ಬಿ.ಎಸ್.ವೈ ಅವರ ಮಾರ್ಗದರ್ಶನದಲ್ಲಿ ಚುನಾವಣೆ ನಡೆಯಲಿದೆ ಎಂದರು.
ಕಾಂಗ್ರೆಸ್ನ ಭಾರತ ಜೋಡೋ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ಕಾಂಗ್ರೆಸ್ ನಾಯಕರು ಕಾಂಗ್ರೆಸ್ ಚೋಡೋದಲ್ಲಿ ಮಗ್ನರಿದ್ದಾರೆ. ಮೊದಲು ಕಾಂಗ್ರೆಸ್ ಅವರು ಪಕ್ಷ ಚೋಡೋ ಸರಿ ಮಾಡಿಕೊಳ್ಳಬೇಕಿದೆ. ಇಲ್ಲದಿದ್ದರೆ ಪಕ್ಷದ ಬೋರ್ಡ್ ಹಾಕಲು ಕಾರ್ಯಕರ್ತರು ಸಿಗುವುದಿಲ್ಲ ಎಂದು ಲೇವಡಿ ಮಾಡಿದರು.
ಕಾಂಗ್ರೆಸ್ ಅವರಿಗೆ ನೀತಿ, ನೇತೃತ್ವ ಹಾಗೂ ನಿಯತ್ತು ಇಲ್ಲ, ಅದು ಅವರಿಗೆ ಅವಶ್ಯಕತೆ ಇದೆ ಎಂದ ಅವರು, ಈ ಮೂರು ಇಲ್ಲದಿದ್ದರೆ ಪಕ್ಷಗಳು ಉಳಿದ ಉದಾಹರಣೆಗಳೇ ಇಲ್ಲ. ಹೀಗಾಗಿ ನಮ್ಮ ಪಕ್ಷದಲ್ಲಿ ನೀತಿಯೂ ಇದೆ. ನೇತೃತ್ವವವೂ ಇದೆ. ಹಿಮಾಚಲ, ಮಧ್ಯಪ್ರದೇಶ ಚುನಾವಣೆ ಫಲಿತಾಂಶ ಬಂದ ಮಾರನೇ ದಿನವೇ ಸಾಕಷ್ಟು ಕಾಂಗ್ರೆಸ್ ನಾಯಕರು ಬಿಜೆಪಿ ಸೇರಲಿದ್ದಾರೆ ಎಂದು ಬಹಿರಂಗವಾಗಿ ಹೇಳಿದರು.
ಮಾಜಿ ಮುಖ್ಯಮಂತ್ರಿ ಬಿ.ಎಸ್.ವೈ ಕುರಿತು ಮಾತನಾಡಿದ ಅವರು, ಬಿ.ಎಸ್.ವೈ ಬಿಜೆಪಿಯನ್ನು ಬೆಳೆಸಿದ ನಾಯಕರು, ಬಿಜೆಪಿ ಯಡಿಯೂರಪ್ಪ ಅವರನ್ನು ಬೆಳೆಸಿದ ಪಕ್ಷ ಹೀಗಾಗಿ ರಾಜ್ಯದಲ್ಲಿ ಬಿ.ಎಸ್.ವೈ ಅವರನ್ನು ಕಟ್ಟಿ ಹಾಕಲು ಯಾರಿಂದಲೂ ಸಾಧ್ಯವಿಲ್ಲ. ಹೀಗಾಗಿ ಚುನಾವಣೆ ದೃಷ್ಟಿಯಿಂದ ಬಿ.ಎಸ್.ವೈ ಅವರ ಪ್ರವಾಸ ಯೋಜನೆ ನಿಶ್ಚಿತವಾಗಿದೆ ಎಂದು ಸ್ಪಷ್ಟವಾಗಿ ಹೇಳಿದರು.
ಚಿತ್ರದುರ್ಗ ಮುರುಘಾ ಶ್ರೀ ಅವರ ಬಂಧನ ವಿಷಯಕ್ಕೆ ಸಂಬಂಧಿಸಿದಂತೆ ಮಾಧ್ಯಮದ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು, ಮುರುಘಾ ಶ್ರೀಗಳು ಈಗಾಗಲೇ ಪೊಲೀಸ್ ವಶದಲ್ಲಿದ್ದಾರೆ. ತನಿಖೆಯಿಂದ ಸತ್ಯ ಏನು ಎಂಬುದು ಹೊರ ಬರಬೇಕಿದೆ ಎಂದ ಅವರು, ಸತ್ಯ ಹೊಸ್ತಿಲು ದಾಟುವುದರೊಳಗೆ ಸುಳ್ಳು ಊರು ಸುತ್ತಿ ಬಂದಿರುತ್ತದೆ. ಇಲ್ಲಿ ಅಂತಿಮವಾಗಿ ಗೆಲ್ಲುವುದು ಸತ್ಯ ಎಂದರು.
ಇದನ್ನೂ ಓದಿ: ನಾನು ಚಿತ್ರದುರ್ಗಕ್ಕೆ ಹೋದರೆ ಮುರುಘಾ ಮಠಕ್ಕೆ ಭೇಟಿ ನೀಡಿ, ಗದ್ದುಗೆ ದರ್ಶನ ಮಾಡುವೆ: ಎಂಬಿ ಪಾಟೀಲ್