ಹುಬ್ಬಳ್ಳಿ: ಸ್ಮಾರ್ಟ್ಸಿಟಿ ಹಾಗೂ ಬಿಆರ್ಟಿಎಸ್ ಯೋಜನೆಗೆಂದು ಅವಳಿ ನಗರದ ರಸ್ತೆಯ ಪಕ್ಕದಲ್ಲಿದ್ದ ಬಹುತೇಕ ಎಲ್ಲಾ ತಾತ್ಕಾಲಿಕ ತಂಗುದಾಣಗಳನ್ನು ತೆರವುಗೊಳಿಸಲಾಗಿದ್ದು, ಪ್ರಯಾಣಿಕರು ಬಿರು ಬಿಸಿಲಿನಲ್ಲಿ ಬಸ್ಗಾಗಿ ಕಾಯಬೇಕಾದ ಅನಿವಾರ್ಯತೆ ಎದುರಾಗಿದೆ.
ಈಗಾಗಲೇ ಬೇಸಿಗೆ ಆರಂಭವಾಗಿದ್ದು, ಬಿಸಿಲಿನ ತಾಪ ಅಸಹನೀಯವಾಗಿದೆ. ಅವಳಿ ನಗರದ ಮಧ್ಯೆ ಬಿಆರ್ಟಿಎಸ್ ಬಸ್ ನಿಲ್ದಾಣ ಹೊರತುಪಡಿಸಿ ಒಂದೇ ಒಂದು ಬಸ್ ತಂಗುದಾಣ ಇಲ್ಲ. ಬಿಆರ್ಟಿಎಸ್ ಬಿಟ್ಟು ಇತರೆ ವಾಹನಗಳ ಮೂಲಕ ನಿತ್ಯ ಸಾವಿರಾರು ವಿದ್ಯಾರ್ಥಿಗಳು, ವೃದ್ಧರು, ಮಹಿಳೆಯರು, ಚಿಕ್ಕ ಮಕ್ಕಳು ಹುಬ್ಬಳ್ಳಿ-ಧಾರವಾಡ ನಡುವೆ ಸಂಚರಿಸುತ್ತಾರೆ. ಇವರೆಲ್ಲ ಬಿಸಿಲಿನಲ್ಲಿಯೇ ನಿಂತು ಬಸ್ಗಾಗಿ ಕಾಯಬೇಕಾದ ಅನಿವಾರ್ಯತೆ ಎದುರಾಗಿದೆ.

ಬಿರು ಬಿಸಿಲಿನಲ್ಲಿ ಕಾಯಬೇಕು:
ಹುಬ್ಬಳ್ಳಿ-ಧಾರವಾಡ ನಡುವಿನ 23 ಕಿಮೀ ರಸ್ತೆಯ ಮಧ್ಯದಲ್ಲಿ (ನಗರ ಹೊರತುಪಡಿಸಿ) ಪ್ರಯಾಣಿಕರಿಗಾಗಿ ಒಂದೇ ಒಂದು ಸೂಕ್ತ ತಂಗುದಾಣ ಇಲ್ಲ. ಖಾಸಗಿ ಮತ್ತು ಸಾಮಾನ್ಯ ಸಾರಿಗೆ ಸಂಸ್ಥೆ ಬಸ್ಗಳಲ್ಲಿ ಕಾಲೇಜು ಹಾಗೂ ಉದ್ಯೋಗ ಸ್ಥಳಕ್ಕೆ ಹೋಗ ಬಯಸುವವರು ರಸ್ತೆಯ ಬದಿಯಲ್ಲಿಯೇ ಗಾಳಿ, ಬಿಸಿಲಿನಲ್ಲಿಯೇ ಕಾಯಬೇಕಾದ ಅನಿವಾರ್ಯತೆ ಎದುರಾಗಿದೆ. ಅಭಿವೃದ್ಧಿಯ ಹೆಸರಿನಲ್ಲಿ ಈಗಾಗಲೇ ಸಾವಿರಾರು ಕೋಟಿ ಹಣವನ್ನು ಸ್ಮಾರ್ಟ್ ಸಿಟಿ ಹಾಗೂ ಬಿಆರ್ಟಿಎಸ್ ಯೋಜನೆಗೆ ಬಳಸಲಾಗಿದೆ. ಆದರೆ ಅದರಲ್ಲಿ ಪ್ರಯಾಣಿಕರ ತಂಗುದಾಣವನ್ನೇಕೆ ನಿರ್ಮಿಸಿಲ್ಲ ಎಂಬ ಪ್ರಶ್ನೆ ಸಾರ್ವಜನಿಕ ವಲಯದಿಂದ ಕೇಳಿ ಬರುತ್ತಿದೆ.

18 ಕಡೆಗಳಲ್ಲಿ ಬಸ್ ತಂಗುದಾಣಗಳ ಅಗತ್ಯ:
ಅವಳಿ ನಗರದ ಮಧ್ಯದಲ್ಲಿ ಸಾಮಾನ್ಯ ನಗರ ಸಾರಿಗೆ ಹಾಗೂ ಖಾಸಗಿ ಬಸ್ಗಳಲ್ಲಿ ಪ್ರಯಾಣಿಸುವರೆಗೆ ಅಂದಾಜು 18 ಕಡೆಗಳಲ್ಲಾದರೂ ಬಸ್ ತಂಗುದಾಣಗಳ ಅಗತ್ಯವಿದೆ. ಧಾರವಾಡದ ಜುಬ್ಲಿ ಸರ್ಕಲ್, ಕೋರ್ಟ್ ಸರ್ಕಲ್, ಎನ್ಟಿಟಿಎಫ್, ಹೊಸ ಯಲ್ಲಾಪುರ, ಟೋಲ್ನಾಕಾ, ಜೆಎಸ್ಎಸ್, ನವಲೂರು ಬ್ರಿಡ್ಜ್, ಎಸ್ಡಿಎಂ, ರಾಯಾಪುರ, ನವನಗರ, ಇಸ್ಕಾನ್, ಕ್ಯಾನ್ಸರ್ ಆಸ್ಪತ್ರೆ, ಎಪಿಎಂಸಿ, ಉಣಕಲ್, ಬಿವಿಬಿ, ವಿದ್ಯಾನಗರ, ಮಹಿಳಾ ವಿದ್ಯಾಪೀಠ, ಹೊಸೂರು ಸೇರಿದಂತೆ ವಿವಿಧ ಪ್ರಮುಖ ಸ್ಥಳಗಳಲ್ಲಿ ಪ್ರಯಾಣಿಕರಿಗೆ ಬಿಸಿಲು, ಮಳೆಯಿಂದ ರಕ್ಷಣೆ ಪಡೆಯಲು ತಾತ್ಕಾಲಿಕ ತಂಗುದಾಣಗಳನ್ನಾದರೂ ನಿರ್ಮಿಸಬೇಕಿದೆ.
ಸದ್ಯ ಹು-ಧಾ ಮಧ್ಯದಲ್ಲಿ ಯಾವುದೇ ತಂಗುದಾಣ ಇಲ್ಲವಾಗಿದ್ದು, ಬಿಸಿಲಿನಲ್ಲಿಯೇ ರಸ್ತೆಯ ಮೇಲೆ ನಿಲ್ಲಬೇಕಾಗಿದೆ. ಅವಳಿ ನಗರದಲ್ಲಿನ ಜನಪ್ರತಿನಿಧಿಗಳು ಹಾಗೂ ಸಾರಿಗೆ ಇಲಾಖೆ ಅಧಿಕಾರಿಗಳು ಈಗಲಾದರೂ ಕಣ್ಣು ತೆರೆದು ಬಸ್ ತಂಗುದಾಣ ನಿರ್ಮಿಸಬೇಕಿದೆ.