ಹುಬ್ಬಳ್ಳಿ: ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ವರುಣನ ಆರ್ಭಟಕ್ಕೆ ಜನಜೀವನ ತತ್ತರಗೊಂಡಿದ್ದು, ಮಹಾನಗರ ಪಾಲಿಕೆ ವಲಯ ಕಚೇರಿ 8, 10 ಹಾಗೂ 11ರ ವ್ಯಾಪ್ತಿಯಲ್ಲಿ ಯಥೇಚ್ಚ ಮಳೆಯಾಗಿ ತಗ್ಗು ಪ್ರದೇಶಗಳ ಮನೆಗಳಿಗೆ ನೀರು ನುಗ್ಗಿದೆ.
ಮಂಟೂರು ರಸ್ತೆಯ ಅರಳಿಕಟ್ಟೆ ಓಣಿಯಲ್ಲಿ 150 ಮನೆಗಳಿಗೆ ನೀರು ನುಗ್ಗಿ ಹಾನಿ ಸಂಭವಿಸಿದೆ. ಪಾಲಿಕೆಯ ವಿಪತ್ತು ನಿರ್ವಹಣಾ ತಂಡದಿಂದ 150 ಕುಟುಂಬಗಳನ್ನು ಹಾನಿ ಪ್ರದೇಶದಿಂದ ಸಮುದಾಯ ಭವನಕ್ಕೆ ಸ್ಥಳಾಂತರಿಸಿ ಗಂಜಿ ಕೇಂದ್ರ ತೆರೆಯಲಾಗಿದೆ.
![Rain](https://etvbharatimages.akamaized.net/etvbharat/prod-images/3644115_thubbli.jpg)
ಎಸ್.ಎಂ.ಕೃಷ್ಣ ನಗರದಲ್ಲಿ ಮಳೆಯಿಂದ ಮೂರು ಮನೆಗಳ ಗೋಡೆ ಕುಸಿದಿದೆ. ಈ ಮೂರು ಕುಟುಂಬಗಳ ಸದಸ್ಯರು ತಮ್ಮ ಸಂಬಂಧಿಕರ ಮನೆಯಲ್ಲಿ ಆಶ್ರಯ ಪಡೆದಿದ್ದಾರೆ.
ನಗರದಲ್ಲಿ ಮಳೆಯಿಂದಾಗಿ ಹಲವೆಡೆ ಮರಗಳು ಧರೆಗೆ ಉರುಳಿದ್ದು, ವಿಪತ್ತು ನಿರ್ವಹಣಾ ತಂಡದಿಂದ ತೆರವು ಕಾರ್ಯಾಚರಣೆ ನಡೆದಿತ್ತು. ಚರಂಡಿಗಳಲ್ಲಿ ತುಂಬಿದ್ದ ಕಸವನ್ನು ತೆರವುಗೊಳಿಸಿ ಮಳೆ ನೀರು ಸರಾಗವಾಗಿ ಹರಿಯುವಂತೆ ಮಾಡಲಾಗಿದೆ.
![Rain](https://etvbharatimages.akamaized.net/etvbharat/prod-images/3644115_hubli.jpg)
ಮಳೆಯಿಂದ ಹಾನಿಗೆ ಒಳಗಾದ ಪ್ರದೇಶದಲ್ಲಿ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಸಂತ್ರಸ್ತರಿಗೆ ಬೇಕಾದ ನೆರವು ನೀಡಲಾಗಿದೆ ಎಂದು ಪಾಲಿಕೆ ಆಯುಕ್ತ ಪ್ರಶಾಂತಕುಮಾರ್ ಮಿಶ್ರಾ ತಿಳಿಸಿದ್ದಾರೆ.
ಶಾಸಕ ಅಬ್ಬಯ್ಯ ಪ್ರಸಾದ್ ಭೇಟಿ:
ಮಳೆಯಿಂದ ಹಾನಿಗೀಡಾದ ಹುಬ್ಬಳ್ಳಿಯ ಪಾಲಿಕೆಯ ವಲಯ ಕಚೇರಿ 8, 10 ಹಾಗೂ 11 ರ ವ್ಯಾಪ್ತಿ ಪ್ರದೇಶಗಳಿಗೆ ಶಾಸಕ ಅಬ್ಬಯ್ಯ ಪ್ರಸಾದ್ ಭೇಟಿ ನೀಡಿ ಪರಿಶೀಲನೆ ನೆಡೆಸಿದರು. ಜೆಸಿಬಿ ತರಿಸಿ, ಮನೆಗಳಿಗೆ ನುಗ್ಗಿದ್ದ ನೀರು ಹರಿದು ಹೋಗುವ ವ್ಯವಸ್ಥೆ ಮಾಡಿದರು. ಅರಳಿಕಟ್ಟಿ ನಿವಾಸಿಗಳಿಗೆ ಸಮೀಪದ ಅಂಬೇಡ್ಕರ್ ಭವನದಲ್ಲಿ ತಾತ್ಕಾಲಿಕ ವಸತಿ ವ್ಯವಸ್ಥೆ ಕಲ್ಪಿಸಿ ರಾತ್ರಿಯ ಊಟದ ವ್ಯವಸ್ಥೆ ಮಾಡುವಂತೆ ಅಧಿಕಾರಿಗಳಿಗೆ ಅವರಿಗೆ ನಿರ್ದೇಶನ ನೀಡಿದರು.
![mla](https://etvbharatimages.akamaized.net/etvbharat/prod-images/3644115_hbl.jpg)
ಸರ್ಕಾರದಿಂದ ಪರಿಹಾರ ಧನ:
ಮಳೆಯಿಂದ ಪೂರ್ಣ ಹಾಗೂ ಭಾಗಶಃ ಹಾನಿಯಾದ ಮನೆ ಹಾಗೂ ಅಂಗಡಿಗಳಿಗೆ ಭೇಟಿ ನೀಡಿದ ಶಾಸಕರು ಸರ್ಕಾರದಿಂದ ಪರಿಹಾರ ಧನ ನೀಡಲಾಗುವುದು ಎಂದು ತಿಳಿಸಿದರು. ಹಳೇ ಹುಬ್ಬಳ್ಳಿ ಮೇದಾರ ಓಣಿ ಹಾಗೂ ಕೌಲ್ ಪೇಟೆ ಹಾನಿ ಪ್ರದೇಶಗಳಿಗೆ ಭೇಟಿ ನೀಡಿದ ಅವರು ಅಧಿಕಾರಿಗಳು ಸ್ಥಳದಲ್ಲೇ ಇದ್ದು ತುರ್ತು ಪರಿಹಾರ ಕಾರ್ಯ ಕೈಗೊಳ್ಳುವಂತೆ ಸೂಚಿಸಿದರು.
ಈ ಸಂದರ್ಭದಲ್ಲಿ ಪಾಲಿಕೆ ಜಂಟಿ ಆಯುಕ್ತ ಅಜೀಜ್ ದೇಸಾಯಿ, ವಲಯ ಅಧಿಕಾರಿಗಳು, ಇತರೆ ಸಿಬ್ಬಂದಿ ಉಪಸ್ಥಿತರಿದ್ದರು.