ಹುಬ್ಬಳ್ಳಿ: ಕೇಂದ್ರ ಸರ್ಕಾರ ಬಾಯಲ್ಲಿ ಮೇಕ್ ಇನ್ ಇಂಡಿಯಾ ಹೇಳುತ್ತೆ. ಆದ್ರೆ ಧ್ವಜಗಳನ್ನು ತರಿಸಿಕೊಳ್ಳುವುದು ಚೀನಾದಿಂದ ಎಂದು ಮಾಜಿ ಸಚಿವೆ ಹಾಗೂ ನಟಿ ಉಮಾಶ್ರೀ ಅವರು ಲೇವಡಿ ಮಾಡಿದರು.
ನಗರದ ಬೆಂಗೇರಿಯ ಖಾದಿ ಗ್ರಾಮೋದ್ಯೋಗ ಕೇಂದ್ರಕ್ಕೆ ಭೇಟಿ ನೀಡಿ ಮಾತನಾಡಿದ ಅವರು, ನಮ್ಮ ರಾಷ್ಟ್ರಧ್ವಜಕ್ಕೆ ತನ್ನದೇ ಆದ ಗೌರವ, ಮೌಲ್ಯ, ಘನತೆ ಇದೆ. ಇದು ನಮ್ಮ ಸ್ವಾಭಿಮಾನದ ಸಂಕೇತವಾಗಿದೆ. ನಮ್ಮ ರಾಷ್ಟ್ರ ಧ್ವಜವನ್ನು ಹೊರದೇಶದವರು ಸಿದ್ಧಪಡಿಸಬಾರದು. ಇದು ನಿಜಕ್ಕೂ ಬೇಸರದ ಸಂಗತಿ. ಕೇಂದ್ರ ಸರ್ಕಾರಕ್ಕೆ ಇದೇನಾ ದೇಶಾಭಿಮಾನ? ಎಂದು ಪ್ರಶ್ನೆ ಹಾಕಿ ಇವರ ರಾಷ್ಟ್ರಗೀತೆನೇ ಬೇರೆ, ಧ್ವಜನೇ ಬೇರೆ. ಇವರ ಆರ್ಎಸ್ಎಸ್ ಧ್ವಜವೇ ಬೇರೆ ಇದೆ ಎಂದು ಕಿಡಿಕಾರಿದರು.
ಬಾಯಲ್ಲಿ ಮೇಕ್ ಇನ್ ಇಂಡಿಯಾ, ಧ್ವಜಗಳನ್ನ ತರಿಸಿಕೊಳ್ಳುವುದು ಚೀನಾದಿಂದ. ಪಾಲಿಸ್ಟರ್ ಬಟ್ಟೆಯ ಧ್ವಜವನ್ನೇ ಬಳಸಬಹುದು ಎನ್ನುವ ಚಿಂತನೆ ರಾಷ್ಟ್ರದ್ರೋಹ ಮಾಡಿದಂತಾಗಿದೆ. ರಾಷ್ಟ್ರ ಧ್ವಜವನ್ನ ಹೊರದೇಶದಿಂದ ತರಿಸಿಕೊಳ್ಳುವುದು ಸರಿಯಲ್ಲ. ಇದನ್ನು ಕೈಬಿಡಬೇಕು ಎಂದು ಉಮಾಶ್ರೀ ಆಗ್ರಹಿಸಿದರು.
ದೇಶದಲ್ಲಿರುವ ರಾಷ್ಟ್ರಧ್ವಜ ತಯಾರಕ ಘಟಕದಿಂದ ಧ್ವಜಗಳನ್ನ ತರಿಸಿಕೊಂಡಿದ್ದರೆ ಅದರ ಮೌಲ್ಯ ಹೆಚ್ಚುತ್ತಿತ್ತು. ಈ ಆದೇಶವನ್ನ ತಕ್ಷಣ ವಾಪಸ್ ಪಡೆಯಬೇಕು. ಈಗಾಗಲೇ ನಾವು ಎಲ್ಲ ಬಗೆಯ ಆಗ್ರಹ ಮಾಡಿದ್ದೇವೆ. ರಾಷ್ಟ್ರದ ಭಕ್ತಿ ಮಾತಿನಲ್ಲಿ ಬೇಡ. ಕೃತಿಯಲ್ಲಿ ಮಾಡಿ ತೋರಿಸಿ ಎಂದು ಒತ್ತಾಯಿಸಿದರು.