ಧಾರವಾಡ: ಜಿಲ್ಲೆಯಲ್ಲಿ ಅತಿವೃಷ್ಟಿ ಹಾಗೂ ಪ್ರವಾಹದಿಂದ ಹಾನಿಗೊಳಗಾಗಿರುವ ವಿವಿಧ ಪ್ರದೇಶಗಳಿಗೆ ಕೇಂದ್ರ ಅಧ್ಯಯನ ತಂಡವು ಭೇಟಿ ನೀಡಿ ಪರಿಶೀಲನೆ ನಡೆಸಿತು.
ಧಾರವಾಡ ತಾಲೂಕಿನ ಹಾರೋಬೆಳವಡಿ ಮತ್ತು ಅಮ್ಮಿನಬಾವಿ ಗ್ರಾಮದ ಹಾನಿಗೊಳಗಾದ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಮಾಹಿತಿ ಪಡೆದುಕೊಂಡರು. ಕೇಂದ್ರ ಕೃಷಿ ಹಾಗೂ ರೈತರ ಸಹಕಾರ ಮಾರುಕಟ್ಟೆ ಮಂತ್ರಾಲಯದ ಎಣ್ಣೆಬೀಜ ಅಭಿವೃದ್ಧಿ ನಿರ್ದೇಶನಾಲಯದ ನಿರ್ದೇಶಕ ಡಾ.ಮನೋಹರನ್ ಹಾಗೂ ಕೇಂದ್ರ ಜಲಶಕ್ತಿ ಮಂತ್ರಾಲಯದ ಅಕ್ಷಕ ಎಂಜಿನಿಯರ್ ಗುರುಪ್ರಸಾದ್ ಜೆ., ಕಂದಾಯ ಇಲಾಖೆಯ ಕೆಎಸ್ಡಿಎಮ್ಎ ವಿಭಾಗೀಯ ವ್ಯವಸ್ಥಾಪಕ ಡಾ.ಜಿ.ಎಸ್. ಶ್ರೀನಿವಾಸ ಅವರನ್ನೊಳಗೊಂಡ ಎರಡನೇ ತಂಡವು ಜಿಲ್ಲೆಯ ಮಳೆ ಹಾನಿ ಪರಿಸ್ಥಿತಿಯ ಕುರಿತು ಅಧ್ಯಯನ ಮಾಡಿತು.
ಧಾರವಾಡ ಗಡಿ ಭಾಗದ ಹಾರೋಬೆಳವಡಿ ಗ್ರಾಮದಲ್ಲಿ ಕೊಚ್ಚಿ ಹೋಗಿರುವ ತಾತ್ಕಾಲಿಕ ಸೇತುವೆ ಹಾಗೂ ಉಂಟಾಗಿರುವ ಬೆಳೆಹಾನಿ ವೀಕ್ಷಣೆ ಮಾಡಿತು. ತಂಡವು ಹೆಸರು ಕಾಳು ಹಾಗೂ ಸೋಯಾಬಿನ್ ಬೆಳೆಹಾನಿ ಪರಿಶೀಲನೆ ನಡೆಸಿತು. ಅಮ್ಮಿನಭಾವಿ ಗ್ರಾಮದ ವ್ಯಾಪ್ತಿಯ ವಿವಿಧ ರೈತರ ಜಮೀನುಗಳಲ್ಲಿ ಈರುಳ್ಳಿ, ಹೆಸರುಕಾಳು ಬೆಳೆಹಾನಿ ಪರಿಶೀಲಿಸಿ ರೈತರ ಸಂಕಷ್ಟ ಆಲಿಸಿದರು.