ಹುಬ್ಬಳ್ಳಿ: ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಸರ್ಕಾರ ಬಹುಮತ ಕಳೆದುಕೊಂಡು ಪತನವಾಗಿದ್ದು, ಬಿ.ಎಸ್.ಯಡಿಯೂರಪ್ಪ ನಾಲ್ಕನೆಯ ಬಾರಿಗೆ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುತ್ತಿರುವ ಹಿನ್ನೆಲೆಯಲ್ಲಿ ಬಸವರಾಜ ಹೊರಟ್ಟಿಯವರಿಗೆ ಆಹ್ವಾನ ನೀಡಿದ್ದಾರೆ.
ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿಲಿರುವ ಯಡಿಯೂರಪ್ಪ, ಮಾಜಿ ಸಭಾಪತಿ ಹಾಗೂ ವಿಧಾನ ಪರಿಷತ್ ಸದಸ್ಯರಾದ ಬಸವರಾಜ ಹೊರಟ್ಟಿಯವರಿಗೆ ಪ್ರಮಾಣ ವಚನಕ್ಕೆ ಆಗಮಿಸುವಂತೆ ಖುದ್ದು ಫೋನ್ ಕರೆ ಮಾಡಿ ಆಹ್ವಾನ ನೀಡಿರುವುದು ರಾಜ್ಯ ರಾಜಕಾರಣದಲ್ಲಿ ಹೊಸ ಕುತೂಹಲ ಸೃಷ್ಟಿಸುತ್ತಿದೆ. ದೂರವಾಣಿ ಮೂಲಕ ಬಸವರಾಜ ಹೊರಟ್ಟಿ ಅವರನ್ನು ಸಂಪರ್ಕಿಸಿದ ಯಡಿಯೂರಪ್ಪ ಕೂಡಲೇ ತಮ್ಮ ಕುಟುಂಬ ಸಮೇತವಾಗಿ ಪ್ರಮಾಣ ವಚನ ಕಾರ್ಯಕ್ರಮಕ್ಕೆ ಆಗಮಿಸುವಂತೆ ಆಹ್ವಾನಿಸಿದ್ದಾರೆ.
ಆಹ್ವಾನವನ್ನು ಮನ್ನಿಸಿದ ಹೊರಟ್ಟಿ, ಯಡಿಯೂರಪ್ಪ ಅವರಿಗೆ, ದೇವರು ಒಳ್ಳೆಯದು ಮಾಡಲಿ, ನಿಮ್ಮ ನಡೆ ಮುಳ್ಳಿನ ಹಾದಿಯಂತಿದೆ ಎಂದು ಕಿವಿ ಮಾತು ಹೇಳಿದರು. ನಾನು ಹುಬ್ಬಳ್ಳಿಯಲ್ಲಿದ್ದೇನೆ ಬರಲು ಪ್ರಯತ್ನ ಮಾಡುತ್ತೇನೆ ಎಂದು ಹೊರಟ್ಟಿ ಹೇಳಿದ್ದಾರೆ.