ಹುಬ್ಬಳ್ಳಿ: ಸಿಸಿಬಿ ವಿಭಾಗದಲ್ಲಿ ಕೆಲಸ ಮಾಡುತ್ತಿರುವ ಪಿಎಸ್ಐ, ಎಸ್.ಎಂ. ಕಾಲವಾಡ ಮೇಲೆ ಕಾನೂನು ಬಾಹಿರ ಚಟುವಟಿಕೆಯಲ್ಲಿ ಭಾಗಿಯಾಗಿರುವ ಹಾಗೂ ಆರೋಪಿಗಳಿಗೆ ಗೌಪ್ಯ ಮಾಹಿತಿ ಹಂಚುತ್ತಿರುವ ಆರೋಪ ಕೇಳಿ ಬಂದಿದೆ. ಕಾಲವಾಡ ಅವರ ಮೇಲೆ ಇಲಾಖಾ ವಿಚಾರಣೆ ಬಾಕಿ ಇರಿಸಿ, ಈ ಕೂಡಲೇ ಅವರನ್ನು ಧಾರವಾಡ ಸಂಚಾರ ಪೊಲೀಸ್ ಠಾಣೆಗೆ ನೇಮಿಸಲಾಗಿದೆ.

ಧಾರವಾಡದ ವಿದ್ಯಾಗಿರಿ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಅಲ್ತಾಫ್ ಹುಸೇನ್ ಮುಲ್ಲಾ ಅವರಿಗೆ ಪೂರ್ವಭಾವಿ ವಿಚಾರಣೆ ನಡೆಸಲು ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತ ಆರ್. ದಿಲೀಪ್ ಸೂಚಿಸಿದ್ದಾರೆ. ಹುಬ್ಬಳ್ಳಿ-ಧಾರವಾಡ ಸಿಸಿಬಿ ಪೊಲೀಸರ ಮೇಲೆ ಇಂತಹ ಗಂಭೀರವಾದ ಆಪಾದನೆ ಕೇಳಿ ಬಂದ ಹಿನ್ನಲೆಯಲ್ಲಿ ಹೊಸ ತಂಡ ರಚನೆಗೆ ಡಿಸಿಪಿ ಡಿ.ಎಲ್. ನಾಗೇಶ ಅವರಿಗೆ ಪೊಲೀಸ್ ಆಯುಕ್ತರು ಆದೇಶಿಸಿದ್ದಾರೆ.
ಇನ್ನು ಪ್ರಸ್ತುತ ಇರುವ ಸಿಸಿಬಿ ಸಿಬ್ಬಂದಿಯನ್ನು ಬೇರೆ ಬೇರೆ ಠಾಣೆಗಳಿಗೆ ನಿಯೋಜಿಸಿ, ಸಂಘಟಿತ ಅಪರಾಧ ತಡೆಗಟ್ಟಲು ಮುಂದಾಗಿದ್ದಾರೆ.